
Five State Election 2026| ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ
ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಬಹಿರಂಗ ಪ್ರಚಾರ ಇಂದು ಅಂತ್ಯಗೊಳ್ಳಲಿದೆ. ತಮಿಳುನಾಡಿನಲ್ಲಿ ಬಿಜೆಪಿಯ ವಿಜಯಧರಣಿ ಮತ್ತು ಎಐಎಡಿಎಂಕೆಯ ವಿಜಯಭಾಸ್ಕರ್ ನಾಮಪತ್ರ ಸಲ್ಲಿಸಿದ್ದಾರೆ.
ಏಪ್ರಿಲ್ 9 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಳ ಅಬ್ಬರದ ಪ್ರಚಾರಕ್ಕೆ ಇಂದು (ಏಪ್ರಿಲ್ 7, ಮಂಗಳವಾರ) ಸಂಜೆ ತೆರೆ ಬೀಳಲಿದೆ. ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿವೆ.
ಕೇರಳ, ಅಸ್ಸಾಂ ಮತ್ತು ಪುದುಚೇರಿ: ಇಂದು ಪ್ರಚಾರ ಅಂತ್ಯ
ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ (LDF), ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನಡುವೆ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎಲ್ಡಿಎಫ್ ತನ್ನ ಪ್ರಣಾಳಿಕೆಯ ಶೇ. 97 ರಷ್ಟು ಭರವಸೆಗಳನ್ನು ಈಡೇರಿಸಿದೆ ಎಂದು ವರದಿ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಆಲಪ್ಪುಳದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಕೇಸರಿ ಪಡೆಯ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಸ್ಸಾಂನಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದ ಶಾಂತಿ ಮತ್ತು ಅಭಿವೃದ್ಧಿ ಮುಂದುವರಿಯಬೇಕಾದರೆ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಿ ಎಂದು ಕರೆ ನೀಡಿದ್ದಾರೆ. ಅಸ್ಸಾಂನ ಎಲ್ಲಾ 126 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಏಪ್ರಿಲ್ 9 ರಂದು ಕೇರಳದ 140, ಅಸ್ಸಾಂನ 126 ಮತ್ತು ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ತಮಿಳುನಾಡು ಚುನಾವಣೆ 2026: ನಾಮಪತ್ರ ಸಲ್ಲಿಕೆ ಚುರುಕು
ತಮಿಳುನಾಡಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಮುಖ ನಾಯಕರು ನಾಮಪತ್ರ ಸಲ್ಲಿಕೆಯಲ್ಲಿ ತೊಡಗಿದ್ದಾರೆ.ಮಾಜಿ ಸಚಿವ ಮತ್ತು ಎಐಎಡಿಎಂಕೆ ನಾಯಕ ಸಿ. ವಿಜಯಭಾಸ್ಕರ್ ಅವರು ಸೋಮವಾರ ವಿರಾಲಿಮಲೈ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಸಿದರು. ಜನರ ಆಶೀರ್ವಾದ ಮತ್ತು ಕಾರ್ಯಕರ್ತರ ಬೆಂಬಲದೊಂದಿಗೆ ತಮಗೆ ಭರ್ಜರಿ ಜಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ವಿಜಯಧರಣಿ ಅವರು ವಿಲಾವಂಕೋಡ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಕಳೆದ 13 ವರ್ಷಗಳಲ್ಲಿ ಈ ಭಾಗಕ್ಕೆ 1,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ತಂದಿರುವುದಾಗಿ ಹೇಳಿಕೊಂಡಿರುವ ಅವರು, ತಮ್ಮ ಗೆಲುವು "ನೂರಕ್ಕೆ ನೂರು" ಖಚಿತ ಎಂದಿದ್ದಾರೆ.

