
Annamalai TN Election|ಕೈತಪ್ಪಿದ ಟಿಕೆಟ್- ಮೌನ ಮುರಿದು ಸ್ಪಷ್ಟನೆ ನೀಡಿದ ಅಣ್ಣಾಮಲೈ
ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ. ಅಣ್ಣಾಮಲೈ ಹೆಸರಿಲ್ಲದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ ಬಗ್ಗೆ ಎದ್ದಿದ್ದ ನಾನಾ ಊಹಾಪೋಹಗಳಿಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಶುಕ್ರವಾರ ತೆರೆ ಎಳೆದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರ ಸಂಪೂರ್ಣವಾಗಿ ತಮ್ಮದೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೊಯಮತ್ತೂರಿನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಪಕ್ಷದ ಹೈಕಮಾಂಡ್ಗೆ ಲಿಖಿತವಾಗಿ ತಿಳಿಸಿದ್ದೆ. ಹಾಗಾಗಿ, ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬ ವಾದದಲ್ಲಿ ಸತ್ಯವಿಲ್ಲ. ನಾನೇ ಸ್ಪರ್ಧಿಸಲು ಬಯಸಿಲ್ಲ ಎಂಬುದು ನಿಜ," ಎಂದು ಹೇಳಿದರು.
ನಾಯಕತ್ವದ ನಿರ್ಧಾರಕ್ಕೆ ಗೌರವ
ತಮ್ಮ ಹೆಸರನ್ನು ಕೈಬಿಟ್ಟಿರುವ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಉತ್ತರಿಸಿದ ಅವರು, "ನಾನೇ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಮೇಲೆ ಪಕ್ಷದ ನಾಯಕತ್ವ ನನಗೆ ಟಿಕೆಟ್ ಹಂಚಿಕೆ ಮಾಡುವುದು ಹೇಗೆ ಸಾಧ್ಯ? ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿರುವ ಕಾರಣ ನಾನು ಸ್ಪಷ್ಟನೆ ನೀಡುತ್ತಿದ್ದೇನೆ," ಎಂದರು. ಅಲ್ಲದೆ, ತಮ್ಮ ನಿರ್ಧಾರವನ್ನು ಗೌರವಿಸಿ, ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಅವಕಾಶ ನೀಡಿದ ಪಕ್ಷದ ಕೇಂದ್ರ ನಾಯಕತ್ವಕ್ಕೆ ಅವರು ಧನ್ಯವಾದ ಅರ್ಪಿಸಿದರು.
ಪ್ರಧಾನಿ ಮೋದಿ ಭೇಟಿ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ತಮಿಳುನಾಡು ಭೇಟಿಯ ಬಗ್ಗೆ ಮಾಹಿತಿ ನೀಡಿದ ಅಣ್ಣಾಮಲೈ, ಪುದುಚೇರಿಯಲ್ಲಿ ಪ್ರಚಾರ ಮುಗಿಸಿದ ನಂತರ ಪ್ರಧಾನಿಗಳು ಚೆನ್ನೈನಲ್ಲಿ ಪಕ್ಷದ ಪದಾಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಆ ಬಳಿಕ ಕೇರಳದ ಕೊಚ್ಚಿಗೆ ತೆರಳಿ ಅಲ್ಲಿ ಎನ್ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.
ಅಸಮಾಧಾನದ ವದಂತಿ
AIADMK ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 27 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಅಣ್ಣಾಮಲೈ ಅವರ ಅನುಪಸ್ಥಿತಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಮೂಲಗಳ ಪ್ರಕಾರ, ಕೊಯಮತ್ತೂರು ಭಾಗದ ಸೀಟು ಹಂಚಿಕೆಯ ವಿಚಾರದಲ್ಲಿ ಅಣ್ಣಾಮಲೈ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ವಿಶೇಷವಾಗಿ ಬಿಜೆಪಿಯ ಭದ್ರಕೋಟೆಯೆಂದು ಪರಿಗಣಿಸಲಾದ ಸಿಂಗಾನಲ್ಲೂರು ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಎಡಪ್ಪಾಡಿ ಕೆ. ಪಳನಿಸ್ವಾಮಿ ನಿರಾಕರಿಸಿದ್ದು ಇದಕ್ಕೆ ಕಾರಣ ಎಂದು ಹೇಳಲಾಗಿತ್ತು.
ಆದರೆ, ಈ ಎಲ್ಲಾ ವದಂತಿಗಳನ್ನು ತಳ್ಳಿಹಾಕಿರುವ ಅಣ್ಣಾಮಲೈ, ತಾವು ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ರಾಜ್ಯಾದ್ಯಂತ ಸಕ್ರಿಯವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಮತದಾನ ನಡೆಯಲಿದೆ.

