ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ನಿಷೇಧಾಜ್ಞೆ ಜಾರಿ, ಪರಿಸ್ಥಿತಿ ಉದ್ವಿಗ್ನ
x
ಮಣಿಪುರದಲ್ಲಿ ಮತ್ತೆ ಭುಗಿಲೆದ್ಧ ಹಿಂಸಾಚಾರ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ನಿಷೇಧಾಜ್ಞೆ ಜಾರಿ, ಪರಿಸ್ಥಿತಿ ಉದ್ವಿಗ್ನ

ಮಣಿಪುರದ ಉಖ್ರುಲ್ ಜಿಲ್ಲೆಯ ಲಿಟನ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆದಿದೆ. 163ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


Click the Play button to hear this message in audio format

ಮಣಿಪುರದ ಉಖ್ರುಲ್ ಜಿಲ್ಲೆಯ ಲಿಟನ್ ಗ್ರಾಮದಲ್ಲಿ ಎರಡು ಬುಡಕಟ್ಟು ಗುಂಪುಗಳ ನಡುವೆ ಭೀಕರ ಘರ್ಷಣೆ ಸಂಭವಿಸಿದ್ದು, ಪರಿಸ್ಥಿತಿ ಹತೋಟಿಗೆ ತರಲು ಜಿಲ್ಲಾಡಳಿತವು ಅನಿರ್ದಿಷ್ಟಾವಧಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಶನಿವಾರ ರಾತ್ರಿ ತಂಗ್ಖುಲ್ ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆಯ ಪ್ರಕರಣವು ಈ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ.

ಹಿಂಸಾಚಾರಕ್ಕೆ ಕಾರಣವೇನು?

ಮಣಿಪುರದ ಉಖ್ರುಲ್ ಜಿಲ್ಲೆಯ ಲಿಟನ್ ಎಂಬ ಗ್ರಾಮದಲ್ಲಿ ಭಾನುವಾರ ಸಂಜೆ ಎರಡು ಬುಡಕಟ್ಟು ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆದಿದೆ. ಶನಿವಾರ ರಾತ್ರಿ ಲಿಟನ್ ಗ್ರಾಮದಲ್ಲಿ ತಂಗ್ಖುಲ್ ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಏಳೆಂಟು ಜನರು ಹಲ್ಲೆ ನಡೆಸಿದ್ದ ಘಟನೆಯೇ ಈ ಹಿಂಸಾಚಾರಕ್ಕೆ ಮೂಲ ಕಾರಣ ಎನ್ನಲಾಗಿದೆ. ಈ ವಿಚಾರವನ್ನು ಸ್ಥಳೀಯ ಸಂಪ್ರದಾಯದಂತೆ ಬಗೆಹರಿಸಿಕೊಳ್ಳಲು ನಿರ್ಧರಿಸಲಾಗಿತ್ತು, ಆದರೆ ಭಾನುವಾರ ನಿಗದಿಯಾಗಿದ್ದ ಸಭೆಗೆ ಸಂತ್ರಸ್ತ ಕುಟುಂಬ ಗೈರಾದ ಬೆನ್ನಲ್ಲೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಕಲ್ಲು ತೂರಾಟ ಮತ್ತು ಗುಂಡಿನ ಚಕಮಕಿ

ಭಾನುವಾರ ಸಂಜೆ ಗುಂಪುಗಳ ನಡುವೆ ತೀವ್ರ ಕಲ್ಲು ತೂರಾಟ ನಡೆದಿದೆ. ಹತ್ತಿರದ ಶಿಕಿಬುಂಗ್ ಗ್ರಾಮದ ಜನರು ಲಿಟನ್ ಗ್ರಾಮದ ಮುಖ್ಯಸ್ಥರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಪೊಲೀಸ್ ಠಾಣೆಯ ಹತ್ತಿರ ಹಲವಾರು ಸುತ್ತು ಗುಂಡಿನ ದಾಳಿ ನಡೆಸಿದ್ದರಿಂದ ಜನರಲ್ಲಿ ತೀವ್ರ ಆತಂಕ ಉಂಟಾಗಿದೆ.

ಪೊಲೀಸರ ಕ್ರಮ

ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಪಡೆಗಳು ಅಶ್ರುವಾಯು ಬಳಸಬೇಕಾಯಿತು. ಸದ್ಯ ಉಖ್ರುಲ್ ಜಿಲ್ಲಾಧಿಕಾರಿ ಆಶಿಶ್ ದಾಸ್ ಅವರು ಫೆಬ್ರವರಿ 8ರ ಸಂಜೆ 7 ಗಂಟೆಯಿಂದ ಜಾರಿಗೆ ಬರುವಂತೆ ಲಿಟನ್ ಪ್ರದೇಶದಾದ್ಯಂತ ಅನಿರ್ದಿಷ್ಟಾವಧಿ ನಿಷೇಧಾಜ್ಞೆ (BNSS ಸೆಕ್ಷನ್ 163) ಜಾರಿಗೆ ತಂದಿದ್ದಾರೆ. ಜನರು ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ರಾಜ್ಯಾದ್ಯಂತ ಬಿಗಿ ಭದ್ರತೆ

ಮಣಿಪುರದ ಇತರ ಭಾಗಗಳಲ್ಲೂ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿವೆ. ಸುಲಿಗೆ ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ PREPAK ಮತ್ತು KYKL ಎಂಬ ಸಶಸ್ತ್ರ ಬಂಡುಕೋರ ಗುಂಪುಗಳಿಗೆ ಸೇರಿದ ನಾಲ್ವರನ್ನು ಇಂಫಾಲ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ.

ಇಂಡೋ-ಮ್ಯಾನ್ಮಾರ್ ಗಡಿ ಭಾಗದ ತೆಂಗ್ನೌಪಾಲ್ ಜಿಲ್ಲೆಯಲ್ಲಿ ಮೋರ್ಟಾರ್ ಮತ್ತು ಸುಧಾರಿತ ಸ್ಫೋಟಕಗಳನ್ನು (IED) ವಶಪಡಿಸಿಕೊಳ್ಳಲಾಗಿದ್ದು, ಬಾಂಬ್ ವಿಲೇವಾರಿ ತಂಡವು ಅವುಗಳನ್ನು ಯಶಸ್ವಿಯಾಗಿ ನಾಶಪಡಿಸಿದೆ. ಅಗತ್ಯ ವಸ್ತುಗಳನ್ನು ಹೊತ್ತ ವಾಹನಗಳಿಗೆ ಭದ್ರತೆ ನೀಡಲು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಹದ್ದಿನ ಕಣ್ಣು ಇಡಲಾಗಿದೆ.

Read More
Next Story