
ದೆಹಲಿಯಲ್ಲಿ ಮತ್ತೆ ಮೃತ್ಯುಕೂಪಕ್ಕೆ ಬಲಿಯಾದ ಕಾರ್ಮಿಕ
ದೆಹಲಿಯ ರೋಹಿಣಿಯಲ್ಲಿ ತೆರೆದ ಚರಂಡಿಗೆ ಬಿದ್ದು ಬಿಹಾರ ಮೂಲದ ಕಾರ್ಮಿಕ ಬಿರ್ಜು ಕುಮಾರ್ (30) ಮೃತಪಟ್ಟಿದ್ದಾರೆ. ಜನಕಪುರಿ ದುರಂತದ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದಾರೆ.
ದೆಹಲಿಯ ರೋಹಿಣಿಯಲ್ಲಿ ಮಂಗಳವಾರ ಸಂಜೆ ತೆರೆದ ಚರಂಡಿಗೆ ಬಿದ್ದ ಕಾರ್ಮಿಕ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ದೆಹಲಿಯ ಜನಕಪುರಿಯಲ್ಲಿ ಗುಂಡಿಗೆ ಬಿದ್ದು ಬೈಕ್ ಸವಾರ ಮೃತಪಟ್ಟ ಕೆಲವೇ ದಿನಗಳಲ್ಲಿ ಈ ಎರಡನೇ ದುರಂತ ಸಂಭವಿಸಿದೆ.
ಘಟನೆಯ ವಿವರ
ರೋಹಿಣಿಯ ಸೆಕ್ಟರ್ 32ರಲ್ಲಿರುವ ಮಹಾಶಕ್ತಿ ಕಾಳಿ ದೇಗುಲದ ಬಳಿ ಈ ಘಟನೆ ನಡೆದಿದೆ. ಮೃತನನ್ನು ಬಿಹಾರ ಮೂಲದ ಕಾರ್ಮಿಕ ಬಿರ್ಜು ಕುಮಾರ್ (30) ಎಂದು ಗುರುತಿಸಲಾಗಿದೆ. ಡಿಡಿಎ (DDA) ವ್ಯಾಪ್ತಿಗೆ ಬರುವ ಜಾಗದಲ್ಲಿರುವ ಆಳವಾದ ಒಳಚರಂಡಿಗೆ ಈತ ಆಕಸ್ಮಿಕವಾಗಿ ಜಾರಿ ಬಿದ್ದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ದೆಹಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ನಂತರ ಯುವಕ ಮೃತಪಟ್ಟಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರಾಜಕೀಯ ವಾಗ್ದಾಳಿ
ಈ ಸಾವಿನ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ (AAP) ಮತ್ತು ಬಿಜೆಪಿ ನಡುವೆ ವಾಗ್ವಾದ ಶುರುವಾಗಿದೆ. ಎಎಪಿ ಶಾಸಕ ಸೌರಭ್ ಭಾರದ್ವಾಜ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, "ಬಿಜೆಪಿ ನೇತೃತ್ವದ ಸರ್ಕಾರಗಳು ಆಡಳಿತಕ್ಕಿಂತ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ" ಎಂದು ಆರೋಪಿಸಿದ್ದಾರೆ. ಡಿಡಿಎ ಕೇಂದ್ರದ ಅಧೀನದಲ್ಲಿರುವುದರಿಂದ ಈ ಸಾವಿಗೆ ಅವರೇ ನೇರ ಹೊಣೆ ಎಂದು ಆಪ್ ದೂರಿದೆ.
ಜನಕಪುರಿ ದುರಂತದ ನೆನಪು: ಈ ಇತ್ತೀಚಿನ ಸಾವು ರಾಜಧಾನಿಯ ತೆರೆದ ಚರಂಡಿಗಳು ಮತ್ತು ನಿರ್ಮಾಣ ಸ್ಥಳಗಳ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆ ಎತ್ತುವಂತೆ ಮಾಡಿದೆ. ಕಳೆದ ವಾರವಷ್ಟೇ ಜನಕಪುರಿಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕ ಕಮಲ್ ಧಿಯಾನಿ ಎಂಬುವವರು ದೆಹಲಿ ಜಲ ಮಂಡಳಿ ತೋಡಿದ್ದ ಗುಂಡಿಗೆ ಬೈಕ್ ಸಮೇತ ಬಿದ್ದು ಮೃತಪಟ್ಟಿದ್ದರು. ಆ ಸ್ಥಳದಲ್ಲಿ ಸರಿಯಾದ ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕಗಳನ್ನು ಹಾಕಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರು ಇಂಜಿನಿಯರ್ಗಳನ್ನು ಅಮಾನತುಗೊಳಿಸಲಾಗಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ರೋಹಿಣಿಯ ಈ ಭಾಗದಲ್ಲಿ ಚರಂಡಿಗಳು ದೀರ್ಘಕಾಲದಿಂದ ತೆರೆದ ಸ್ಥಿತಿಯಲ್ಲಿದ್ದವು. ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ರಾತ್ರಿಯ ವೇಳೆ ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ರಸ್ತೆಯ ಪಕ್ಕದಲ್ಲಿರುವ ಈ ಆಳವಾದ ಹೊಂಡಗಳು ಜನರಿಗೆ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ಬಿರ್ಜು ಕುಮಾರ್ ಬಿದ್ದಾಗ ಅವರ ಜೊತೆಗಿದ್ದ ಮತ್ತೊಬ್ಬ ಕಾರ್ಮಿಕ ಕಿರುಚಾಡಿದರೂ, ಚರಂಡಿಯ ಆಳ ಹೆಚ್ಚಿದ್ದರಿಂದ ತಕ್ಷಣವೇ ರಕ್ಷಿಸಲು ಸಾಧ್ಯವಾಗಲಿಲ್ಲ.

