
ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಸಂಪ್ರದಾಯವನ್ನು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿತ್ತು.
ಮಹಿಳೆಯರಿಗೆ ಪ್ರವೇಶ ನಿಷೇಧ ಮುಂದುವರಿಸಲು ಶಬರಿಮಲೆ ದೇವಸ್ವಂ ಮಂಡಳಿ ನಿರ್ಧಾರ
ಈ ವಿಷಯದಲ್ಲಿ ಮಂಡಳಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ದೇವಾಲಯ ಹಾಗೂ ಅದರ ಸಂಪ್ರದಾಯಗಳ ರಕ್ಷಣೆಯನ್ನು ಕಡ್ಡಾಯಗೊಳಿಸುವ ನಿಯಮಗಳ ಅಡಿಯಲ್ಲಿ ಟಿಡಿಬಿಯನ್ನು ರಚಿಸಲಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಋತುಮತಿಯಾದ ಮಹಿಳೆಯರು ಪ್ರವೇಶ ಕುರಿತಂತೆ, ಪ್ರಸ್ತುತ ಇರುವ ಸಂಪ್ರದಾಯಗಳನ್ನೇ ಮುಂದುವರಿಸಬೇಕೆಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಾಗುವುದು ಎಂದು ಟಿಡಿಬಿ ಸೋಮವಾರ (ಮಾರ್ಚ್ 2) ಸ್ಪಷ್ಟಪಡಿಸಿದೆ. ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ್ದ ತೀರ್ಪನ್ನು ಮಂಡಳಿಯು ಬೆಂಬಲಿಸುವುದಿಲ್ಲ ಎಂದು ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಂಡಳಿಯ ನಿರ್ಧಾರವೇನು?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಕುಮಾರ್, ಮಂಡಳಿಯ ಸಭೆಯಲ್ಲಿ ಅಫಿಡವಿಟ್ ಸಲ್ಲಿಸುವ ಕುರಿತು ಚರ್ಚಿಸಲಾಗಿದ್ದು, ಪ್ರಸ್ತುತ ಸಂಪ್ರದಾಯವನ್ನೇ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
"ಈ ವಿಷಯದಲ್ಲಿ ಮಂಡಳಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ದೇವಾಲಯ ಹಾಗೂ ಅದರ ಸಂಪ್ರದಾಯಗಳ ರಕ್ಷಣೆಯನ್ನು ಕಡ್ಡಾಯಗೊಳಿಸುವ ನಿಯಮಗಳ ಅಡಿಯಲ್ಲಿ ಟಿಡಿಬಿಯನ್ನು ರಚಿಸಲಾಗಿದೆ. ಆದ್ದರಿಂದ, ನಾವು ಸುಪ್ರೀಂ ಕೋರ್ಟ್ ನಿರ್ಧಾರವನ್ನು ಪ್ರಶ್ನಿಸುತ್ತೇವೆ" ಎಂದು ಮಹಿಳೆಯರ ಪ್ರವೇಶ ವಿಚಾರವನ್ನು ಉಲ್ಲೇಖಿಸಿ ಅವರು ಹೇಳಿದರು.
ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ಕುರಿತಾದ ಸಂಪ್ರದಾಯ ಮುಂದುವರಿಯಬೇಕು ಎಂದು ಮಂಡಳಿ ನಿರ್ಧರಿಸಿದೆ. "ಈ ನಿರ್ಧಾರವನ್ನು ಮಾರ್ಚ್ 14 ರೊಳಗೆ ಸುಪ್ರೀಂ ಕೋರ್ಟ್ಗೆ ತಿಳಿಸಬೇಕಿದೆ. ನ್ಯಾಯಾಲಯಕ್ಕೆ ತಿಳಿಸಲು ಸಂಬಂಧಪಟ್ಟ ವ್ಯಕ್ತಿಗಳನ್ನು ನೇಮಿಸಲು ನಾವು ನಿರ್ಧರಿಸಿದ್ದೇವೆ" ಎಂದು ಅವರು ಮಾಹಿತಿ ನೀಡಿದರು.
2018ರ ತೀರ್ಪಿನ ಹಿನ್ನೆಲೆ
2018ರ ತೀರ್ಪಿಗೆ ಮಂಡಳಿಯ ಬೆಂಬಲವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಜಯಕುಮಾರ್, "ಈಗಾಗಲೇ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಲಾಗುವುದು" ಎಂದರು. ಸಂಪ್ರದಾಯಗಳನ್ನು ರಕ್ಷಿಸಬೇಕು ಮತ್ತು ಪಾಲಿಸಬೇಕು ಎಂಬುದು ದೇವಸ್ವಂನ ಏಕೈಕ ನಿಲುವು ಎಂದು ಅವರು ಪುನರುಚ್ಚರಿಸಿದರು.
2018ರಲ್ಲಿ, ಶಬರಿಮಲೆ ದೇವಾಲಯಕ್ಕೆ ಋತುಮತಿಯಾದ ಮಹಿಳೆಯರು ಪ್ರವೇಶಿಸಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿತ್ತು. ಈ ವಿಷಯದ ಕುರಿತಾದ ಮರುಪರಿಶೀಲನಾ ಅರ್ಜಿಗಳು ಪ್ರಸ್ತುತ ಸುಪ್ರೀಂ ಕೋರ್ಟ್ನ ಪರಿಶೀಲನೆಯಲ್ಲಿವೆ. ರಾಜ್ಯ ಸರ್ಕಾರ ಸೇರಿದಂತೆ ನೊಂದ ಪಕ್ಷಗಳಿಗೆ ಮಾರ್ಚ್ 14 ರೊಳಗೆ ತಮ್ಮ ನಿಲುವನ್ನು ತಿಳಿಸುವಂತೆ ನ್ಯಾಯಾಲಯ ಸೂಚಿಸಿದೆ.

