Justice Yashwant Varma| ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ!
x
ಯಶವಂತ್ ವರ್ಮಾ(ಸಂಗ್ರಹ ಚಿತ್ರ)

Justice Yashwant Varma| ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ!

ಭ್ರಷ್ಟಾಚಾರದ ಆರೋಪ ಮತ್ತು ಮಹಾಭಿಯೋಗ ಪ್ರಕ್ರಿಯೆ ಎದುರಿಸುತ್ತಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ ನೀಡಿದ್ದಾರೆ.


ದೆಹಲಿಯ ಅಧಿಕೃತ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಭಿಯೋಗ ಪ್ರಕ್ರಿಯೆಯನ್ನು ಎದುರಿಸುತ್ತಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರವಾನಿಸಿದ್ದಾರೆ.

ತಪ್ಪಿದ ಮಹಾಭಿಯೋಗ ಪ್ರಕ್ರಿಯೆ

"ನನ್ನ ಈ ನಿರ್ಧಾರಕ್ಕೆ ಕಾರಣವಾದ ವಿಚಾರಗಳನ್ನು ವಿವರಿಸಲು ನಾನು ಬಯಸುವುದಿಲ್ಲ, ಆದರೆ ತೀವ್ರ ನೋವಿನೊಂದಿಗೆ ನಾನು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ವರ್ಮಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜೀನಾಮೆ ನೀಡಿದ ಬೆನ್ನಲ್ಲೇ, ಅವರನ್ನು ನ್ಯಾಯಮೂರ್ತಿ ಸ್ಥಾನದಿಂದ ತೆಗೆದುಹಾಕಲು ಸಂಸತ್ತಿನಲ್ಲಿ ನಡೆಯುತ್ತಿದ್ದ ಮಹಾಭಿಯೋಗ ಪ್ರಕ್ರಿಯೆಯು ಅಂತ್ಯಗೊಳ್ಳಲಿದೆ ಎಂದು ಲೋಕಸಭೆಯ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ: ಮನೆಯಲ್ಲಿ ಸಿಕ್ಕಿತ್ತು ಹಣದ ರಾಶಿ!

ಮಾರ್ಚ್ 14, 2025 ರಂದು ಯಶವಂತ್ ವರ್ಮಾ ಅವರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ, ದೆಹಲಿಯ ಲೂಟ್ಯನ್ಸ್ ವಲಯದಲ್ಲಿದ್ದ ಅವರ ಅಧಿಕೃತ ನಿವಾಸದಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾಗಿತ್ತು. ಮನೆಯ ಸ್ಟೋರ್ ರೂಂನಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿದ್ದ ನೋಟುಗಳು ಪತ್ತೆಯಾಗಿದ್ದು ದೇಶಾದ್ಯಂತ ಸಂಚಲನ ಮೂಡಿಸಿತ್ತು.

ಈ ಘಟನೆಯ ನಂತರ ಸುಪ್ರೀಂ ಕೋರ್ಟ್ ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿ ಆಂತರಿಕ ತನಿಖೆಗೆ ಆದೇಶಿಸಿತ್ತು. ಈ ಸಮಿತಿಯು ಮೇ 4 ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ವರದಿ ಸಲ್ಲಿಸಿತ್ತು.

ವರದಿಯನ್ನು ಪರಿಶೀಲಿಸಿದ ಸಿಜೆಐ ಸಂಜೀವ್ ಖನ್ನಾ ಅವರು, ವರ್ಮಾ ಅವರಿಗೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಲು ಸೂಚಿಸಿದ್ದರು. ಇಲ್ಲದಿದ್ದರೆ ಮಹಾಭಿಯೋಗ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ ವರ್ಮಾ ರಾಜೀನಾಮೆಗೆ ನಿರಾಕರಿಸಿದಾಗ, ಪ್ರಕರಣವನ್ನು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ವರ್ಗಾಯಿಸಲಾಯಿತು.

ಸಂಸದೀಯ ಪ್ರಕ್ರಿಯೆ ಮತ್ತು ವರ್ಗಾವಣೆ

ಆರೋಪಗಳು ಕೇಳಿಬಂದ ಕೂಡಲೇ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅವರ ಮೂಲ ಹೈಕೋರ್ಟ್ ಆದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು ಮತ್ತು ಅವರಿಂದ ನ್ಯಾಯಾಂಗ ಕಾರ್ಯಗಳನ್ನು ಹಿಂಪಡೆಯಲಾಗಿತ್ತು. ಆಗಸ್ಟ್ 2025 ರಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವರ್ಮಾ ಅವರ ವಿರುದ್ಧದ ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸುವ ಮೂಲಕ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.

ಇತ್ತೀಚೆಗೆ ಜನವರಿಯಲ್ಲಿ, ನ್ಯಾಯಮೂರ್ತಿ ವರ್ಮಾ ಅವರು ತಮ್ಮ ವಿರುದ್ಧದ ತನಿಖೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ತನಿಖಾ ಸಮಿತಿಯನ್ನು ರಚಿಸಲು ಸ್ಪೀಕರ್ ಅವರಿಗೆ ಕಾನೂನಾತ್ಮಕ ಹಕ್ಕಿದೆ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಈಗ ಅಂತಿಮವಾಗಿ ಶಿಕ್ಷೆಯಿಂದ ಪಾರಾಗಲು ವರ್ಮಾ ರಾಜೀನಾಮೆ ಹಾದಿ ಹಿಡಿದಿದ್ದಾರೆ.

Read More
Next Story