
ಸಚಿವ ಪ್ರಿಯಾಂಕ್ ಖರ್ಗೆ
ಕಾರ್ಯಕರ್ತರಿಂದ ಕಾಂಗ್ರೆಸ್ ಅಧಿಕಾರಕ್ಕೆ, ಎಲ್ಲರಿಗೂ ಪ್ರತಿಫಲ ಸಿಗಲಿದೆ: ಸಚಿವ ಪ್ರಿಯಾಂಕ್
ರಾಜ್ಯದಲ್ಲಿ ವಿರೋಧ ಪಕ್ಷವು ಅತ್ಯಂತ ದುರ್ಬಲವಾಗಿದ್ದು, ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಲಕ್ಷಾಂತರ ಕಾರ್ಯಕರ್ತರು ಕೆಲಸ ಮಾಡಿದ್ದರ ಫಲವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಯಾರನ್ನೂ ಕಡೆಗಣಿಸುವುದಿಲ್ಲ. ಪ್ರತಿಯೊಬ್ಬರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲವರಿಗೆ ಅವಕಾಶ ತಡವಾಗಿ ಸಿಗಬಹುದು, ಇನ್ನು ಕೆಲವರಿಗೆ ಬೇಗ ಸಿಗಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಶುಕ್ರವಾರ(ಡಿ.26) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು," ಕೆಪಿಸಿಸಿ ಆಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ನ ಹಿರಿಯ ನಾಯಕರು, ಅವರು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದ್ದಾರೆ. ಆರಂಭದ ದಿನದಿಂದಲೂ ಅವರು ನಡೆದು ಬಂದಿರುವ ಹಾದಿಯ ಬಗ್ಗೆ ಹೇಳಿದ್ದಾರೆ ಎಂದರು.
ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾಗ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರ ಭೇಟಿಗೆ ಸಮಯಾವಕಾಶವನ್ನೇ ಕೇಳಿರಲಿಲ್ಲ. ದೆಹಲಿಗೆ ಹೋದಾಗಲೆಲ್ಲಾ ವರಿಷ್ಠರ ಭೇಟಿಗೆ ಹೋಗುತ್ತಾರಾ ? ಈ ವೇಳೆ ದೆಹಲಿಯಲ್ಲಿ ರಾಹುಲ್ ಗಾಂಧಿ ಇರಲೂ ಇಲ್ಲ. ನಾನೂ ಕೂಡ ಹಲವು ಬಾರಿ ದೆಹಲಿಗೆ ಹೋಗುತ್ತೇನೆ. ಬೇರೆ ಕೆಲಸಗಳಿಗೆ ಹೋದಾಗಲೂ ವರಿಷ್ಠರ ಭೇಟಿಗೆ ಅನ್ನೋದು ಸರಿಯಲ್ಲ ಎಂದು ತಿಳಿಸಿದರು.
ಎಲ್ಲಾ ಪಕ್ಷದಲ್ಲೂ ಗೊಂದಲ
ಬೇರು ಮಟ್ಟದಲ್ಲಾಗಲಿ, ಪಕ್ಷ ಹಾಗೂ ಸರ್ಕಾರ ಯಾವುದೇ ಹಂತದಲ್ಲಾದರೂ ಗೊಂದಲಗಳು ಇರುವುದು ಸರಿಯಲ್ಲ. ಎಲ್ಲಾ ಪಕ್ಷಗಳಲ್ಲೂ ಗಂದಲ, ಸಮಸ್ಯೆ ಇರುತ್ತದೆ. ಸಣ್ಣಪ್ರಮಾಣದ ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಆದರೆ ಬಿಜೆಪಿಯವರು ಏಕೆ ತೊಂದರೆ ಅನುಭವಿಸುತ್ತಿದ್ದಾರೆ ಗೊತ್ತಿಲ್ಲ. ಈಗಾಗಲೇ ಹೈಕಮಾಂಡ್ ನಿರ್ಧಾರ ಮಾಡುವುದಾಗಿ ಹೇಳಿದೆ, ಎಲ್ಲರೂ ಕೂಡ ಹೈಕಮಾಂಡ್ ಮಾತಿಗೆ ಒಪ್ಪಿದ್ದಾರೆ. ಆದರೂ ನಾವು ಪದೇ ಪದೇ ಹೈಕಮಾಂಡ್ನತ್ತ ಬೊಟ್ಟು ಮಾಡುವುದು ಸರಿಯಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕರೆದು ಮಾತನಾಡುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಆಡಳಿತಕ್ಕೆ ಕೇಂದ್ರವೇ ಪ್ರಶಂಸೆ
ಯಾವಾಗ ಚುನಾವಣೆ ಎದುರಿಸಿದರೂ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಯಾರ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತಾರೆ? ಅವರಿಗೆ ಅರ್ಧ ದಿನ ನಿಲುವಳಿ ಮೆಲೆ ಮಾತನಾಡಲು ಆಗುವುದಿಲ್ಲ ಎನ್ನುವುದು ಗೊತ್ತಿದೆಯಾ ? ಆಳಂದಲ್ಲಿ 70-80 ರೂಪಾಯಿಗೆ ಮತಗಳವು ಮಾಡಿದ್ದಾರಲ್ಲವಾ ? ಮೊದಲು ಇದರ ಬಗ್ಗೆ ಚರ್ಚೆಗೆ ಬರಲಿ, ಜನರು ನಮಗೆ ಐದು ವರ್ಷ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ. ಇವರು ಹೇಳಿದಾಗೆಲ್ಲಾ ಚುನಾವಣೆಗೆ ಬರಲು ಸಾಧ್ಯವಿಲ್ಲ. ನಾವು ಹೇಳಿದಂತೆ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ನಮ್ಮ ಆಡಳಿತಕ್ಕೆ ಕೇಂದ್ರ ಸರ್ಕಾರವೇ ಪ್ರಶಂಸೆ ವ್ಯಕ್ತಪಡಿಸಿದೆ ಎಂದರು.
ದುರ್ಬಲ ವಿರೋಧಪಕ್ಷ
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ ಬಿಜೆಪಿ ನಮ್ಮ ಸರ್ಕಾರದ ವೈಫಲ್ಯ ತೋರಿಸಬಹುದಿತ್ತು. ಸರ್ಕಾರದ ವಿರುದ್ಧ ಅವರು ಏನನ್ನೂ ತೋರಿಸಲು ಆಗಲಿಲ್ಲ. ರಾಜ್ಯದಲ್ಲಿ ದುರ್ಬಲವಾದ ವಿರೋಧ ಪಕ್ಷವಿದೆ. ಐದು ಸಿಎಂ ಕೊಟ್ಟಂತ ಬಿಜೆಪಿಯವರಿಂದ ನಾವು ಹಿತವಚನ ಕೇಳಬೇಕಾ ? ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಎಲ್ಲದರಲ್ಲೂ ನಾವು ಮೊದಲ ಸ್ಥಾನದಲ್ಲಿದ್ದೇವೆ. ಉತ್ತರ ಪ್ರದೇಶಕ್ಕೆ ಅನುದಾನ ಹೋಗುತ್ತಿರುವುದರ ಬಗ್ಗೆ ಬಿಜೆಪಿ ಸಂಸದರು ಧ್ವನಿ ಎತ್ತುತ್ತಾರಾ ? ಕೇಂದ್ರ ಸಚಿವರು ಏನು ಮಾಡುತ್ತಿದ್ದಾರೆ. ಕನ್ನಡಿಗರ ಬೆವರು, ಶ್ರಮ ಬೇಕಾ ಇವರಿಗೆ ? ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಪ್ರಯತ್ನ ಫಲ ಫಾಕ್ಸ್ಕಾನ್
ಮೇಕ್ ಇನ್ ಇಂಡಿಯಾ ಶ್ರಮದಿಂದ ಫಾಕ್ಸ್ ಕಾನ್ನಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂಬ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಟ್ವೀಟ್ಗೆ ಪ್ರತಿಕ್ರಿಯಿಸಿ, ಎಲ್ಲವೂ ಪ್ರಧಾನಿ ಮೋದಿಯಿಂದಲೇ ಆಗಿದೆ ಎಂದು ಹೇಳುತ್ತಿದ್ದಾರೆ. ಮೇಕ್ ಇನ್ ಇಂಡಿಯಾದಿಂದಲೇ ಬಂದಿರೋದು ಅನ್ನುವುದು ಸುಳ್ಳು. ಎಲ್ಲೇ ಚರ್ಚೆಗೆ ಕರೆದರೂ ನಾವು ಮಾತನ್ನಾಡಲು ಸಿದ್ಧ, ಅಮೆರಿಕಾದಲ್ಲಿ ಬಂದ ಲೇಖನಗಳನ್ನು ಓದಿ ನೋಡಲಿ, ಇದನ್ನೆಲ್ಲಾ ನಾನು ಅಶ್ವಿನ್ ವೈಷ್ಣವ್ ಅವರಿಗೆ ಕಳುಹಿಸಿದ್ದೇನೆ, ನಾವು ಪ್ರಸಂಟೇಷನ್ ಕೊಟ್ಟಮೇಲೆಯೇ ಫಾಕ್ಸ್ ಕಾನ್ ರಾಜ್ಯಕ್ಕೆ ಬಂದಿರುವುದು ಎಂದರು.

