ಮುಡಾ ಹಗರಣ: ಸಿದ್ದರಾಮಯ್ಯ ಕುಟುಂಬಕ್ಕೆ ರಿಲೀಫ್ ಸಿಗುತ್ತಾ? ಇಂದು ಕೋರ್ಟ್ ತೀರ್ಪು
x
ಸಿಎಂ ಸಿದ್ಧರಾಮಯ್ಯ

ಮುಡಾ ಹಗರಣ: ಸಿದ್ದರಾಮಯ್ಯ ಕುಟುಂಬಕ್ಕೆ ರಿಲೀಫ್ ಸಿಗುತ್ತಾ? ಇಂದು ಕೋರ್ಟ್ ತೀರ್ಪು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಮುಡಾ (MUDA) ಭೂಮಿ ಹಂಚಿಕೆ ಪ್ರಕರಣದಲ್ಲಿ ಇಂದು (ಜನವರಿ 22, 2026) ಅತ್ಯಂತ ನಿರ್ಣಾಯಕ ದಿನವಾಗಿದ್ದು, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ 'ಬಿ-ರಿಪೋರ್ಟ್' ಕುರಿತು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನ್ನ ಅಂತಿಮ ಆದೇಶವನ್ನು ಪ್ರಕಟಿಸಲಿದೆ.


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಮೂಲಕ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಬಗ್ಗೆ ಇಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಲಿದೆ. ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುಖ್ಯಮಂತ್ರಿಗಳಿಗೆ 'ಕ್ಲೀನ್ ಚಿಟ್' ನೀಡುವ 'ಬಿ-ರಿಪೋರ್ಟ್' ಸಲ್ಲಿಸಿದ್ದರು.

ದೂರುದಾರರಾದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಈ ವರದಿಯನ್ನು ಪ್ರಶ್ನಿಸಿ ಆಕ್ಷೇಪಣೆ ಸಲ್ಲಿಸಿದ್ದು, ವರದಿಯು ದೋಷಪೂರಿತವಾಗಿದೆ ಎಂದು ವಾದಿಸಿದ್ದಾರೆ. ಕಳೆದ ವಾರ ನಡೆದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಇಂದು ಈ ವರದಿಯನ್ನು ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಿ ಹೆಚ್ಚಿನ ತನಿಖೆಗೆ ಆದೇಶಿಸಬೇಕೇ ಎಂಬುದನ್ನು ನಿರ್ಧರಿಸಲಿದ್ದಾರೆ.

• ಬಿ-ರಿಪೋರ್ಟ್‌ನ ಸಾರಾಂಶ: ಲೋಕಾಯುಕ್ತ ಪೊಲೀಸರು ಒಟ್ಟು 70 ಸಾಕ್ಷಿಗಳನ್ನು ವಿಚಾರಿಸಿದ್ದು, ಯಾರೊಬ್ಬರೂ ಸಿಎಂ ಅಧಿಕಾರ ದುರುಪಯೋಗಪಡಿಸಿಕೊಂಡ ಬಗ್ಗೆ ಹೇಳಿಕೆ ನೀಡಿಲ್ಲ ಎಂದು ಲೋಕಾಯುಕ್ತ ಎಸ್‌ಪಿಪಿ ವೆಂಕಟೇಶ್ ಅರಬಟ್ಟಿ ವಾದಿಸಿದ್ದಾರೆ.

• ದೂರುದಾರರ ವಾದ: ತನಿಖಾ ಸಂಸ್ಥೆಯು ಪ್ರಮುಖ ದಾಖಲೆಗಳನ್ನು ನಿರ್ಲಕ್ಷಿಸಿದೆ ಮತ್ತು ತನಿಖೆ ಅಪೂರ್ಣವಾಗಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ನ್ಯಾಯಾಲಯವು ಬಿ-ರಿಪೋರ್ಟ್ ಅಂಗೀಕರಿಸಿದರೆ ಸಿದ್ದರಾಮಯ್ಯ ಅವರಿಗೆ ದೊಡ್ಡ ಜಯ ಸಿಗಲಿದೆ. ಒಂದು ವೇಳೆ ತಿರಸ್ಕರಿಸಿದರೆ, ಪ್ರಕರಣವು ಸಿಬಿಐ ಅಥವಾ ವಿಶೇಷ ತನಿಖಾ ತಂಡಕ್ಕೆ (SIT) ವರ್ಗಾವಣೆಯಾಗುವ ಸಾಧ್ಯತೆ ಇದೆ.

ಏನಿದು ಪ್ರಕರಣ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ (MUDA) ಮೂಲಕ ನೀಡಲಾದ 14 ಸೈಟ್‌ಗಳ ಹಂಚಿಕೆಯ ಕುರಿತು ಲೋಕಾಯುಕ್ತರು ತನಿಖೆ ನಡೆಸಿದ್ದರು. ತನಿಖೆ ಬಳಿಕ ಲೋಕಾಯುಕ್ತರು ಯಾವುದೇ ಆಪಾದನೆಗೆ ಸಾಕ್ಷ್ಯ ಸಿಗಲಿಲ್ಲವೆಂದು ಸೂಚಿಸಿ 'ಬಿ ರಿಪೋರ್ಟ್' ಸಲ್ಲಿಸಿದ್ದರು. ಈ ವರದಿಯನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸ್ವತಃ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇದೇ ಪ್ರಕರಣದಲ್ಲಿ ಇಡಿ (ED) ಕೂಡ ಲೋಕಾಯುಕ್ತರ ವರದಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ.

'ಬಿ ರಿಪೋರ್ಟ್' ಎಂದರೆ ಏನು?

ತನಿಖಾ ಸಂಸ್ಥೆಗೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಲಭ್ಯವಾಗದಿದ್ದಾಗ ಅಥವಾ ಆರೋಪ ಸಾಬೀತುಪಡಿಸಲು ಸಾಧ್ಯವಿಲ್ಲವೆಂದು ಕಂಡುಬಂದಾಗ ಸಲ್ಲಿಸುವ ವರದಿಯೇ 'ಬಿ ರಿಪೋರ್ಟ್'. ಇದನ್ನು ನ್ಯಾಯಾಲಯ ಅಂಗೀಕರಿಸಿದರೆ ಪ್ರಕರಣ ಮುಕ್ತಾಯವಾಗುತ್ತದೆ. ಇನ್ನೊಂದೆಡೆ, ವರದಿ ತಿರಸ್ಕೃತವಾದರೆ ತನಿಖೆ ಮುಂದುವರಿಯಬಹುದು ಅಥವಾ ಹೊಸ ಕ್ರಮ ಕೈಗೊಳ್ಳಬಹುದು. ಇದೀಗ ನ್ಯಾಯಾಲಯದ ತೀರ್ಪು ಸಿದ್ದರಾಮಯ್ಯ ಕುಟುಂಬಕ್ಕೆ ನಿರಾಳ ತರಲಿದೆಯೋ ಅಥವಾ ಹೊಸ ಸವಾಲಾಗಲಿದೆಯೋ ಕುತೂಹಲ ಮೂಡಿಸಿದೆ.

Read More
Next Story