
ಜಗಳವಾಡಿ ಮನೆ ಬಿಟ್ಟು ಬಂದ ಬಾಲಕನ ರಕ್ಷಣೆ; 'ತಾಯಿ ಮಡಿಲು ಸೇರಿಸಿದ ನಮ್ಮ-112' ಪೊಲೀಸರು
ಡಿಸೆಂಬರ್ 12ರ ಮಧ್ಯಾಹ್ನ ಸುಮಾರು 1.18ಕ್ಕೆ ಕೊಡಿಗೆಹಳ್ಳಿ ರೈಲ್ವೆ ನಿಲ್ದಾಣ ಬಳಿ ಒಂಟಿಯಾಗಿ ಆತಂಕಗೊಂಡು ಅಲೆದಾಡುತ್ತಿದ್ದ ಬಾಲಕನನ್ನು ರೈಲ್ವೆ ಸಿಬ್ಬಂದಿ ಗಮನಿಸಿ ರಕ್ಷಿಸಿದ್ದಾರೆ.
ಬೆಂಗಳೂರು ನಗರ ಪೊಲೀಸರು ತಮ್ಮ ತ್ವರಿತ ಸ್ಪಂದನೆ ಮತ್ತು ಮಾನವೀಯತೆಯ ಮೂಲಕ ಮತ್ತೊಮ್ಮೆ ಸಾರ್ವಜನಿಕರ ಮನ ಗೆದ್ದಿದ್ದಾರೆ. ತಾಯಿಯೊಂದಿಗೆ ಜಗಳ ಮಾಡಿಕೊಂಡು ಜಗಳವಾಡಿ ಮನೆ ಬಿಟ್ಟು ಬಂದು ಕೊಡಿಗೆಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಆತಂಕದಿಂದ ಅಲೆದಾಡುತ್ತಿದ್ದ 15 ವರ್ಷದ ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿ, ಆತನನ್ನು ಮರಳಿ ತಾಯಿಯ ಮಡಿಲಿಗೆ ಸೇರಿಸುವ ಮೂಲಕ 'ನಮ್ಮ-112' ಸಿಬ್ಬಂದಿ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.
ಡಿಸೆಂಬರ್ 12ರ ಮಧ್ಯಾಹ್ನ ಸುಮಾರು 1.18ಕ್ಕೆ ಕೊಡಿಗೆಹಳ್ಳಿ ರೈಲ್ವೆ ನಿಲ್ದಾಣ ಬಳಿ ಒಂಟಿಯಾಗಿ ಆತಂಕಗೊಂಡು ಅಲೆದಾಡುತ್ತಿದ್ದ ಬಾಲಕನನ್ನು ರೈಲ್ವೆ ಸಿಬ್ಬಂದಿ ಗಮನಿಸಿದ್ದರು. ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿ 'ನಮ್ಮ-112'ಗೆ ಕರೆ ಮಾಡಿ ಮಾಹಿತಿ ನೀಡಿದರು. ಕೇವಲ 6 ನಿಮಿಷಗಳಲ್ಲಿ ಗಸ್ತಿನಲ್ಲಿದ್ದ ಹೊಯ್ಸಳ-168 ವಾಹನ ಸ್ಥಳಕ್ಕೆ ಧಾವಿಸಿತು.
ಹೊಯ್ಸಳ-168 ವಾಹನದಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಕುಮಾರ್ ಮತ್ತು ಹೆಡ್ ಕಾನ್ಸ್ಟೇಬಲ್ ಹನುಮಂತ ಅವರು ಬಾಲಕನನ್ನು ವಿಶ್ವಾಸಕ್ಕೆ ತೆಗೆದು ವಿಚಾರಿಸಿದರು. ಬಾಲಕನು ತಾಯಿಯೊಂದಿಗಿನ ಕುಟುಂಬ ಕಲಹದಿಂದ ಮನೆ ಬಿಟ್ಟು ಬಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸರು ಮನೆಯ ವಿಳಾಸ ಪಡೆದು ಆತನನ್ನು ಸುರಕ್ಷಿತವಾಗಿ ಮನೆಗೆ ಕರೆತಂದು, ತಾಯಿ-ಬಾಲಕರಿಗೆ ಸಲಹೆ ನೀಡಿ ಸಮಾಧಾನಪಡಿಸಿದರು.
ಪೊಲೀಸ್ ಆಯುಕ್ತರ ಪ್ರಕಟಣೆ
ಈ ಘಟನೆ ಬೆಂಗಳೂರು ಪೊಲೀಸರ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಕರೆಗೆ ಸ್ಪಂದಿಸುವ ಬದ್ಧತೆಯನ್ನು ತೋರಿಸುತ್ತದೆ ಎಂದು ಪೊಲೀಸ್ ಆಯುಕ್ತ ಕಚೇರಿ ಪ್ರಕಟಣೆ. ತುರ್ತು ಸಂದರ್ಭಗಳಲ್ಲಿ ಕೂಡಲೇ 112 ಸಹಾಯವಾಣಿಗೆ ಕರೆ ಮಾಡುವಂತೆ ಸಾರ್ವಜನಿಕರಲ್ಲಿ ಮನವೊಲಿಕೆ ಮಾಡಲಾಗಿದೆ.

