
ಚಿನ್ನಯ್ಯ
ಧರ್ಮಸ್ಥಳ ಪ್ರಕರಣ| ಎಸ್ಐಟಿಯಿಂದ ಬಂಧಿತ ಮುಸುಕುಧಾರಿಯ ಪತ್ನಿ ವಿಚಾರಣೆ
ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿಟ್ಟಿರುವ ಬಗ್ಗೆ ಆರೋಪ ಮಾಡಿ ಗಮನ ಸೆಳೆದಿದ್ದ ಮುಸುಕುಧಾರಿ ಚಿನ್ನಯ್ಯನ ಹೇಳಿಕೆ ಕುರಿತಂತೆ ಈಗ ಆತನ ಪತ್ನಿಯನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಲಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ಕುರಿತಾದ ಮುಸುಕುಧಾರಿಯ ಹೇಳಿಕೆಗೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು, ಮುಸುಕುಧಾರಿಯ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಎರಡು ದಶಕಗಳಲ್ಲಿ ಧರ್ಮಸ್ಥಳ ಸುತ್ತಮುತ್ತ ಶವಗಳನ್ನು ಹೂತಿಟ್ಟಿರುವ ಕುರಿತು ಆರೋಪ ಮಾಡಿದ್ದ ಚಿನ್ನಯ್ಯ ನನ್ನು ಎಸ್ಐಟಿ ಬಂಧಿಸಿತ್ತು. ಆತ ತೋರಿಸಿದ್ದ 17 ಜಾಗಗಳಲ್ಲಿ ಶೋಧ ನಡೆಸಿದಾಗ ಒಂದರಲ್ಲಿ ಮಾತ್ರ ಅಸ್ಥಿಪಂಜರ ಹಾಗೂ ಮೂಳೆಗಳು ಪತ್ತೆಯಾಗಿದ್ದವು. ಇದು ಪೂರ್ವನಿಯೋಜಿತ 'ಷಡ್ಯಂತ್ರ' ಎಂಬುದು ತನಿಖೆಯಿಂದ ದೃಢಪಟ್ಟಿತ್ತು. ಬಳಿಕ ಬೆನ್ನಲ್ಲೇ ಚಿನ್ನಯ್ಯನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
ಈಗ ಷಡ್ಯಂತ್ರದ ಮೂಲ ಮತ್ತು ಹಣಕಾಸು ನೆರವಿನ ಕುರಿತು ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು, ಚಿನ್ನಯ್ಯ ಪತ್ನಿ ಮಲ್ಲಿಕಾ ಅವರಿಗೆ ನೋಟಿಸ್ ನೀಡಿತ್ತು. ಅದರಂತೆ ಸೋಮವಾರ( ಅ.13) ಮುಸುಕುಧಾರಿಯ ಪತ್ನಿ ಮಲ್ಲಿಕಾ ಅವರನ್ನು ಎಸ್ಐಟಿ ಕಚೇರಿಗೆ ಹಾಜರಾಗಿ, ಹಲವು ಮಾಹಿತಿಗಳ ಕುರಿತು ಹೇಳಿದ್ದಾರೆ ಎನ್ನಲಾಗಿದೆ.
ತೀವ್ರಗೊಂಡ ಎಸ್ಐಟಿ ತನಿಖೆ: ಹಲವರ ವಿಚಾರಣೆ
ಪ್ರಕರಣದ ಕುರಿತು ಎಸ್ಐಟಿ ತೀವ್ರ ತನಿಖೆ ತೀವ್ರಗೊಂಡಿದೆ. ಈಗಾಗಲೇ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ 12 ಗಂಟೆಗಳ ಕಾಲ ಶೋಧ ನಡೆಸಲಾಗಿತ್ತು. ಈ ವೇಳೆ ಮುಸುಕುಧಾರಿಯ ಮೊಬೈಲ್ ಫೋನ್ ಜಪ್ತಿ ಮಾಡಲಾಗಿತ್ತು. ಆರೋಪಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ತಿಮರೋಡಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಅದೇ ರೀತಿ, ಶವಗಳನ್ನು ಶವಾಗಾರಕ್ಕೆ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಚಾಲಕರಾದ ಜಲೀಲ್ ಬಾಬಾ ಮತ್ತು ಹಮೀದ್ ಅವರನ್ನು ಸಹ ವಿಚಾರಣೆಗೊಳಪಡಿಸಿ, ಶವ ಸಾಗಾಟದ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎನ್ನಲಾಗಿದೆ.
ಈ ಮಧ್ಯೆ, ಬಂಗ್ಲೆಗುಡ್ಡದ ಅರಣ್ಯ ಪ್ರದೇಶದಲ್ಲಿ ಮತ್ತೆ ಶೋಧ ಕಾರ್ಯಾಚರಣೆ ನಡೆಸಿದ್ದು, ಅಲ್ಲಿ ಕೆಲ ಮಾನವ ಮೂಳೆಗಳು ಮತ್ತು ತಲೆಬುರುಡೆಗಳು ಪತ್ತೆಯಾಗಿವೆ. ಈ ಅಸ್ಥಿಪಂಜರಗಳು ಹಲವು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.