Hidden treasure discovered in Lakkundi: Government begins excavations in the premises of Kote Veerabhadreshwara Temple
x

ಸಾಂದರ್ಭಿಕ ಚಿತ್ರ

ಲಕ್ಕುಂಡಿಯಲ್ಲಿ ಬಯಲಾದ ಗುಪ್ತನಿಧಿ: ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸರ್ಕಾರದಿಂದ ಉತ್ಖನನ ಆರಂಭ

ಕಳೆದ 2024ರ ನವೆಂಬರ್‌ನಲ್ಲಿ ನಡೆಸಿದ ಪ್ರಾಥಮಿಕ ಪರಿಶೋಧನೆಯಲ್ಲೂ ಸಾವಿರಾರು ಕಲಾಕೃತಿಗಳು ಲಭ್ಯವಾಗಿದ್ದವು. ಈಗ ಸಿಕ್ಕಿರುವ ಚಿನ್ನಾಭರಣಗಳು ಈ ನಂಬಿಕೆಗೆ ಮತ್ತಷ್ಟು ಪುಷ್ಟಿ ನೀಡಿವೆ.


Click the Play button to hear this message in audio format

ಐತಿಹಾಸಿಕ ವಾಸ್ತುಶಿಲ್ಪದ ತವರೂರು, ಚಾಲುಕ್ಯರ ಕಾಲದ ಕಲಾ ವೈಭವದ ಕೇಂದ್ರವಾಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಗ 'ಚಿನ್ನದ ಬೇಟೆ' ಶುರುವಾಗಿದೆ. ಮನೆಯೊಂದರ ಪಾಯ ತೆಗೆಯುವಾಗ ಅನಿರೀಕ್ಷಿತವಾಗಿ ಚಿನ್ನದ ಆಭರಣಗಳು ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಗ್ರಾಮದ ಪ್ರಸಿದ್ಧ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರದಿಂದ (ಜಬವರಿ 16) ಅಧಿಕೃತವಾಗಿ ಬೃಹತ್ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದೆ.

ಕಳೆದ ವಾರ ಗ್ರಾಮದಲ್ಲಿ ಮನೆಯೊಂದರ ನಿರ್ಮಾಣಕ್ಕಾಗಿ ಗುಂಡಿ ತೆಗೆಯುವಾಗ ಬಾಲಕನೊಬ್ಬನಿಗೆ ತಾಮ್ರದ ಬಿಂದಿಗೆಯೊಂದು ಕಣ್ಣಿಗೆ ಬಿದ್ದಿತ್ತು. ಕುತೂಹಲದಿಂದ ಅದನ್ನು ಪರೀಕ್ಷಿಸಿದಾಗ ಅದರಲ್ಲಿ ಸುಮಾರು 470 ಗ್ರಾಂ ತೂಕದ ಪುರಾತನ ಶೈಲಿಯ ಚಿನ್ನದ ಆಭರಣಗಳು ಪತ್ತೆಯಾಗಿದ್ದವು. ಈ ಆಭರಣಗಳು ಸುಮಾರು 300 ರಿಂದ 400 ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ಬಾಲಕನು ಈ ನಿಧಿಯನ್ನು ಪ್ರಾಮಾಣಿಕವಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದು, ಸರ್ಕಾರವು ಆತನನ್ನು ಸನ್ಮಾನಿಸಿ ನಿಧಿಯನ್ನು ವಶಕ್ಕೆ ಪಡೆದಿದೆ.

ಜಂಟಿ ಕಾರ್ಯಾಚರಣೆ ಮತ್ತು ವೈಜ್ಞಾನಿಕ ಉತ್ಖನನ

ಚಿನ್ನ ಪತ್ತೆಯಾದ ಬೆನ್ನಲ್ಲೇ ಲಕ್ಕುಂಡಿಯ ಭೂಗರ್ಭದಲ್ಲಿ ಮತ್ತಷ್ಟು ಐತಿಹಾಸಿಕ ಸಂಪತ್ತು ಅಡಗಿರುವ ಸಾಧ್ಯತೆಯನ್ನು ಪರಿಗಣಿಸಿ, ಸರ್ಕಾರವು ಸಮಗ್ರ ತನಿಖೆಗೆ ಆದೇಶಿಸಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ.

ದೇವಸ್ಥಾನದ ಆವರಣದಲ್ಲಿ ಪ್ರಾಥಮಿಕವಾಗಿ 10x10 ಮೀಟರ್‌ ವಿಸ್ತೀರ್ಣದ ಜಾಗವನ್ನು ಗುರುತಿಸಲಾಗಿದ್ದು, ಸದ್ಯ 20 ನುರಿತ ಕಾರ್ಮಿಕರ ತಂಡ (15 ಮಹಿಳೆಯರು ಹಾಗೂ 5 ಪುರುಷರು) ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ಖನನ ನಡೆಸುತ್ತಿದೆ.

ಇತಿಹಾಸದ ಪುಟಗಳಲ್ಲಿ ಲಕ್ಕುಂಡಿಯ ವೈಭವ

ಲಕ್ಕುಂಡಿಯು ಕೇವಲ ದೇವಾಲಯಗಳ ನಗರವಲ್ಲ, ಅದು ಅಂದಿನ ಕಾಲದ ಆರ್ಥಿಕ ಕೇಂದ್ರವೂ ಆಗಿತ್ತು ಎಂಬುದಕ್ಕೆ ಇತಿಹಾಸವೇ ಸಾಕ್ಷಿ: ಪುರಾತತ್ವ ಇಲಾಖೆಯ ಮಾಹಿತಿಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಇಲ್ಲಿ ಚಿನ್ನದ ನಾಣ್ಯಗಳನ್ನು ಟಂಕಿಸುವ 'ಟಂಕಶಾಲೆ' (Mint) ಇತ್ತು. ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಹಾಗೂ ವಿಜಯನಗರದ ಅರಸರ ಆಳ್ವಿಕೆಯಲ್ಲಿ ಲಕ್ಕುಂಡಿ ಅತ್ಯಂತ ಸಮೃದ್ಧವಾಗಿತ್ತು. ಈ ಪ್ರದೇಶದ ಮಣ್ಣಿನ ಅಡಿಯಲ್ಲಿ ಬಂಗಾರ, ಬೆಳ್ಳಿ ಮಾತ್ರವಲ್ಲದೆ ವಜ್ರ, ವೈಡೂರ್ಯ, ಮುತ್ತು ಮತ್ತು ಕೆಂಪು ರತ್ನಗಳು (Rubies) ಇಂದಿಗೂ ಇರಬಹುದು ಎಂದು ತಜ್ಞರು ನಂಬಿದ್ದಾರೆ.

ಮುಂದುವರಿದ ಅನ್ವೇಷಣೆ

ಕಳೆದ 2024ರ ನವೆಂಬರ್‌ನಲ್ಲಿ ನಡೆಸಿದ ಪ್ರಾಥಮಿಕ ಪರಿಶೋಧನೆಯಲ್ಲೂ ಸಾವಿರಾರು ಕಲಾಕೃತಿಗಳು ಲಭ್ಯವಾಗಿದ್ದವು. ಈಗ ಸಿಕ್ಕಿರುವ ಚಿನ್ನಾಭರಣಗಳು ಈ ನಂಬಿಕೆಗೆ ಮತ್ತಷ್ಟು ಪುಷ್ಟಿ ನೀಡಿವೆ. ಈ ಹೊಸ ಉತ್ಖನನದಿಂದ ಕರ್ನಾಟಕದ ಮಧ್ಯಕಾಲೀನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವಂತಹ ಶಾಸನಗಳು, ಶೈಲಕೃತಿಗಳು ಅಥವಾ ಬೃಹತ್ ಸಂಪತ್ತು ಹೊರಬರುವ ನಿರೀಕ್ಷೆಯಲ್ಲಿ ಸಂಶೋಧಕರಿದ್ದಾರೆ.

Read More
Next Story