
ಹಿರಿಯೂರು ಬಸ್ ದುರಂತ: ಡಿಎನ್ಎ ಪರೀಕ್ಷೆಯ ಮೂಲಕ ಐವರ ಗುರುತು ಪತ್ತೆ; ಕುಟುಂಬಕ್ಕೆ ಮೃತದೇಹ ಹಸ್ತಾಂತರ
ಬಸ್ನಲ್ಲಿ ಒಟ್ಟು 32 ಪ್ರಯಾಣಿಕರಿದ್ದರು. ಅಪಘಾತದ ಬೆನ್ನಲ್ಲೇ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು ಐವರು ಪ್ರಯಾಣಿಕರು ಸಜೀವ ದಹನವಾಗಿದ್ದರು.
ಹಿರಿಯೂರು ಬಳಿ ನಡೆದ ಭೀಕರ ಸೀಬರ್ಡ್ ಬಸ್ ಅಪಘಾತದಲ್ಲಿ ಸುಟ್ಟು ಕರಕಲಾಗಿದ್ದ ಐವರು ಪ್ರಯಾಣಿಕರ ಮೃತದೇಹಗಳನ್ನು ಡಿಎನ್ಎ (DNA) ಪರೀಕ್ಷೆಯ ವರದಿಯ ಆಧಾರದ ಮೇಲೆ ಗುರುತಿಸಲಾಗಿದ್ದು, ಭಾನುವಾರ (ಡಿ. 28) ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು.
ಡಿಸೆಂಬರ್ 25 ರಂದು ಬೆಂಗಳೂರಿನಿಂದ ಗೋಕರ್ಣ, ಶಿವಮೊಗ್ಗ ಮತ್ತು ಕುಮಟಾಕ್ಕೆ ತೆರಳುತ್ತಿದ್ದ ಸೀಬರ್ಡ್ ಬಸ್ಗೆ ಹಿರಿಯೂರಿನ ಗೊರ್ಲಡಕು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಡಿಕ್ಕಿಯಾಗಿತ್ತು. ಈ ವೇಳೆ ಬಸ್ನಲ್ಲಿ ಒಟ್ಟು 32 ಪ್ರಯಾಣಿಕರಿದ್ದರು. ಅಪಘಾತದ ಬೆನ್ನಲ್ಲೇ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು ಐವರು ಪ್ರಯಾಣಿಕರು ಸಜೀವ ದಹನವಾಗಿದ್ದರು.
ಡಿಎನ್ಎ ಪರೀಕ್ಷೆಯಿಂದ ಸಿಕ್ಕ ಮಾಹಿತಿ
ಘಟನೆಯಲ್ಲಿ ಮೃತಪಟ್ಟವರು ಯಾರೆಂದು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ, ಪೊಲೀಸರು ಮೃತರ ಅವಶೇಷಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ವರದಿ ಬಂದಿದ್ದು, ಅದರ ಆಧಾರದ ಮೇಲೆ ಮೃತರನ್ನು ಅಧಿಕೃತವಾಗಿ ಗುರುತಿಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಭೀಕರ ದುರಂತವು ಇಡೀ ರಾಜ್ಯವನ್ನೇ ನಡುಗಿಸಿತ್ತು ಮತ್ತು ಮೃತ ಕುಟುಂಬಗಳಲ್ಲಿ ಶೋಕ ಮಡುಗಟ್ಟಿದೆ.

