
ಸ್ಥಳ ಪರಿಶೀಲನೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು
ಧರ್ಮಸ್ಥಳ ಪ್ರಕರಣ: ನೇತ್ರಾವತಿ ಬಳಿಯ ಕಾಡಿನಲ್ಲಿ ಮತ್ತೊಮ್ಮೆ ಮಹಜರು
ಈ ಹಿಂದೆ ಸಾಕ್ಷಿದಾರರು ಪೊಲೀಸರಿಗೆ ಒಪ್ಪಿಸಿದ್ದ ಬುರುಡೆಯು ಪತ್ತೆಯಾಗಿದ್ದ ಜಾಗವನ್ನು ವಿಠಲ ಗೌಡ ಅವರೇ ತೋರಿಸಿದ್ದರು. ಆ ಸ್ಥಳದಲ್ಲಿ ಸೆಪ್ಟೆಂಬರ್ 6ರಂದು ಎಸ್ಐಟಿ ಅಧಿಕಾರಿಗಳು ಮಹಜರು ನಡೆಸಿದಾಗ, ಕೆಲವು ಮೃತದೇಹಗಳ ಅವಶೇಷಗಳು ನೆಲದ ಮೇಲೆಯೇ ಕಂಡುಬಂದಿದ್ದವು.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಹತ್ಯೆ ಮತ್ತು ಸಮಾಧಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಚುರುಕುಗೊಳಿಸಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾದ ಪಾಂಗಾಳದ ವಿಠಲ ಗೌಡ ಅವರನ್ನು ಬುಧವಾರ ಮತ್ತೊಮ್ಮೆ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿಗೆ ಕರೆದೊಯ್ದು, ಮಹಜರು ಪ್ರಕ್ರಿಯೆ ನಡೆಸಲಾಯಿತು.
ಈ ಹಿಂದೆ ಸಾಕ್ಷಿದಾರರು ಪೊಲೀಸರಿಗೆ ಒಪ್ಪಿಸಿದ್ದ ಬುರುಡೆಯು ಪತ್ತೆಯಾಗಿದ್ದ ಜಾಗವನ್ನು ವಿಠಲ ಗೌಡ ಅವರೇ ತೋರಿಸಿದ್ದರು. ಆ ಸ್ಥಳದಲ್ಲಿ ಸೆಪ್ಟೆಂಬರ್ 6ರಂದು ಎಸ್ಐಟಿ ಅಧಿಕಾರಿಗಳು ಮಹಜರು ನಡೆಸಿದಾಗ, ಕೆಲವು ಮೃತದೇಹಗಳ ಅವಶೇಷಗಳು ನೆಲದ ಮೇಲೆಯೇ ಕಂಡುಬಂದಿದ್ದವು. ಅಂದು ಕತ್ತಲಾಗಿದ್ದರಿಂದ ಆ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಹೆಚ್ಚಿನ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆಹಾಕಲು, ಎಸ್ಐಟಿ ಅಧಿಕಾರಿಗಳು ಎಸ್ಪಿ ಸೈಮನ್ ಅವರ ನೇತೃತ್ವದಲ್ಲಿ ವಿಠಲ ಗೌಡ ಅವರನ್ನು ಬುಧವಾರ ಮತ್ತೊಮ್ಮೆ ಸ್ಥಳಕ್ಕೆ ಕರೆತಂದು, ಅವರಿಂದ ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಂಡರು.
ಬುಧವಾರ ಬೆಳಿಗ್ಗೆ ಎಸ್ಐಟಿ ಕಚೇರಿಗೆ ಹಾಜರಾಗಿದ್ದ ವಿಠಲ ಗೌಡ ಅವರಿಂದ ಹೇಳಿಕೆ ಪಡೆದ ನಂತರ, ಅಧಿಕಾರಿಗಳು ಅವರನ್ನು ನೇರವಾಗಿ ಕಾಡಿಗೆ ಕರೆದೊಯ್ದು, ತಲೆ ಬುರುಡೆ ಸಿಕ್ಕಿದ ಜಾಗ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು. ಈ ಮಹಜರು ಪ್ರಕ್ರಿಯೆಯು, ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವುಗಳನ್ನು ನೀಡುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.