
ಧರ್ಮಸ್ಥಳ ಪ್ರಕರಣ: ಎಸ್ಐಟಿ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೆ 'ಮಾಸ್ಕ್ ಮ್ಯಾನ್' ಚಿನ್ನಯ್ಯ
ವಿಚಾರಣೆ ವೇಳೆ ಚಿನ್ನಯ್ಯ ತಾನು ಠಾಣೆಗೆ ತಂದಿದ್ದ ತಲೆಬುರುಡೆಯ ಬಗ್ಗೆ ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಎಸ್ಐಟಿ ಮೂಲಗಳ ಪ್ರಕಾರ, ಆ ತಲೆಬುರುಡೆಯು ಸುಮಾರು 30 ವರ್ಷಗಳಷ್ಟು ಹಳೆಯದು.
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, 'ಮಾಸ್ಕ್ ಮ್ಯಾನ್' ಎಂದೇ ಕರೆಯಲ್ಪಡುವ ಚಿನ್ನಯ್ಯನ ಎಸ್ಐಟಿ ಕಸ್ಟಡಿ ಅಂತ್ಯಗೊಂಡಿದೆ. ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯವು ಚಿನ್ನಯ್ಯನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈತನ ಬಂಧನದೊಂದಿಗೆ, ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದೆ.
ಶನಿವಾರ ಆತನ ಎಸ್ಐಟಿ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕೋರ್ಟ್ಗೆ ಹಾಜರುಪಡಿಸಲಾಯಿತು. ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೆನೀಡಲಾಯಿತು. ಆದರೆ, ಸುರಕ್ಷತೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಜೈಲಿಗೆ ಕರೆದೊಯ್ಯಲಾಯಿತು.
ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ತಾನು ನೂರಾರು ಶವಗಳನ್ನು ಹೂತಿರುವುದಾಗಿ ಮುಸುಕುಧಾರಿ ಚಿನ್ನಯ್ಯ ಹೇಳಿಕೆ ನೀಡಿದ್ದ. ತನ್ನ ಹೇಳಿಕೆಯನ್ನು ಸಮರ್ಥಿಸಲು ಜುಲೈ 11 ರಂದು ತಲೆಬುರುಡೆಯೊಂದನ್ನು ಹಿಡಿದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದ. ಈ ಘಟನೆಯು ರಾಜ್ಯದಲ್ಲಿ ಜೋರು ಚರ್ಚೆಗೆ ಕಾರಣವಾಯಿತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ, ಜುಲೈ 19 ರಂದು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ತನಿಖೆಗೆ ಆದೇಶಿಸಿತ್ತು.
ಎಸ್ಐಟಿ ತನಿಖೆ ಮತ್ತು ಮಹತ್ವದ ಸುಳಿವುಗಳು
ಡಾ. ಪ್ರಣಬ್ ಮೊಹಾಂತಿ ನೇತೃತ್ವದ ಎಸ್ಐಟಿ ತಂಡವು ತನಿಖೆಯನ್ನು ಚುರುಕುಗೊಳಿಸಿ, ಚಿನ್ನಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ಚಿನ್ನಯ್ಯ ನೀಡಿದ ಮಾಹಿತಿಯ ಆಧಾರದ ಮೇಲೆ, ಆತ ಸೂಚಿಸಿದ ಸ್ಥಳಗಳಲ್ಲಿ ಉತ್ಖನನ ನಡೆಸಿತು. ಈ ಸಂದರ್ಭದಲ್ಲಿ, ಎರಡು ಕಡೆಗಳಲ್ಲಿ ಅಸ್ಥಿಪಂಜರ, ಮೂಳೆಗಳು ಮತ್ತು ತಲೆಬುರುಡೆಗಳು ಪತ್ತೆಯಾಗಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸದನದಲ್ಲಿ ಮಾಹಿತಿ ನೀಡಿದ್ದರು.
ತಲೆಬುರುಡೆಯ ರಹಸ್ಯ ಬಯಲು
ವಿಚಾರಣೆ ವೇಳೆ ಚಿನ್ನಯ್ಯ ತಾನು ಠಾಣೆಗೆ ತಂದಿದ್ದ ತಲೆಬುರುಡೆಯ ಬಗ್ಗೆ ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಎಸ್ಐಟಿ ಮೂಲಗಳ ಪ್ರಕಾರ, ಆ ತಲೆಬುರುಡೆಯು ಸುಮಾರು 30 ವರ್ಷಗಳಷ್ಟು ಹಳೆಯದಾಗಿದ್ದು, ಅದು ಒಬ್ಬ ಪುರುಷನದ್ದು ಎಂದು ಎರಡು ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯಕೀಯ ವರದಿಗಳು ದೃಢಪಡಿಸಿವೆ. ಈ ಆವಿಷ್ಕಾರವು ತನಿಖೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದೆ.
ಬಂಧನ ಮತ್ತು ನ್ಯಾಯಾಲಯದ ಪ್ರಕ್ರಿಯೆ
ಪ್ರಕರಣದಲ್ಲಿ ಆರಂಭದಲ್ಲಿ ದೂರುದಾರನಾಗಿದ್ದ ಚಿನ್ನಯ್ಯನನ್ನು, ನಂತರ ಎಸ್ಐಟಿ ಅಧಿಕಾರಿಗಳು ಸಾಕ್ಷಿಯಾಗಿ ಪರಿಗಣಿಸಿ ಬಂಧಿಸಿದ್ದರು. ಹಲವು ದಿನಗಳ ಕಾಲ ಎಸ್ಐಟಿ ಕಸ್ಟಡಿಯಲ್ಲಿದ್ದ ಚಿನ್ನಯ್ಯನನ್ನು, ಸೆಪ್ಟೆಂಬರ್ 5ರಂದು ಕಸ್ಟಡಿ ಅವಧಿ ಮುಗಿದ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.