ರಾಜ್ಯದಲ್ಲಿ ಚಳಿಯ ಅಬ್ಬರ: 17 ಜಿಲ್ಲೆಗಳಲ್ಲಿ ತಾಪಮಾನ ಕುಸಿತ
x

ಕರ್ನಾಟಕದಲ್ಲಿ ಚಳಿಯ ಅಬ್ಬರ

ರಾಜ್ಯದಲ್ಲಿ ಚಳಿಯ ಅಬ್ಬರ: 17 ಜಿಲ್ಲೆಗಳಲ್ಲಿ ತಾಪಮಾನ ಕುಸಿತ

ಪ್ರಪಂಚದಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರುವ ಲಾ ನಿನಾ ವಿದ್ಯಮಾನವು ಶೀತ ಗಾಳಿಗೆ ಕಾರಣವಾಗಿದೆ. ಇದು ಉತ್ತರದಿಂದ ದಕ್ಷಿಣಕ್ಕೆ ತಂಪು ಗಾಳಿ ದ್ರವ್ಯರಾಶಿಯಲ್ಲಿ ತಂದು ಬಿಡುತ್ತಿದೆ.


Click the Play button to hear this message in audio format

ರಾಜ್ಯದಲ್ಲಿ ಚಳಿಯ ಅಬ್ಬರ ಮುಂದುವರಿದಿದೆ. ರಾಜ್ಯದ 17 ಜಿಲ್ಲೆಗಳಲ್ಲಿ ತಾಪಮಾನ ಇಳಿಕೆ ಕಂಡಿದ್ದು,ಜನರು ಚಳಿಯಲ್ಲಿ ನಡುಗುವಂತಾಗಿದೆ. ಕರ್ನಾಟಕದ ಬೀದರ್‌ ಜಿಲ್ಲೆಯಲ್ಲಿ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಶೀತ ಪ್ರದೇಶದ ಅನುಭವ ನೀಡುತ್ತಿದೆ. ಸಾಮಾನ್ಯ ತಾಪಮಾನ 28 ರಿಂದ 35 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದ್ದ ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪಶ್ಚಿಮದ ಶೀತಗಾಳಿ ಮತ್ತು ಪ್ರಬಲ ಜೆಟ್ ಸ್ಟ್ರೀಮ್‌ಗಳ ಪ್ರಭಾವದಿಂದ ಈ ಬಾರಿ ತಾಪಮಾನ ತೀವ್ರ ಕುಸಿತ ಕಂಡಿದೆ.

ಪ್ರಪಂಚದಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರುವ ಲಾ ನಿನಾ ವಿದ್ಯಮಾನವು ಶೀತ ಗಾಳಿಗೆ ಕಾರಣವಾಗಿದೆ. ಇದು ಉತ್ತರದಿಂದ ದಕ್ಷಿಣಕ್ಕೆ ತಂಪು ಗಾಳಿ ದ್ರವ್ಯರಾಶಿಯಲ್ಲಿ ತಂದು ಬಿಡುತ್ತಿದೆ.

ಬೆಂಗಳೂರಿನಲ್ಲಿ ವಿಪರೀತ ಚಳಿ ಉಂಟಾಗಿದ್ದು, ಕನಿಷ್ಠ ತಾಪಮಾನ ಇಳಿಕೆಯಾಗುತ್ತಿರುವುದರಿಂದ ನಗರದ ನಿವಾಸಿಗಳು ಚಳಿಯಿಂದಾಗಿ ಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯ ಪ್ರಕಾರ, ಡಿಸೆಂಬರ್ 16 ರಂದು ಮೋಡ ಕವಿದ ವಾತಾವರಣ ಇರಲಿದ್ದು,. ತಾಪಮಾನವು ಕನಿಷ್ಠ 13.5 ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಠ 25.7 ಡಿಗ್ರಿ ಸೆಲ್ಸಿಯಸ್‌ನವರೆಗೆ ಇರಬಹುದು ಎಂದು ತಿಳಿಸಿದೆ.

ದಶಕದಲ್ಲಿ ಡಿಸೆಂಬರ್‌ನ ಅತ್ಯಂತ ಕಡಿಮೆ ತಾಪಮಾನ

ಹವಾಮಾನ ಅಧಿಕಾರಿಗಳು ಗಮನಿಸಿದಂತೆ, 2016 ರ ಹೊರತುಪಡಿಸಿ, ಕಳೆದ 10 ವರ್ಷಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನವನ್ನು ಪ್ರಸ್ತುತ ಚಳಿಯ ದಿನಗಳು ಗುರುತಿಸುತ್ತವೆ. ಕಳೆದ ಕೆಲವು ದಿನಗಳಿಂದ ರಾತ್ರಿಯ ತಾಪಮಾನದಲ್ಲಿ ಗಣನೀಯ ಕುಸಿತವು ರಾಜ್ಯಾದ್ಯಂತ ಜನರನ್ನು ನಡುಗಿಸಿದೆ. ಹಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ದಾಖಲಾಗುತ್ತಿದ್ದು, ಕೆಲವು ಸ್ಥಳಗಳಲ್ಲಿ ವರ್ಷದ ಈ ಸಮಯಕ್ಕೆ ದಾಖಲೆಯ ಸಮೀಪವಿರುವ ಶೀತ ಪರಿಸ್ಥಿತಿಗಳು ಕಂಡುಬರುತ್ತಿವೆ.

ಬೀದರ್‌ನಲ್ಲಿ ತಾಪಮಾನ ಕುಸಿತ

ಕರ್ನಾಟಕದಲ್ಲಿ ಅತಿ ಕಡಿಮೆ ತಾಪಮಾನ ದಾಖಲಿಸಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಮೊದಲ ಸ್ಥಾನದಲ್ಲಿದೆ. ಬೀದರ್‌ನಲ್ಲಿ ಡಿ.12 ರಂದು ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಡಿ.20 ರಿಂದ 2026 ಜ.10 ರೊಳಗೆ ತಾಪಮಾನವು 5.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ. ಆಗ ಬೀದರ್ ಅಕ್ಷರಶಃ ಶೀತ ಪ್ರದೇಶವಾಗಿ ಬದಲಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕಲಬುರಗಿಯಲ್ಲಿ ಡಿ. 12 ರಂದು 13 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಇದು ಇನ್ನಷ್ಟು ಇಳಿಕೆಯಾಗಲಿದೆ. ಬೆಂಗಳೂರಿನಲ್ಲಿ ಡಿ.14 ರಂದು 12 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಈ ತಾಪಮಾನವು ಜನವರಿವರೆಗೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

ದಕ್ಷಿಣ ಕರ್ನಾಟಕದಲ್ಲೂ ಚಳಿಯ ಅಬ್ಬರ

ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ತಾಪಮಾನದಲ್ಲಿ ಗಣನೀಯವಾಗಿ ಕುಸಿದಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದಿನ ಎರಡು ಮೂರು ದಿನಗಳವರೆಗೆ ರಾತ್ರಿ ವೇಳೆ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳ ಬಳಿಕ ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. 2016 ಡಿ.11 ರಂದು ಬೆಂಗಳೂರಿನ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 2011 ಡಿ.24 ರಂದು ತಾಪಮಾನ 12.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದೇ ಈವರೆಗಿನ ಕಡಿಮೆ ತಾಪಮಾನವಾಗಿತ್ತು. ಈಗ ಇದೇ ತಾಪಮಾನವೂ ಕುಸಿದಿದ್ದು, ಡಿ.19ರವರೆಗೆ ಚಳಿಯ ತೀವ್ರತೆ ಹೆಚ್ಚಿರಲಿದೆ.

ತೀವ್ರ ಚಳಿಗೆ ಕಾರಣವೇನು?

ಲಾ ನಿನಾ ಪರಿಣಾಮವಾಗಿ ಪೆಸಿಫಿಕ್ ಮಹಾಸಾಗರದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಸಮುದ್ರ ಮೇಲ್ಮೈ ತಾಪಮಾನದಿಂದ ಉಂಟಾಗುವ ಹವಾಮಾನ ವಿದ್ಯಮಾನವು ಉತ್ತರದಿಂದ ತಂಪಾದ ಗಾಳಿಯ ದ್ರವ್ಯರಾಶಿಗಳು ದಕ್ಷಿಣಕ್ಕೆ ತಂದು ಬಿಡಲಿದೆ.

ಜೆಟ್ ಸ್ಟ್ರೀಮ್ಗಳು ಸಮುದ್ರಗಳಿಂದ ಶೀತ ಗಾಳಿಗಳನ್ನು ಹೊತ್ತು ಗಂಟೆಗೆ 1400 ಕಿ.ಮೀ ವೇಗದಲ್ಲಿ ಚಲಿಸಲಿವೆ. ಕೊನೆಗೆ ಹಿಮಾಲಯ ಪರ್ವತಕ್ಕೆ ಡಿಕ್ಕಿ ಹೊಡೆದು ದೇಶದೊಳಗೆ ಪ್ರವೇಶಿಸಿ ಚಳಿಯನ್ನು ಹೆಚ್ಚಿಸಲಿವೆ.

ಚಳಿಯಿಂದ ರಕ್ಷಿಸಿಕೊಳ್ಳಲು ಸೂಚನೆ

ಚಳಿ ಗಾಳಿಯ ತೀವ್ರತೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಪಾಲಿಸಬೇಕು. ವೃದ್ಧರು ಮತ್ತು ಚಿಕ್ಕ ಮಕ್ಕಳು ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು, ಅನಗತ್ಯವಾಗಿ ಬೆಳಗಿನ ಜಾವ ಮತ್ತು ರಾತ್ರಿ ಹೊತ್ತು ಮನೆಯಿಂದ ಹೊರಬರುವುದನ್ನು ನಿಲ್ಲಿಸಬೇಕು.

ಬೆಂಗಳೂರಿನಂತಹ ನಗರಗಳಲ್ಲಿ ತೀವ್ರ ಚಳಿಯಿಂದ ಗಾಳಿಯ ಗುಣಮಟ್ಟವೂ ಕುಸಿತ ಕಂಡಿದ್ದು, ಉಸಿರಾಟದ ಸಮಸ್ಯೆ ಇರುವವರು ಆದಷ್ಟು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದಲ್ಲಿ ತೀವ್ರ ಶೀತಗಾಳಿಯು ಡಿಸೆಂಬರ್ ಅಂತ್ಯದವರೆಗೂ ಮುಂದುವರಿಯಲಿದೆ. 2026 ಜನವರಿ 10 ರೊಳಗೆ ತಾಪಮಾನದ ಇಳಿಕೆ ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದಲ್ಲಿ ತೀವ್ರ ಚಳಿ

ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳು ಶೀತ ಗಾಳಿಯ ಹೊಡೆತಕ್ಕೆ ಒಳಗಾಗಿವೆ. ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ವಿಜಯನಗರದಂತಹ ಪ್ರದೇಶಗಳಲ್ಲಿ ತೀವ್ರ ಚಳಿಯ ಪರಿಸ್ಥಿತಿಗಳು ಕಂಡುಬರುತ್ತಿವೆ. ಈ ಪ್ರದೇಶಗಳ ಕೆಲವು ಭಾಗಗಳಲ್ಲಿ ಮುಂದಿನ ದಿನವೂ ಶೀತ ಗಾಳಿಯು ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದಕ್ಷಿಣ ಒಳನಾಡಿನಲ್ಲೂ ಚಳಿಯ ಅನುಭವ

ಚಳಿಯ ಪರಿಸ್ಥಿತಿಗಳು ಉತ್ತರ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮೈಸೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿಯೂ ಸಹ ಅಸಾಮಾನ್ಯವಾಗಿ ಕಡಿಮೆ ತಾಪಮಾನ ಕಂಡುಬರುತ್ತಿದೆ. ರಾಜ್ಯದಾದ್ಯಂತ ಶೀತ ಗಾಳಿಯು ಮುಂದುವರಿಯುತ್ತಿರುವುದರಿಂದ, ಅಧಿಕಾರಿಗಳು ಮುಂಜಾನೆ ಮತ್ತು ರಾತ್ರಿ ಸಮಯಗಳಲ್ಲಿ ವಿಶೇಷವಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಸಲಹೆ ನೀಡಿದ್ದಾರೆ.

Read More
Next Story