
ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಸಿಎಂ ಅಸಮರ್ಪಕ ಉತ್ತರ; ಬಿಜೆಪಿ ಸಭಾತ್ಯಾಗ
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸದನದ ಜವಾಬ್ದಾರಿ. ರಾಜ್ಯದಲ್ಲಿ ಹೆಚ್ಚು ಕಾಲ ಅಧಿಕಾರದಲ್ಲಿ ಇದ್ದವರು ನೀವು, ಅಭಿವೃದ್ಧಿಯಾಗಿಲ್ಲ ಎಂದರೆ ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಆರ್. ಅಶೋಕ್ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಯಚೂರನ್ನು ಹತ್ತಿ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು, ಐತಿಹಾಸಿಕ ತಾಣಗಳನ್ನು ಪ್ರವಾಸಿ ಕೇಂದ್ರಗಳಾಗಿ ಮಾಡಲಾಗುವುದು ಎಂದಿದ್ದ ರಾಜ್ಯ ಸರ್ಕಾರ ತನ್ನ ಭರವಸೆ ಮರೆತಿದೆ. ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಶುಕ್ರವಾರ ಸಭಾತ್ಯಾಗ ಮಾಡಿದವು.
ಸದನದಲ್ಲಿ ಶುಕ್ರವಾರ (ಡಿ.19) ಮಾತನಾಡಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್, "ನಾವು ಏನೇ ಪ್ರಶ್ನೇ ಕೇಳಿದರೂ ಸಿಎಂ ಸಿದ್ದರಾಮಯ್ಯ ಎಲ್ಲದಕ್ಕೂ ದೆಹಲಿಯತ್ತ ಬೊಟ್ಟು ಮಾಡಿದರೆ ಇಲ್ಲಿ ನೀವು ಏನು ಮಾಡಿದ್ದೀರಾ, ಮುಖ್ಯಮಂತ್ರಿಗಳೇ ದಾರಿ ತೋರಿಸಿ ಎಂದರೆ ನಮ್ಮನ್ನು ಕರೆದುಕೊಂಡು ಹೋಗಿ ಕಾಡಿನಲ್ಲಿ ಬಿಟ್ಟಿದ್ದಾರೆ. ಆರು ತಿಂಗಳ ಒಳಗೆ ಪ್ರೊ. ಗೋವಿಂದರಾವ್ ವರದಿ ಸ್ವೀಕರಿಸುತ್ತೇವೆ ಎಂದು ಕಳೆದ ಅಧಿವೇಶನದಲ್ಲೇ ಹೇಳಲಾಗಿತ್ತು. ಆದರೆ, ಈಗ ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಹೇಳುತ್ತಿದ್ದೀರಿ" ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸದನದ ಜವಬ್ದಾರಿ. ರಾಜ್ಯದಲ್ಲಿ ಹೆಚ್ಚು ಕಾಲ ಅಧಿಕಾರದಲ್ಲಿ ಇದ್ದವರು ನೀವು, ಇಷ್ಟು ವರ್ಷಗಳ ಕಾಲ ಅಭಿವೃದ್ಧಿಯಾಗಿಲ್ಲ ಎಂದರೆ ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಹೇಳಬೇಕು. ಲೋಕಸಭೆಯಲ್ಲಿ ಜಲ ಜೀವನ್ ಯೋಜನೆಯ ಬಗ್ಗೆ ಹಾಸನದ ಸಂಸದರು ಪ್ರಶ್ನೆ ಮಾಡಿದ್ದಾರೆ, ಬಿಲ್ ಕೊಟ್ಟರೆ ಹಣ ಬಿಡುಗಡೆ ಮಾಡುವ ಬಗ್ಗೆ ಉತ್ತರ ನೀಡಲಾಗಿದೆ ಎಂದರು.
ಸರ್ಕಾರ ಶ್ವೇತಪತ್ರ ಹೊರಡಿಸಲಿ
ಪ್ರತಿಪಕ್ಷಗಳು ಏನೇ ಪ್ರಶ್ನೆ ಕೇಳಿದರೂ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅದೇ ರಾಗ ಅದೇ ಹಾಡು ಹಾಡುತ್ತಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎಷ್ಟು ಹಣ ಬಿಡುಗಡೆ ಆಗಿದೆ ಎಂದು ಅಂಕಿ ಅಂಶಗಳ ಕುರಿತು ಸರ್ಕಾರ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು. ಸಿಎಂ ಸಿದ್ದರಾಮಯ್ಯ ಬರೀ ಭಾಷಣವಷ್ಟೇ ಮಾಡಿದ್ದಾರೆ. ಆದರೆ ಉತ್ತರ ಕರ್ನಾಟಕಕ್ಕೆ ಯಾವುದೇ ಹೊಸ ಘೋಷಣೆ ಮಾಡಿಲ್ಲ. ಉತ್ತರ ಕರ್ನಾಟಕಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿದರು.
ಬಿಜೆಪಿಯದು ಮಲತಾಯಿ ಧೋರಣೆ: ಸಿಎಂ ತಿರುಗೇಟು
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಸದನದಲ್ಲಿ ಚರ್ಚೆ ಮಾಡದೇ ಸಭಾತ್ಯಾಗ ಮಾಡುತ್ತಿರುವ ಬಿಜೆಪಿಯವರು ರಣ ಹೇಡಿಗಳು ಎಂದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

