
ಲೈಂಗಿಕ ಸಮಸ್ಯೆಗೆ ಆಯುರ್ವೇದ ಔಷಧ; ಟೆಕ್ಕಿಗೆ 48 ಲಕ್ಷ ರೂ. ವಂಚಿಸಿದ್ದ ನಕಲಿ ಗುರೂಜಿ ಬಂಧನ
ಆಯುರ್ವೇದಿಕ್ ಔಷಧ ಸೇವನೆಯಿಂದಲೇ ಕಿಡ್ನಿ ಹಾನಿಗೆ ಒಳಗಾಗಿದೆ ಎಂದು ವೈದ್ಯರು ಹೇಳಿದ್ದರು. ಆಗ ಟೆಕ್ಕಿ ತೇಜಸ್ ಹೋಗಿ ವಿಜಯ್ ಗುರೂಜಿಯನ್ನು ಪ್ರಶ್ನಿಸಿದಾಗ, ಸಮಸ್ಯೆ ಇನ್ನೂ ಹೆಚ್ಚಾಗುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ನೀಡುವುದಾಗಿ ನಂಬಿಸಿ ಐಟಿ ಉದ್ಯೋಗಿಯಿಂದ 48 ಲಕ್ಷ ರೂ. ಪಡೆದಿದ್ದ ವಂಚಕ ವಿಜಯ್ ಗುರೂಜಿ ಎಂಬಾತನನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಪೊಲೀಸರು ಬಂಧಿಸಿದ್ದಾರೆ.
ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಐಟಿ ಉದ್ಯೋಗಿ ತೇಜಸ್, ಚಿಕಿತ್ಸೆಗಾಗಿ ಕೆಂಗೇರಿ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆ ಪಕ್ಕದ ಟೆಂಟ್ನಲ್ಲಿ ‘‘ಲೈಂಗಿಕ ಸಮಸ್ಯೆಗೆ ಚಿಕಿತ್ಸೆ’’ ಎಂಬ ಬೋರ್ಡ್ ನೋಡಿ ಒಳಗೆ ಹೋಗಿದ್ದರು. ಅಲ್ಲಿ ವಿಜಯ್ ಗುರೂಜಿ ಪರಿಚಯವಾಗಿ, ಆಯುರ್ವೇದಿಕ್ ಚಿಕಿತ್ಸೆ ಮೂಲಕ ಸಮಸ್ಯೆ ಗುಣವಾಗುತ್ತದೆ ಎಂದು ನಂಬಿಸಿದ್ದರು.
ವಂಚಕ ಗುರೂಜಿ ತೇಜಸ್ ಗೆ ‘ದೇವರಾಜ್ ಬೂಟಿ’ ಎಂಬ 1 ಗ್ರಾಂ ಔಷಧಿಯನ್ನು 1.60 ಲಕ್ಷ ರೂ.ಗೆ ನೀಡಿದ್ದ.ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್ಗೆ ಹೋಗಿ ಮಾತ್ರೆಗಳು ಮತ್ತು ‘ದೇವರಾಜ್ ಬೂಟಿ’ಯನ್ನು ಖರೀದಿಸುವಂತೆ ಸೂಚಿಸಲಾಗಿತ್ತು.
ಆನ್ಲೈನ್ ಪೇಮೆಂಟ್ ಮಾಡಬಾರದು, ಯಾರನ್ನೂ ಜೊತೆಗೆ ಕರೆದುಕೊಂಡು ಬರಬಾರದು ಎಂದು ಷರತ್ತು ಹಾಕಲಾಗಿತ್ತು. ಅದೇ ರೀತಿ ಟೆಕ್ಕಿ ತೇಜಸ್ ಹಲವು ಬಾರಿ ‘ದೇವರಾಜ್ ಬೂಟಿ’ ಮತ್ತು ‘ಭವನ ಬೂಟಿ ತೈಲ' ಖರೀದಿಸಲು 48 ಲಕ್ಷ ರೂ. ಖರ್ಚು ಮಾಡಿದ್ದರು.
ಆದರೆ, ಔಷಧಿ ಸೇವಿಸಿದರೂ ಲೈಂಗಿಕ ಸಮಸ್ಯೆ ಪರಿಹಾರವಾಗದೇ, ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ತೇಜಸ್ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಗಂಭೀರ ಸಮಸ್ಯೆ ಉಂಟಾಗಿದೆ ಎಂಬುದು ಪತ್ತೆಯಾಗಿತ್ತು.
ಆಯುರ್ವೇದಿಕ್ ಔಷಧ ಸೇವನೆಯಿಂದಲೇ ಕಿಡ್ನಿ ಹಾನಿಗೆ ಒಳಗಾಗಿದೆ ಎಂದು ವೈದ್ಯರು ಹೇಳಿದ್ದರು. ಆಗ ಟೆಕ್ಕಿ ತೇಜಸ್ ಹೋಗಿ ವಿಜಯ್ ಗುರೂಜಿಯನ್ನು ಪ್ರಶ್ನಿಸಿದಾಗ, ವಾಗ್ವಾದ ನಡೆಸಿದ್ದ. ಅಲ್ಲದೇ ಸಮಸ್ಯೆ ಇನ್ನೂ ಹೆಚ್ಚಾಗುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಬಗ್ಗೆ ತೇಜಸ್ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ತನಿಖೆ ನಡೆಸಿದ ಪೊಲೀಸರು ವಿಜಯ್ ಗುರೂಜಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಯಶವಂತಪುರದ ವಿಜಯಲಕ್ಷ್ಮಿ ಆಯುರ್ವೇದಿಕ್ ಶಾಪ್ ಬಗ್ಗೆಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

