
ವಂಚನೆ ಆರೋಪದಡಿ ಗಾಯಕಿ ಮಂಗ್ಲಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
Singer Mangli| ಗಾಯಕಿ ಮಂಗ್ಲಿ ವಿರುದ್ಧ ವಂಚನೆ ಆರೋಪ: ಹೈದರಾಬಾದ್ನಲ್ಲಿ ಎಫ್ಐಆರ್ ದಾಖಲು
ಖ್ಯಾತ ಗಾಯಕಿ ಮಂಗ್ಲಿ ಅವರ ಮೇಲೆ ಹೂಡಿಕೆ ವಂಚನೆ ಮತ್ತು ಕೊಲೆ ಬೆದರಿಕೆ ಆರೋಪದಡಿ ಹೈದರಾಬಾದ್ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತೆಲುಗು ಮತ್ತು ಕನ್ನಡ ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಮಂಗ್ಲಿ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆಯ ಗಂಭೀರ ಆರೋಪ ಕೇಳಿಬಂದಿದೆ. ಮೈಕ್ರೋ ಫೈನಾನ್ಸ್ ಮತ್ತು ಉದ್ಯಮಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಸುಮಾರು 100ಕ್ಕೂ ಹೆಚ್ಚು ಜನರಿಂದ 9.5 ಸಾವಿರ ರೂ. ರಿಂದ 10 ಕೋಟಿ ರೂಪಾಯಿ ಸಂಗ್ರಹಿಸಿ, ಈಗ ಹಣವನ್ನೂ ನೀಡದೆ ವಂಚಿಸುತ್ತಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.
ಸಂತ್ರಸ್ತರ ಪರವಾಗಿ ನ್ಯಾಯ ಕೋರಲು ಮುಂದಾದ ವಕೀಲ ಸಿಂಗಪೋಗು ಸುಬ್ಬರಾವ್ ಅವರಿಗೆ ಮಂಗ್ಲಿ ಮತ್ತು ತಂಡ ಪ್ರಾಣಬೆದರಿಕೆ ಒಡ್ಡಿದೆ ಎನ್ನಲಾಗಿದೆ. "ಹೂಡಿಕೆದಾರರ ಹಣವನ್ನು ವಾಪಸ್ ನೀಡಿ ಎಂದು ಕೇಳಿದ್ದಕ್ಕೆ ಮಂಗ್ಲಿ, ಆಕೆಯ ಸಹೋದರ ಶಿವ ಮತ್ತು ನಿರ್ದೇಶಕ ವೇಣು ಉಡುಗುಲ ಅವರು ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರು ಅಪಘಾತ ಮಾಡಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ" ಎಂದು ವಕೀಲರು ಹೈದರಾಬಾದ್ನ ನಾಂಪಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ನಿರ್ದೇಶಕ ವೇಣು ಉಡುಗುಲ ಭಾಗಿ?
ಈ ವಿವಾದದಲ್ಲಿ ತೆಲುಗು ಸಿನಿಮಾ 'ವಿರಾಟ ಪರ್ವಂ' ಚಿತ್ರದ ಖ್ಯಾತ ನಿರ್ದೇಶಕ ವೇಣು ಉಡುಗುಲ ಅವರ ಹೆಸರು ಕೂಡ ಕೇಳಿಬಂದಿದೆ. ಹಣದ ವ್ಯವಹಾರದಲ್ಲಿ ಮಂಗ್ಲಿ ಅವರೊಂದಿಗೆ ವೇಣು ಕೂಡ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನೂ ಎಫ್ಐಆರ್ನಲ್ಲಿ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ದೂರಿನ ಪ್ರಕಾರ, ಆರೋಪಿಗಳು 'ಗೋಕುಲಾನಂದ ಇನ್ಫ್ರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್' ಎಂಬ ಸಂಸ್ಥೆಯ ಹೆಸರಿನಲ್ಲಿ ಹೂಡಿಕೆದಾರರನ್ನು ಸೆಳೆದಿದ್ದರು. ಆರಂಭದಲ್ಲಿ ಲಾಭದ ಆಸೆ ತೋರಿಸಿ ಹಣ ಪಡೆದ ನಂತರ, ಈಗ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಪಂಜಗುಟ್ಟ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

