ಲ್ಯಾಂಡ್‌ಲಾರ್ಡ್ ಚಿತ್ರದ ಮೇಲಿನ ಜಾತಿವಾದದ ಆರೋಪ;  ಉತ್ತರ ಕೊಟ್ಟ ದುನಿಯಾ ವಿಜಯ್
x

ಉಳ್ಳವರು ಮತ್ತು ಇಲ್ಲದವರ ನಡುವಿನ ಬಿರುಸಿನ ಕಾದಾಟವೇ 'ಲ್ಯಾಂಡ್‌ಲಾರ್ಡ್'. ಜಮೀನ್ದಾರಿಯ ದರ್ಪದ ವಿರುದ್ಧ ಸಾಮಾನ್ಯ ವ್ಯಕ್ತಿಯ ಸಾಂವಿಧಾನಿಕ ಆಕ್ರೋಶದ ಈ ಚಿತ್ರ, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ.

'ಲ್ಯಾಂಡ್‌ಲಾರ್ಡ್' ಚಿತ್ರದ ಮೇಲಿನ ಜಾತಿವಾದದ ಆರೋಪ; ಉತ್ತರ ಕೊಟ್ಟ ದುನಿಯಾ ವಿಜಯ್

ದುನಿಯಾ ವಿಜಯ್ ಮತ್ತು ರಾಜ್ ಬಿ. ಶೆಟ್ಟಿ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ 80ರ ದಶಕದ ಗ್ರಾಮೀಣ ಕರ್ನಾಟಕದ ಭೂ ಸಂಘರ್ಷದ ಕಥೆ.


Click the Play button to hear this message in audio format

ನಟ ದುನಿಯಾ ವಿಜಯ್‌ ಹಾಗೂ ರಚಿತಾ ರಾಮ್‌ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾಗೆ ಪ್ರೇಕ್ಷಕರಿಂದ ಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿಶೇಷವಾಗಿ ಈ ಸಿನಿಮಾದ ಕೆಲವು ಅಂಶಗಳು ನಿರ್ದಿಷ್ಟ ಜಾತಿಗಳ ಪರವಾಗಿವೆ ಎಂಬ ವಿಮರ್ಶೆಗಳಿಗೆ ನಟ ಸ್ಪಷ್ಟನೆ ನೀಡಿದ್ದಾರೆ.

ನನ್ನ ಮೂಲ ಉದ್ದೇಶಕ್ಕೂ ಪ್ರೇಕ್ಷಕರ ಈ ವ್ಯಾಖ್ಯಾನಗಳಿಗೂ ಯಾವುದೇ ಸಂಬಂಧವಿಲ್ಲ. ಇದನ್ನು ಸಮೀಕರಿಸುವುದು ನನಗೆ ಕಷ್ಟವಾಗುತ್ತಿದೆ. ಚಿತ್ರವು ಯಾವುದೇ ಹಂತದಲ್ಲೂ ಜಾತಿ ತಾರತಮ್ಯ ಅಥವಾ ಶ್ರೇಣೀಕೃತ ವ್ಯವಸ್ಥೆಯನ್ನು ಬೆಂಬಲಿಸುವುದಿಲ್ಲ. ಬದಲಾಗಿ ಸಮಾಜದ ಬಗ್ಗೆ ಗಂಭೀರ ಚಿಂತನೆಗೆ ಮಾಡುವ ಉದ್ದೇಶವನ್ನು ಈ ಸಿನಿಮಾ ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಚಿತ್ರದ ಕಲ್ಪನೆ ಮೂಡಿದ್ದು ಒಂದು ಆತ್ಮಾವಲೋಕನದ ಕ್ಷಣದಲ್ಲಿ ಎಂದು ಅವರು ವಿವರಿಸಿದ್ದಾರೆ. ಭಾರತದ ಬಹುತೇಕ ಯಶಸ್ವಿ ಚಿತ್ರಗಳು ವಿವಾಹೇತರ ಸಂಬಂಧಗಳ ಸುತ್ತವೇ ಸುತ್ತುತ್ತಿವೆ ಎಂಬ ಲೇಖನವೊಂದನ್ನು ಓದುತ್ತಿದ್ದೆ. ಆಗ ಸಮಾಜಕ್ಕೆ ಅದಕ್ಕಿಂತ ಭಿನ್ನವಾದ ಮತ್ತು ಉತ್ತಮವಾದ ಸಂದೇಶವನ್ನು ನೀಡುವ ಸಿನಿಮಾ ಮಾಡಬೇಕು ಎಂಬ ಹಂಬಲದಿಂದ ಈ ಚಿತ್ರದ ಕಥೆ ಹುಟ್ಟಿಕೊಂಡಿತು ಎಂದು ಅವರು ತಿಳಿಸಿದ್ದಾರೆ.

ಅರಿವು ಬೆಳೆಸಿಕೊಂಡರೆ ತಪ್ಪೇನು?

ಸಂವಿಧಾನದ ಮಹತ್ವದ ಬಗ್ಗೆ ಮಾತನಾಡುತ್ತಾ ಸಂವಿಧಾನ ಎನ್ನುವುದು ಕೇವಲ ಸರ್ಕಾರಿ ಕಚೇರಿಗಳಿಗೆ ಸೀಮಿತವಾದ ಉನ್ನತ ದಾಖಲೆಯಲ್ಲ. ಸಾಮಾನ್ಯ ವ್ಯಕ್ತಿಯೂ ಅದರ ಬಗ್ಗೆ ಅರಿವು ಬೆಳೆಸಿಕೊಂಡರೆ ತನ್ನ ಹಕ್ಕುಗಳ ಬಗ್ಗೆ ಜಾಗೃತರಾಗಬಹುದು. ಈ ಜಾಗೃತಿಯೇ ಸಮಾಜದಲ್ಲಿ ಬದಲಾವಣೆ ತರಬಲ್ಲದು ಮತ್ತು ಅದನ್ನು ಚಿತ್ರದಲ್ಲಿ ತೋರಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಸಿನಿಮಾ ಕಲಾವಿದನಾಗಿ ಸಮಾಜದ ಪ್ರತಿಬಿಂಬವನ್ನು ತೆರೆಯ ಮೇಲೆ ತೋರಿಸುವುದು ನನ್ನ ಜವಾಬ್ದಾರಿ. ಆದರೆ ಅದನ್ನು ಹೇಗೆ ಸ್ವೀಕರಿಸಬೇಕು ಮತ್ತು ಅದರಿಂದ ಯಾವ ಅಭಿಪ್ರಾಯ ರೂಪಿಸಿಕೊಳ್ಳಬೇಕು ಎಂಬುದು ಪ್ರೇಕ್ಷಕರಿಗೆ ಬಿಟ್ಟ ನಿರ್ಧಾರ ಎಂದು ಅವರು ಹೇಳಿದ್ದಾರೆ.

'ಲ್ಯಾಂಡ್‌ಲಾರ್ಡ್' ಸಿನಿಮಾ 1980ರ ದಶಕದ ಗ್ರಾಮೀಣ ಕರ್ನಾಟಕದ ಹಿನ್ನೆಲೆಯಲ್ಲಿ ನಡೆಯುವ ಕಥೆ. ಭೂಮಿ, ಹಕ್ಕು ಮತ್ತು ನ್ಯಾಯದ ಸುತ್ತ ಈ ಚಿತ್ರದ ಕಥಾಹಂದರ ಸಾಗುತ್ತದೆ. ಚಿತ್ರದ ನಾಯಕ ರಾಚಯ್ಯ , ತನ್ನ ಹೆಂಡತಿ ನಿಂಗವ್ವ ಮತ್ತು ಮಗಳು ಭಾಗ್ಯ ಜೊತೆ ನೆಮ್ಮದಿಯಾಗಿ ಬದುಕಲು ಬಯಸುವ ಸಾಮಾನ್ಯ ಕಾರ್ಮಿಕ. ತನ್ನ ಪಾಲಿಗೂ ಒಂದು ಪುಟ್ಟ ಭೂಮಿ ಇರಬೇಕು ಎಂಬುದು ಆತನ ಕನಸು. ಇಡೀ ಊರನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಕ್ರೂರ ಭೂಮಾಲೀಕ 'ಸಣ್ಣ ಧಣಿ' ವಿರುದ್ಧ ರಾಚಯ್ಯ ಹೇಗೆ ಸಿಡಿದು ನಿಲ್ಲುತ್ತಾನೆ ಮತ್ತು ಸಂವಿಧಾನದ ಅರಿವಿನೊಂದಿಗೆ ತನ್ನ ಹಕ್ಕುಗಳನ್ನು ಹೇಗೆ ಪಡೆದುಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ.

ಈ ಸಿನಿಮಾದಲ್ಲಿ ದುನಿಯಾ ವಿಜಯ್, ರಾಜ್‌ ಬಿ. ಶೆಟ್ಟಿ, ರಚಿತಾ ರಾಮ್, ರಿತನ್ಯಾ ವಿಜಯ್ ಸೇರಿದಂತೆ, ಉಮಾಶ್ರೀ, ಅಚ್ಯುತ್ ಕುಮಾರ್, ಶಿಶಿರ್ ಬೈಕಾಡಿ ಮತ್ತು ರಾಕೇಶ್ ಅಡಿಗ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸ್ವಾಮಿ ಜೆ. ಗೌಡ ಅವರ ಛಾಯಾಗ್ರಹಣವಿದೆ. ಸಾರಥಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕೆ.ವಿ. ಸತ್ಯಪ್ರಕಾಶ್ ಮತ್ತು ಕೆ.ಎಸ್. ಸೂರಜ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

Read More
Next Story