
Actor Niranjan Attacked| ದರ್ಶನ್ ಆಪ್ತ, ಸ್ಯಾಂಡಲ್ವುಡ್ ನಟನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ
ನಟ ದರ್ಶನ್ ಅವರ 'ಒಡೆಯ' ಸಿನಿಮಾ ಖ್ಯಾತಿಯ ನಿರಂಜನ್ ಮೇಲೆ ಬೆಂಗಳೂರಿನ ಬಾರ್ನಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಒಡೆಯ' ಸಿನಿಮಾ ಖ್ಯಾತಿಯ ನಟ ನಿರಂಜನ್ ಅವರ ಮೇಲೆ ಬೆಂಗಳೂರಿನಲ್ಲಿ ಭೀಕರ ಹಲ್ಲೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೀರು ಕುಡಿಯುವ ವಿಚಾರಕ್ಕೆ ಶುರುವಾದ ಸಣ್ಣ ಜಗಳ, ಕೊನೆಗೆ ಬಿಯರ್ ಬಾಟಲಿಯಿಂದ ದಾಳಿ ನಡೆಸುವ ಮಟ್ಟಕ್ಕೆ ತಲುಪಿದ್ದು ಸ್ಯಾಂಡಲ್ವುಡ್ನಲ್ಲಿ ಆತಂಕ ಮೂಡಿಸಿದೆ.
ಏನಿದು ಘಟನೆ?
ಕೆಲವು ದಿನಗಳ ಹಿಂದೆ ನಟ ನಿರಂಜನ್ ಅವರು ಬೆಂಗಳೂರಿನ ಮಂತ್ರಿ ಅಲೈನ್ಸ್ ಸಮೀಪವಿರುವ ಬಾರ್ ಒಂದಕ್ಕೆ ತೆರಳಿದ್ದರು. ಈ ವೇಳೆ ಅವರು ನೀರು ಕುಡಿಯಲು ಕಿಚನ್ ಭಾಗಕ್ಕೆ ಹೋದಾಗ, ಅಲ್ಲಿ ವ್ಯಕ್ತಿಯೊಬ್ಬ ಅಚಾನಕ್ ಆಗಿ ಇವರನ್ನು ತಳ್ಳಿದ್ದಾನೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.
ಬಿಯರ್ ಬಾಟಲಿಯಿಂದ ದಾಳಿ
ಜಗಳ ತಾರಕಕ್ಕೇರುತ್ತಿದ್ದಂತೆ, ಸ್ಥಳಕ್ಕೆ ಬಂದ ಮತ್ತೊಂದು ಗುಂಪು ಏಕಾಏಕಿ ನಿರಂಜನ್ ಮೇಲೆ ಮುಗಿಬಿದ್ದಿದೆ. ಈ ವೇಳೆ ಬಿಯರ್ ಬಾಟಲಿಯನ್ನು ಬಳಸಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯು ಪೂರ್ವನಿಯೋಜಿತವೇ ಅಥವಾ ಅನಿರೀಕ್ಷಿತವಾಗಿ ನಡೆದ ಗಲಾಟೆಯೇ ಎಂಬ ಗೊಂದಲ ಸೃಷ್ಟಿಯಾಗಿದೆ.
ಪೊಲೀಸ್ ದೂರು ದಾಖಲು
ಹಲ್ಲೆಯ ಬೆನ್ನಲ್ಲೇ ನಟ ನಿರಂಜನ್ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದವರು ಯಾರು ಮತ್ತು ಹಲ್ಲೆಗೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

