ರಶ್ಮಿಕಾ-ವಿಜಯ್‌ ಆರತಕ್ಷತೆ|ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ʻಶ್ರೀವಲ್ಲಿʼ- ಡಿಕೆಶಿಯಿಂದ ಶುಭ ಹಾರೈಕೆ
x
ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡಗೆ ಹಾರೈಸಿದ ಡಿಕೆಶಿ

ರಶ್ಮಿಕಾ-ವಿಜಯ್‌ ಆರತಕ್ಷತೆ|ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ʻಶ್ರೀವಲ್ಲಿʼ- ಡಿಕೆಶಿಯಿಂದ ಶುಭ ಹಾರೈಕೆ

Rashmika-Vijay Reception|ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಅದ್ಧೂರಿ ಆರತಕ್ಷತೆಯು ಬುಧವಾರ ಹೈದರಾಬಾದ್‌ನಲ್ಲಿ ನೆರವೇರಿತು.


Click the Play button to hear this message in audio format

ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್‌ ಜೋಡಿಗಳಲ್ಲೊಂದಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಕಳೆದ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್‌ನಲ್ಲಿ ಅತ್ಯಂತ ಖಾಸಗಿಯಾಗಿ ನಡೆದ ವಿವಾಹ ಮಹೋತ್ಸವದ ನಂತರ, ಬುಧವಾರ ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ನೆರವೇರಿತು.

ಮೈಸೂರು ಸಿಲ್ಕ್ ಸೀರೆಯಲ್ಲಿ ರಶ್ಮಿಕಾ !

ಈ ಸಂಭ್ರಮದ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದು ರಶ್ಮಿಕಾ ಮಂದಣ್ಣ ಅವರ ಸಾಂಪ್ರದಾಯಿಕ ಉಡುಗೆ. ಆಧುನಿಕ ಫ್ಯಾಷನ್ ಬದಿಗಿಟ್ಟು ನಮ್ಮ ಕರ್ನಾಟಕದ ಹೆಮ್ಮೆಯ ಕೆಂಪು ಬಣ್ಣದ 'ಮೈಸೂರು ಸಿಲ್ಕ್' ಸೀರೆಯಲ್ಲಿ ರಶ್ಮಿಕಾ ಮಿರಮಿರ ಮಿಂಚುತ್ತಿದ್ದರು. ಇನ್ನೊಂದೆಡೆ ವರ ವಿಜಯ್ ದೇವರಕೊಂಡ ಕೂಡ ಅತ್ಯಂತ ಸರಳವಾಗಿ ಬಿಳಿ ಪಂಚೆ ಮತ್ತು ಅಂಗಿ ಧರಿಸಿ ಅಪ್ಪಟ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಈ ಜೋಡಿಯ ಸಾಂಪ್ರದಾಯಿಕ ಆಯ್ಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಒಳಗಾಗುತ್ತಿದೆ.

ಡಿಕೆಶಿ ಶುಭ ಹಾರೈಕೆ

ಸಿನಿಮಾ ಮತ್ತು ರಾಜಕೀಯ ರಂಗದ ಪ್ರಮುಖರ ಸಂಗಮಕ್ಕೆ ಈ ಸಮಾರಂಭ ಸಾಕ್ಷಿಯಾಯಿತು. ವಿಶೇಷವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈದರಾಬಾದ್‌ನಲ್ಲಿ ನವದಂಪತಿಗಳಿಗೆ ಹೂಗುಚ್ಛ ನೀಡಿ ಆಶೀರ್ವದಿಸಿದರು. ಈ ವೇಳೆ ರಶ್ಮಿಕಾ ಹಾಗೂ ವಿಜಯ್ ಅವರ ಕುಟುಂಬಸ್ಥರೊಂದಿಗೆ ಕೆಲಕಾಲ ಸಂವಾದ ನಡೆಸಿದರು. ರಶ್ಮಿಕಾ ಅವರ ತಾಯಿ ಕೊಡವ ಶೈಲಿಯ ಸೀರೆಯನ್ನು ಧರಿಸಿ ತಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದು ಸಮಾರಂಭದ ಮತ್ತೊಂದು ವಿಶೇಷ.

ಭದ್ರತೆ ಹೆಚ್ಚು

ಉದಯಪುರದಲ್ಲಿ ನಡೆದ ವಿವಾಹದಂತೆಯೇ, ಹೈದರಾಬಾದ್‌ನ ಈ ಆರತಕ್ಷತೆಗೂ ಕಟ್ಟುನಿಟ್ಟಿನ ಭದ್ರತೆ ಏರ್ಪಡಿಸಲಾಗಿತ್ತು. ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶವಿದ್ದ ಈ ಕಾರ್ಯಕ್ರಮದಲ್ಲಿ ಟಾಲಿವುಡ್‌ನ ಖ್ಯಾತ ನಟ-ನಟಿಯರು ಹಾಗೂ ಆಪ್ತ ಗೆಳೆಯರು ಭಾಗವಹಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ 'ವಿರೋಶ್' ಜೋಡಿಯ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು 'ಮೇಡ್ ಫಾರ್ ಈಚ್ ಅದರ್' ಎಂದು ಕಮೆಂಟ್ ಮಾಡುವ ಮೂಲಕ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

Read More
Next Story