
ಖ್ಯಾತ ಬಾಲಿವುಡ್ ಹಾಸ್ಯ ನಟ ರಾಜ್ಪಾಲ್ ಯಾದವ್ ಅವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ.
ಚೆಕ್ ಬೌನ್ಸ್ ಪ್ರಕರಣ| ನಟ ರಾಜ್ಪಾಲ್ ಯಾದವ್ಗೆ ದೆಹಲಿ ಹೈಕೋರ್ಟ್ನಿಂದ ಬಿಗ್ ರಿಲೀಫ್
ಸುಮಾರು 9 ಕೋಟಿ ರೂಪಾಯಿಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲು ಸೇರಿದ್ದ ನಟ ರಾಜ್ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಮಾರ್ಚ್ 18ರವರೆಗೆ ಮಧ್ಯಂತರ ಜಾಮೀನು ನೀಡಿದೆ.
ಕಳೆದ 11 ದಿನಗಳಿಂದ ತಿಹಾರ್ ಜೈಲಿನಲ್ಲಿದ್ದ ಖ್ಯಾತ ಬಾಲಿವುಡ್ ಹಾಸ್ಯ ನಟ ರಾಜ್ಪಾಲ್ ಯಾದವ್ ಅವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. 9ಕೋಟಿ ಹಣದ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ್ದ ನಟನಿಗೆ ದೆಹಲಿ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 19 ರಂದು ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆಯಲಿರುವ ತಮ್ಮ ಸೊಸೆಯ ಮದುವೆಯಲ್ಲಿ ಪಾಲ್ಗೊಳ್ಳಲು ನಟನಿಗೆ ಈ ತಾತ್ಕಾಲಿಕ ರಿಲೀಫ್ ನೀಡಲಾಗಿದೆ.
ಕೋರ್ಟ್ ವಿಧಿಸಿದ ಷರತ್ತುಗಳೇನು?
ರಾಜ್ಪಾಲ್ ಯಾದವ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರಿದ್ದ ಪೀಠವು, ಮಧ್ಯಾಹ್ನ 3 ಗಂಟೆಯೊಳಗೆ 1.5 ಕೋಟಿ ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್ (DD) ಅನ್ನು ದೂರುದಾರರ ಖಾತೆಗೆ ಜಮೆ ಮಾಡುವಂತೆ ಆದೇಶಿಸಿತ್ತು. ಅದರಂತೆ ನಟನ ವಕೀಲರು ನಿಗದಿತ ಸಮಯದೊಳಗೆ ಹಣ ಪಾವತಿಸಿದ ದಾಖಲೆಗಳನ್ನು ಸಲ್ಲಿಸಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಮಾರ್ಚ್ 18 ರವರೆಗೆ ಮಧ್ಯಂತರ ಜಾಮೀನು ನೀಡಿದ್ದು, ನಟನ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚಿಸಿದೆ. ಒಂದು ವೇಳೆ ಇಂದು ಹಣ ಪಾವತಿಸದಿದ್ದರೆ ನಾಳೆ ಬೆಳಿಗ್ಗೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಎಚ್ಚರಿಸಿತ್ತು.
ನ್ಯಾಯಾಲಯದಿಂದ ನಟನಿಗೆ ತೀವ್ರ ಛೀಮಾರಿ
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ರಾಜ್ಪಾಲ್ ಯಾದವ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿತು. "ನೀವು ಜೈಲಿನಲ್ಲಿರುವುದು ನ್ಯಾಯಾಲಯದ ಆದೇಶದಿಂದಲ್ಲ, ಬದಲಾಗಿ ನಿಮ್ಮ ಸ್ವಂತ ಕೃತ್ಯಗಳಿಂದ" ಎಂದು ನ್ಯಾಯಪೀಠವು ಹೇಳಿತು. ಸಾಲ ಮರುಪಾವತಿಗೆ ಈ ಹಿಂದೆ ಸುಮಾರು 25 ರಿಂದ 30 ಬಾರಿ ಅವಕಾಶಗಳನ್ನು ನೀಡಿದ್ದರೂ ನಟ ವಿಫಲರಾಗಿದ್ದಾರೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಈಗ ಶಿಕ್ಷೆಗೆ ತಡೆಯಾಜ್ಞೆ ಕೇಳುತ್ತಿರುವುದು ಏಕೆ ಎಂದು ಪ್ರಶ್ನಿಸಿದ ನ್ಯಾಯಾಲಯವು, ಸಾಲ ಪಡೆದಿರುವುದನ್ನು ಈಗಾಗಲೇ ಒಪ್ಪಿಕೊಂಡಿರುವಾಗ ಕ್ಷಮೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಏನಿದು ವಿವಾದ?
2012 ರಲ್ಲಿ ರಾಜ್ಪಾಲ್ ಯಾದವ್ ಅವರು ಮೊದಲ ಬಾರಿಗೆ ನಿರ್ದೇಶಿಸಿದ್ದ ʻಆಟ ಪಟಾ ಲಪಟಾʼ ಚಿತ್ರದ ನಿರ್ಮಾಣಕ್ಕಾಗಿ ಅವರು ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ನಿಂದ 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿದ್ದರಿಂದ ನಟನಿಗೆ ದೊಡ್ಡ ನಷ್ಟವಾಯಿತು. ಕಾಲಕ್ರಮೇಣ ಬಡ್ಡಿಯೂ ಸೇರಿ ಈ ಸಾಲದ ಮೊತ್ತ 9 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಮುರಳಿ ಪ್ರಾಜೆಕ್ಟ್ಸ್ ಕಾನೂನು ಹೋರಾಟ ಆರಂಭಿಸಿತ್ತು. ಈಗಾಗಲೇ ಈ ಪ್ರಕರಣದಲ್ಲಿ ರಾಜ್ಪಾಲ್ ಯಾದವ್ ಎರಡು ಬಾರಿ ಜೈಲು ಸೇರಿದ್ದಾರೆ.
ಬೆಂಬಲಕ್ಕೆ ನಿಂತ ಬಾಲಿವುಡ್ ತಾರೆಯರು
ರಾಜ್ಪಾಲ್ ಯಾದವ್ ಸಂಕಷ್ಟದಲ್ಲಿದ್ದಾಗ ಬಾಲಿವುಡ್ನ ಹಲವು ತಾರೆಯರು ಸಹಾಯಕ್ಕೆ ಧಾವಿಸಿದ್ದಾರೆ. ಸಲ್ಮಾನ್ ಖಾನ್, ಅಜಯ್ ದೇವಗನ್, ಸೋನು ಸೂದ್, ವರುಣ್ ಧವನ್ ಮತ್ತು ಮಿಕಾ ಸಿಂಗ್ ಸೇರಿದಂತೆ ಹಲವರು ಆರ್ಥಿಕವಾಗಿ ಅಥವಾ ನೈತಿಕವಾಗಿ ಬೆಂಬಲ ನೀಡಿದ್ದಾರೆ. ಪಶ್ಚಿಮ ಭಾರತ ಸಿನಿ ನೌಕರರ ಒಕ್ಕೂಟ ಕೂಡ ನಟನ ನೆರವಿಗೆ ಬರುವಂತೆ ಮನವಿ ಮಾಡಿದೆ. ಉದ್ಯಮದ ಗಣ್ಯರು ತೋರಿದ ಪ್ರೀತಿಗೆ ನಟನ ಪತ್ನಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯು ಮಾರ್ಚ್ 18 ರಂದು ನಡೆಯಲಿದ್ದು, ಅಲ್ಲಿಯವರೆಗೆ ರಾಜ್ಪಾಲ್ ಯಾದವ್ ಜೈಲಿನಿಂದ ಹೊರಬರಲಿದ್ದಾರೆ.

