
2nd PUC Results| ಶಿಕ್ಷೆಯ ಜೊತೆಗೆ ಶಿಕ್ಷಣ! ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿ ಈಗ ಪಿಯುಸಿ ಟಾಪರ್
ಬಳ್ಳಾರಿ ಕೇಂದ್ರ ಕಾರಾಗೃಹದ ಜೀವಾವಧಿ ಶಿಕ್ಷಾಬಂಧಿ ಅಶೋಕ್ ಕುಮಾರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 481 ಅಂಕಗಳನ್ನು ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.
ಸೋಲು ಮತ್ತು ಸಂಕಷ್ಟಗಳು ಮನುಷ್ಯನ ದಾರಿಯನ್ನು ತಡೆಯಬಲ್ಲವೇ ಹೊರತು, ಸಾಧಿಸುವ ಛಲವನ್ನಲ್ಲ. ಇದಕ್ಕೆ ಜೀವಂತ ಸಾಕ್ಷಿಯಂಬಂತೆ, ಬಳ್ಳಾರಿ ಕೇಂದ್ರ ಕಾರಾಗೃಹದ ನಾಲ್ಕು ಗೋಡೆಗಳ ನಡುವೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾನೆ. ಸಮಾಜದಿಂದ ದೂರವಿದ್ದರೂ, ಕತ್ತಲ ಕೋಣೆಯನ್ನೇ ಅಭ್ಯಾಸದ ಮನೆಯನ್ನಾಗಿ ಮಾಡಿಕೊಂಡ ಈ ಕೈದಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 80ಕ್ಕೂ ಅಧಿಕ ಅಂಕಗಳನ್ನು ಗಳಿಸಿ ಎಲ್ಲರ ಹುಬ್ಬೇರಿಸಿದ್ದಾನೆ. ಶಿಕ್ಷೆ ಎನ್ನುವುದು ಕೇವಲ ದಂಡನೆಯಲ್ಲ, ಅದು ಸುಧಾರಣೆಯ ಹಾದಿಯೂ ಹೌದು ಎಂಬುದಕ್ಕೆ ಈ ಯುವಕನ ಸಾಧನೆ ಹೊಸ ಭರವಸೆ ನೀಡಿದೆ.
ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಶೋಕ್ ಕುಮಾರ್, ಕಲಾ ವಿಭಾಗದಲ್ಲಿ 600ಕ್ಕೆ 481 ಅಂಕಗಳನ್ನು ಗಳಿಸುವ ಮೂಲಕ ಶೇ. 80.1 ರಷ್ಟು ಸಾಧನೆ ಮಾಡಿದ್ದಾರೆ. ಅಶೋಕ್ ಕುಮಾರ್ ಅವರು ಇತಿಹಾಸ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ್ದು, ಉಳಿದ ವಿಷಯಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾನೆ:
• ಇತಿಹಾಸ: 94
• ಅರ್ಥಶಾಸ್ತ್ರ: 84
• ಕನ್ನಡ: 82
• ಸಮಾಜಶಾಸ್ತ್ರ: 77
• ರಾಜ್ಯಶಾಸ್ತ್ರ: 75
• ಇಂಗ್ಲಿಷ್: 69
ಜೈಲಿನ ಸೆಲ್ನಲ್ಲಿಯೇ ಅಧ್ಯಯನ
ಕಳೆದ 7 ವರ್ಷಗಳಿಂದ ಜೈಲಿನಲ್ಲಿರುವ ಅಶೋಕ್ ಕುಮಾರ್, ತನ್ನ ತಪ್ಪಿನ ಅರಿವಿನ ನಡುವೆಯೂ ಶಿಕ್ಷಣದ ಕಡೆಗೆ ಒಲವು ತೋರಿದ್ದರು. ಜೈಲಿನ ಅಧಿಕಾರಿಗಳ ಸಹಕಾರದೊಂದಿಗೆ ಪ್ರತ್ಯೇಕ ಸೆಲ್ನಲ್ಲಿಯೇ ಅಧ್ಯಯನ ನಡೆಸಿದ್ದ ಇವರು, ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದರು. ಜೈಲಿನ ಬಿಗಿ ಭದ್ರತೆಯ ನಡುವೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದ ಇವರ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ.
ಡಿಜಿಪಿ ಅಲೋಕ್ ಕುಮಾರ್ ಶ್ಲಾಘನೆ
ಈ ಅನಿರೀಕ್ಷಿತ ಸಾಧನೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಅಲೋಕ್ ಕುಮಾರ್ ಅವರು ಶ್ಲಾಘಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಜೈಲಿನ ಗೋಡೆಗಳು ಅಶೋಕ್ ಅವರ ಭವಿಷ್ಯದ ಮೇಲಿನ ಭರವಸೆಯನ್ನು ಇನ್ನೂ ಹುಸಿಗೊಳಿಸಿಲ್ಲ ಎಂಬುದು ಸಂತೋಷದ ವಿಚಾರ. ಅವರ ಈ ಸಾಧನೆ ಹೃದಯಸ್ಪರ್ಶಿಯಾಗಿದೆ" ಎಂದು ಬರೆದುಕೊಂಡಿದ್ದಾರೆ.
ಈ ಘಟನೆಯು ಜೈಲು ಕೇವಲ ಶಿಕ್ಷಿಸುವ ಸ್ಥಳವಲ್ಲ, ಬದಲಿಗೆ ವ್ಯಕ್ತಿಯನ್ನು ಸುಧಾರಿಸುವ ಮತ್ತು ಹೊಸ ಬದುಕು ಕಟ್ಟಿಕೊಳ್ಳಲು ದಾರಿ ತೋರಿಸುವ ಕೇಂದ್ರವೂ ಆಗಬಲ್ಲದು ಎಂಬುದನ್ನು ಸಾಬೀತುಪಡಿಸಿದೆ.

