ಚೆನ್ನೈನಲ್ಲಿ 'ನ್ಯಾಯೋಚಿತ ಕ್ಷೇತ್ರ ಪುನರ್ ವಿಂಗಡಣೆ'ಗಾಗಿ ಬಹು-ರಾಜ್ಯ ಸಭೆ; ಡಿಕೆ ಶಿವಕುಮಾರ್ ಭಾಗಿ
ಸಭೆಗೆ ಮುಂಚಿತವಾಗಿ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಎಲ್ಲಾ ನಾಯಕರನ್ನು ಸ್ವಾಗತಿಸಿ ಟ್ವೀಟ್ ಮಾಡಿದರು.;
ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆ (Delimitation) ನಿಂದ ಪ್ರಾತಿನಿಧ್ಯ ಕಳೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿರುವ ರಾಜ್ಯಗಳ ಮೊದಲ ಜಂಟಿ ಕ್ರಿಯಾ ಸಮಿತಿ (JAC) ಸಭೆಯನ್ನು ತಮಿಳುನಾಡು ಆಯೋಜಿಸಿದೆ. ಶನಿವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ಈ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಪಾಲ್ಗೊಂಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಭಾರತದ ಫೆಡರಲ್ ತತ್ವಗಳನ್ನು ರಕ್ಷಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೈಗೊಂಡಿರುವ ಉಪಕ್ರಮ ಶ್ಲಾಘನೀಯ. ಜನಸಂಖ್ಯೆಯ ಆಧಾರದಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ವ್ಯವಸ್ಥೆಪಡಿಸುವುದು ಇತರ ರಾಜ್ಯಗಳ ಮೇಲೆ ರಾಜಕೀಯ ದಾಳಿಯಾಗುತ್ತದೆ. ಇದು ಕೇವಲ ಪ್ರಾರಂಭ! ನಮ್ಮ ಹೋರಾಟ ವಿಜಯದತ್ತ ನಡೆಯಲಿದೆ. ರಾಜ್ಯದ ಹಕ್ಕುಗಳನ್ನು ನಾವು ಬಿಟ್ಟುಕೊಡುವುದಿಲ್ಲ. ಇದು ಉತ್ತರ ಮತ್ತು ದಕ್ಷಿಣದ ನಡುವಿನ ಸಂಘರ್ಷವಲ್ಲ; ಇದು ಒಕ್ಕೂಟ ವ್ಯವಸ್ಥೆಯ ಭವಿಷ್ಯಕ್ಕಾಗಿನ ಹೋರಾಟ." ಎಂದು ಹೇಳಿದರು
ಮಾರ್ಚ್ 5ರಂದು ಚೆನ್ನೈನಲ್ಲಿ ನಡೆದ ಸರ್ವಪಕ್ಷ ಸಭೆಯ ನಂತರ, ಚೆನ್ನೈನ ಐಟಿಸಿ ಚೋಳದಲ್ಲಿ ಜೆಎಸಿ ಸಭೆ ಆಯೋಜಿಸಲಾಗಿತ್ತು. ಸಭೆಗೆ ಮುಂಚಿತವಾಗಿ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಎಲ್ಲಾ ನಾಯಕರನ್ನು ಸ್ವಾಗತಿಸಿ ಟ್ವೀಟ್ ಮಾಡಿದರು. ಅವರು ಹೇಳಿದರು, "ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ ರಾಜ್ಯಗಳು ನ್ಯಾಯೋಚಿತ ಕ್ಷೇತ್ರ ಪುನರ್ ವಿಂಗಡಣೆ (#FairDelimitation) ಖಚಿತಪಡಿಸಿಕೊಳ್ಳುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಲು ಒಗ್ಗೂಡಿದ ದಿನವಾಗಿ ಈ ದಿನ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ." ಎಂದು ಬರೆದುಕೊಂಡಿದ್ದಾರೆ.
ಚೆನ್ನೈ ಕಾರ್ಪೊರೇಷನ್ ಕಟ್ಟಡದ ಹೊರಭಾಗದಲ್ಲಿ "ನ್ಯಾಯೋಚಿತ ಕ್ಷೇತ್ರ ಪುನರ್ ವಿಂಗಡಣೆ" (#FAIRDELIMITATION) ಎಂದು ಬರೆದಿರುವ ಫಲಕವನ್ನು ಅಳವಡಿಸಲಾಗಿತ್ತು. ಕೇರಳ, ತೆಲಂಗಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ರಾಜಕೀಯ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕದ ಪ್ರತಿನಿಧಿಯಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
ಪ್ರತಿಕೂಲ ಪರಿಣಾಮ
ಸಭೆಯಲ್ಲಿ ಮಾತನಾಡಿದ ಸ್ಟಾಲಿನ್ ಅವರು ಹೇಳಿದರು, "ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯಗಳ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯು ಪ್ರತಿಕೂಲ ಪರಿಣಾಮ ಬೀರಲಿದೆ. ಅದಕ್ಕಾಗಿಯೇ ನಾವು ಅದನ್ನು ವಿರೋಧಿಸುತ್ತಿದ್ದೇವೆ. ಮಣಿಪುರ ಕಳೆದ ಎರಡು ವರ್ಷಗಳಿಂದ ಹೊತ್ತಿ ಉರಿಯುತ್ತಿದೆ. ಅಲ್ಲಿ ಆರಂಭವಾದ ಗಲಭೆಯಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಆ ರಾಜ್ಯದಲ್ಲಿ ಸಂಸದರೇ ಇಲ್ಲದ ಕಾರಣ ಅವರ ಧ್ವನಿ ಯಾರಿಗೂ ಕೇಳಿಸುತ್ತಿಲ್ಲ. ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ನಮ್ಮ ರಾಜ್ಯಗಳನ್ನು ಪ್ರತಿನಿಧಿಸುವ ಸಂಸದರ ಸಂಖ್ಯೆ ಇಳಿಕೆಯಾಗಿ, ನಮಗೂ ಇದೇ ಸ್ಥಿತಿ ಎದುರಾಗಬಹುದು." ಅವರು ಅಭಿಪ್ರಾಯಪಟ್ಟರು.
ಬಿಜೆಪಿಯ ಕಪ್ಪು ಬಾವುಟ ಪ್ರದರ್ಶನ
ಈ ಸಭೆಯ ವಿರುದ್ಧ ತಮಿಳುನಾಡು ಬಿಜೆಪಿ ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಗೆ ಮುಂಚಿತವಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಹೇಳಿದರು, "ಮುಖ್ಯಮಂತ್ರಿ ಸ್ಟಾಲಿನ್ ಅವರು ಇತರ ರಾಜ್ಯಗಳೊಂದಿಗೆ ಇರುವ ವಿವಾದಗಳನ್ನು ಬಗೆಹರಿಸುವ ಮತ್ತು ನಮ್ಮ ರಾಜ್ಯದ ಹಕ್ಕುಗಳ ಬಗ್ಗೆ ಚರ್ಚಿಸುವ ಬದಲು ರಾಜಕೀಯ ನಾಟಕವನ್ನು ಆಡುತ್ತಿದ್ದಾರೆ. ವಿಶೇಷವಾಗಿ ಕೇರಳದೊಂದಿಗೆ ತ್ಯಾಜ್ಯ ಎಸೆಯುವ ವಿಚಾರವನ್ನೂ, ಕರ್ನಾಟಕದೊಂದಿಗೆ ಮೇಕೆದಾಟು ಮತ್ತು ಕಾವೇರಿ ನದಿ ನೀರಿನ ಸಮಸ್ಯೆಯನ್ನೂ ಚರ್ಚಿಸಬೇಕಿತ್ತು. ಅದರ ಬದಲು ರಾಜಕೀಯ ಡ್ರಾಮಾ ಮಾಡುತ್ತಿದ್ದಾರೆ."
ಇತ್ತೀಚೆಗೆ ಚೆನ್ನೈನ ನಾಮಕ್ಕಲ್ ಕವಿನಾರ್ ಹಾಲ್ನಲ್ಲಿ ತಮಿಳುನಾಡು ಸರ್ಕಾರವು ಸರ್ವಪಕ್ಷ ಸಭೆ ನಡೆಸಿತ್ತು. ಅಲ್ಲಿ ಜೆಎಸಿಯ ಪ್ರಸ್ತಾಪ ಬಂದಿದ್ದು, ಭವಿಷ್ಯದ ಜನಗಣತಿಯ ಜನಸಂಖ್ಯೆಯ ಅಂಕಿಅಂಶಗಳ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ತಮಿಳುನಾಡಿನ ವಿರೋಧವನ್ನು ಅಲ್ಲಿ ಸೇರಿದ್ದ 123 ರಾಜಕೀಯ ಪಕ್ಷಗಳ ನಾಯಕರು ಸಮರ್ಥಿಸಿಕೊಂಡಿದ್ದರು. ಆದರೆ, ರಾಜ್ಯ ಬಿಜೆಪಿ ಮಾತ್ರ ಈ ಸಭೆಯನ್ನು ಬಹಿಷ್ಕರಿಸಿತ್ತು.
ಇದಾದ ನಂತರ ಸ್ಟಾಲಿನ್ ಅವರು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಜೆಎಸಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಆಹ್ವಾನಿತ ರಾಜ್ಯಗಳ ಇತರ ಪಕ್ಷಗಳ ನಾಯಕರನ್ನೂ ಸಭೆಯಲ್ಲಿ ಭಾಗವಹಿಸುವಂತೆ ಕೋರಿದ್ದರು. ಅದರಂತೆ ಶನಿವಾರ ಈ ಸಭೆ ಆರಂಭವಾಯಿತು.
ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಈ ಸಭೆಯಲ್ಲಿದ್ದರು.