ಕಲಬುರಗಿಯಲ್ಲಿ ಭೀಕರ ಟ್ರಿಪಲ್ ಮರ್ಡರ್: ಡಾಬಾದಲ್ಲಿ ಮೂವರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಮಂಗಳವಾರ(ಜೂ.24) ರಾತ್ರಿ ಡಾಬಾದಲ್ಲಿ ರಾಮಚಂದ್ರ(35), ಸಿದ್ದಾರೂಢ(32) ಹಾಗೂ ಜಗದೀಶ್‌(25) ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮೂವರನ್ನು ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.;

Update: 2025-06-25 11:39 GMT
ಸಾಂದರ್ಭಿಕ ಚಿತ್ರ

ನಗರ ಹೊರವಲಯದ ಪಟ್ನಾ ಗ್ರಾಮದ ಬಳಿಯ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ನಗರದ ಸಬ್‌ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ (ಮಂಗಳವಾರ, ಜೂನ್ 24) ರಾತ್ರಿ ಈ ಘಟನೆ ಸಂಭವಿಸಿದೆ. ಡಾಬಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಮಚಂದ್ರ (35), ಸಿದ್ದಾರೂಢ (32) ಮತ್ತು ಜಗದೀಶ್ (25) ಎಂಬುವರನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಡಾಬಾದಲ್ಲಿ ನಡೆದಿರುವ ಕೊಲೆಗಳು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹತ್ಯೆ ಮಾಡಿದ ನಂತರ ಯಾವುದೇ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಹಂತಕರು ಡಾಬಾದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ಹಾರ್ಡ್‌ ಡಿಸ್ಕ್‌ನೊಂದಿಗೆ ಪರಾರಿಯಾಗಿದ್ದಾರೆ. ಹೀಗಾಗಿ, ಡಾಬಾದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಡಾ. ಶರಣಪ್ಪ, ಇನ್ಸ್‌ಪೆಕ್ಟರ್ ಸಂತೋಷ್ ತಟ್ಟೆಪಳ್ಳಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಟ್ರಿಪಲ್ ಮರ್ಡರ್ ಪ್ರಕರಣ ಕಲಬುರಗಿ ನಗರದಲ್ಲಿ ಆತಂಕ ಮೂಡಿಸಿದೆ. 

Tags:    

Similar News