ಹೆಂಡತಿ ಜೊತೆ ಜಗಳ: ಸಂಧಾನಕ್ಕೆ ಬಂದಿದ್ದ ಮ್ಯಾರೇಜ್ ಬ್ರೋಕರ್ ಬರ್ಬರ ಹತ್ಯೆ
ಮುರಿದ ಮದುವೆ ಬಗ್ಗೆ ಮಾತುಕತೆ ನಡೆಸಿ ವಿಚಾರ ಬಗೆಹರಿಸಲು ಸುಲೇಮಾನ್ ತಮ್ಮ ಇಬ್ಬರು ಪುತ್ರರ ಜೊತೆ ಮುಸ್ತಾಫಾನ ಮನೆಗೆ ಗುರುವಾರ ರಾತ್ರಿ ತೆರಳಿದ್ದರು. ಈ ವೇಳೆ ಸಿಟ್ಟಾದ ಮನೆಯಲ್ಲಿದ್ದ ಚೂರಿ ತಂದು ಸುಲೇಮಾನ್ ಅವರ ಕುತ್ತಿಗೆಗೆ ಇರಿದಿದ್ದ.;
ಸಾಂದರ್ಭಿಕ ಚಿತ್ರ
ಮದುವೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಮಂಗಳೂರಿನ ಹೊರವಲಯದ ವಳಚ್ಚಿಲ್ನಲ್ಲಿ ಗುರುವಾರ ನಡೆದಿದೆ.
ಮೃತರನ್ನು ವಾಮಂಜೂರಿನ ಸುಲೇಮಾನ್ (50) ಎಂದು ಗುರುತಿಸಲಾಗಿದೆ. ಅವರ ಇಬ್ಬರು ಪುತ್ರರಾದ ರಿಯಾಬ್ ಹಾಗೂ ಶಿಯಾಬ್ ಅವರಿಗೂ ಗಾಯಗಳಾಗಿವೆ.
ಸುಲೇಮಾನ್ ಅವರ ಸಂಬಂಧಿ ವಳಚ್ಚಿಲ್ ನಿವಾಸಿ ಮುಸ್ತಾಫಾ (30) ಕೊಲೆ ಅರೋಪಿ. ಆತನನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಸುಲೇಮಾನ್ ಅವರು ಮುಸ್ತಾಫಾನ ಮದುವೆಯನ್ನು ನೆರವೇರಿಸಿದ್ದರು. ಎಂಟು ತಿಂಗಳ ಹಿಂದೆ ಷಾಹಿನಾಜ್ ಎಂಬ ಯುವತಿಯನ್ನು ಮುಸ್ತಾಫಾ ಮದುವೆಯಾಗಿದ್ದ. ಆದರೆ ದಂಪತಿ ನಡುವೆ ಮನಸ್ತಾಪ ಉಂಟಾಗಿ, ಷಾಹಿನಾಜ್ ಎರಡು ತಿಂಗಳ ಹಿಂದೆ ತವರು ಮನೆಗೆ ಹೋಗಿ ವಾಪಸ್ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮುಸ್ತಾಫಾ, ಗುರುವಾರ ರಾತ್ರಿ ಸುಲೇಮಾನ್ಗೆ ಕರೆ ಮಾಡಿ ನಿಂದಿಸಿದ್ದ.
ಮುರಿದ ಮದುವೆಯ ಬಗ್ಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸುಲೇಮಾನ್ ತಮ್ಮ ಇಬ್ಬರು ಪುತ್ರರಾದ ರಿಯಾಬ್ ಮತ್ತು ಶಿಯಾಬ್ ಜೊತೆ ಗುರುವಾರ ರಾತ್ರಿ ಮುಸ್ತಾಫಾ ಮನೆಗೆ ತೆರಳಿದ್ದರು. ಮಾತುಕತೆ ಫಲಪ್ರದವಾಗದೆ, ಮುಸ್ತಾಫಾ ಅವರನ್ನು ಮನೆಯಿಂದ ಹೊರಡುವಂತೆ ಹೇಳಿದ್ದಾನೆ. ಬಳಿಕ ಏಕಾಏಕಿ ಸಿಟ್ಟಾದ ಮುಸ್ತಾಫಾ ಮನೆಯಲ್ಲಿದ್ದ ಚೂರಿಯನ್ನು ತೆಗೆದುಕೊಂಡು ಸುಲೇಮಾನ್ ಅವರ ಕುತ್ತಿಗೆಗೆ ಇರಿದಿದ್ದಾನೆ. ಗಾಯಗೊಂಡ ಸುಲೇಮಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಡೆಯಲು ಬಂದ ಶಿಯಾಬ್ ಎದೆಯ ಎಡಭಾಗಕ್ಕೆ ಮತ್ತು ರಿಯಾಬ್ ಬಲ ತೋಳಿಗೆ ಚೂರಿಯಿಂದ ಹಲ್ಲೆ ಮಾಡಲಾಗಿದೆ. ಗಾಯಗೊಂಡ ಮೂವರನ್ನು ಸ್ಥಳೀಯರು ಅಡ್ಯಾರ್ ಕಣ್ಣೂರಿನ ಜನಪ್ರಿಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸುಲೇಮಾನ್ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶಿಯಾಬ್ ಮತ್ತು ರಿಯಾಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ