ಅಕ್ರಮ ವಲಸಿಗರ ತ್ರಿಶಂಕು ಸ್ಥಿತಿ: ಹೆಚ್ಚಿದ ಆತಂಕ; ಹದಗೆಡಲಿದೆ ಬಾಂಗ್ಲಾ ಸಂಬಂಧ

ಅಕ್ರಮ ವಿದೇಶಿಗರು ಎಂಬ ಹಣೆಪಟ್ಟಿ ಹಚ್ಚಿ ಭಾರತೀಯ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದ್ದು ಆಧಾರ್ ಕಾರ್ಡ್ ಮತ್ತು ಭೂ ದಾಖಲೆಗಳಂತಹ ಅಧಿಕೃತ ದಾಖಲೆಗಳನ್ನು ಸಲ್ಲಿಸಿದಾಗ್ಯೂ ಗಡಿಯಾಚೆಗೆ ಅವರನ್ನು ದಬ್ಬಲಾಗುತ್ತಿದೆ.;

Update: 2025-05-31 00:30 GMT

ಕೇಂದ್ರದ ಬಿಜೆಪಿ ಸರ್ಕಾರವು ಗಡಿಯಾಚೆಗಿನ ನುಸುಳುವಿಕೆಯನ್ನು ಎದುರಿಸಲು ಕೈಗೊಂಡಿರುವ ಕಾನೂನು ಮತ್ತು ರಾಜತಾಂತ್ರಿಕ ಕಾರ್ಯವಿಧಾನಗಳಿಂದ ಭಾರತೀಯ ನಾಗರಿಕರು ಕಿರುಕುಳಕ್ಕೆ ಒಳಗಾಗುವಂತಾಗಿದೆ ಮತ್ತು ನೆರೆಯ ಬಾಂಗ್ಲಾದೇಶದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ರಾಜತಾಂತ್ರಿಕ ಮಾತುಕತೆಗ ಮೂಲಕ ಅವರನ್ನು ಗಡಿಪಾರು ಮಾಡುವುದಕ್ಕೆ ಬದಲಾಗಿ ಕಳೆದ ಸುಮಾರು ಹದಿನೈದು ದಿನಗಳ ಅವಧಿಯಲ್ಲಿ ಸರ್ಕಾರ ನೂರಾರು ಮಂದಿ ‘ಅಕ್ರಮ’ ವಲಸಿಗರನ್ನು ನೇರವಾಗಿ ಬಾಂಗ್ಲಾದೇಶದ ಕಡೆಗೆ ದಬ್ಬಿದೆ.

ಹೊರದಬ್ಬಲಾದ ಅಕ್ರಮ ವಲಸಿಗರನ್ನು ಕಾನೂನು ಪ್ರಕ್ರಿಯೆಗಳ ಬದಲಾಗಿ ರಾಷ್ಟ್ರವ್ಯಾಪಿ ನಡೆದ ಪೊಲೀಸ್ ಕಾರ್ಯಾಚರಣೆಯ ಮೂಲಕ ಗುರುತಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

“ಒಬ್ಬ ವ್ಯಕ್ತಿಯನ್ನು ಹೊರಹಾಕಲು ಇರುವ ಸರಿಯಾದ ಮಾರ್ಗವೆಂದರೆ ಕಾನೂನು ಪ್ರಕ್ರಿಯೆಯ ಮೂಲಕ ಆತನನ್ನು ಮೊದಲು ‘ಅಕ್ರಮ ವಲಸಿಗ’ ಎಂದು ಗುರುತಿಸುವುದು. ಇದರಲ್ಲಿ ಆತನಿಗೆ ತನ್ನ ರಕ್ಷಣೆಯನ್ನು ಮಂಡಿಸುವ ಹಾಗೂ ನಿರ್ಧಾರವನ್ನು ಪ್ರಶ್ನಿಸುವ ಹಕ್ಕು ಸೇರಿರುತ್ತದೆ” ಎಂದು ಅಸ್ಸಾಮಿನ ವಿದೇಶಿಯರ ನ್ಯಾಯಮಂಡಳಿಯ ಮಾಜಿ ಸದಸ್ಯರ ಶಿಶಿರ್ ಡೇ ಪ್ರತಿಪಾದಿಸುತ್ತಾರೆ.

ವಿದೇಶಿಯರ ಕಾಯ್ದೆಯ ಪ್ರಕಾರ ಒಬ್ಬ ವ್ಯಕ್ತಿ ವಿದೇಶಿ ಎಂಬುದನ್ನು ನಿರ್ಧರಿಸುವ ಉದ್ದೇಶದಿಂದ ರಚಿಸಲಾಗಿರುವ ನ್ಯಾಯಮಂಡಳಿಗಳು ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ.

ವಿದೇಶಿಯರ ನ್ಯಾಯಮಂಡಳಿಗಳು ತಮ್ಮಲ್ಲಿ ಉಲ್ಲೇಖಿಸಲಾದ ವ್ಯಕ್ತಿಯ ರಾಷ್ಟ್ರೀಯತೆಯನ್ನು ಮೂಲಭೂತವಾಗಿ ನಿರ್ಧರಿಸುವುದಿಲ್ಲ. ಅನುಮಾನಾಸ್ಪದವಾಗಿ ಪೌರತ್ವ ಹೊಂದಿರುವ ವ್ಯಕ್ತಿ ಭಾರತದ ಪ್ರಜೆಯೇ ಅಥವಾ ವಿದೇಶಿಯೇ ಎಂಬುದನ್ನು ಮಾತ್ರ ಅವು ತೀರ್ಮಾನಿಸುತ್ತವೆ.

ಒಬ್ಬ ಅನುಮಾನಾಸ್ಪದ ನಾಗರಿಕನ ರಾಷ್ಟ್ರೀಯತೆಯ ಗಡಿಪಾರು ಪ್ರಕ್ರಿಯೆಯ ಸಂದರ್ಭದಲ್ಲಿ ಕೆಲವೊಮ್ಮೆ ವಿವಾದದ ವಿಷಯವಾಗಿ ಪರಿಣಮಿಸುತ್ತದೆ. ಹಾಗಾಗಿ ಒಬ್ಬ ಘೋಷಿತ ವಿದೇಶಿಯನನ್ನು ಬಾಂಗ್ಲಾದೇಶಿ ಎಂದು ಹೇಳಿದರೆ ಬಾಂಗ್ಲಾದೇಶವು ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ಯಾಕೆಂದರೆ ಆ ವ್ಯಕ್ತಿಯೇ ತಾನು ಬಾಂಗ್ಲಾದೇಶದಿಂದ ಬಂದವನೆಂದು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಅವರು ಬೊಟ್ಟುಮಾಡುತ್ತಾರೆ.

ಮುಂದಿನ ಹಂತವೇನಿದ್ದರೂ ಘನತೆಯುತ ಗಡಿಪಾರಿಗಾಗಿ ಆ ವ್ಯಕ್ತಿಯನ್ನು ಕಳುಹಿಸುವ ಮತ್ತು ಸ್ವೀಕರಿಸುವ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಮಾತುಕತೆಗಳಷ್ಟೇ ಎಂದು ಅವರು ಹೇಳುತ್ತಾರೆ.

ಇಷ್ಟಾಗಿಯೂ ಒಬ್ಬ ವ್ಯಕ್ತಿಯನ್ನು ಅಂತಾರಾಷ್ಟ್ರೀಯ ಗಡಿಯಲ್ಲಿನ ನಿರ್ಜನ ಪ್ರದೇಶಕ್ಕೆ ದಬ್ಬುವ ಅವಕಾಶವಿರುವುದಿಲ್ಲ. ಹಾಗೆ ಮಾಡಿದರೆ ಆತನ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಮತ್ತದು ಮಾನವ ಹಕ್ಕುಗಳಿಗೆ ವಿರುದ್ಧವಾದುದ ಎಂದು ಡೇ ಸ್ಪಷ್ಟವಾಗಿ ನುಡಿಯುತ್ತಾರೆ.

ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಬಾಂಗ್ಲಾದೇಶದಿಂದ ದಾಖಲೆ ರಹಿತ ವಲಸಿಗರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದ್ದರಿಂದ ಇಂತಹ ಹಿಂದಕ್ಕೆ ದಬ್ಬುವ ವಿಧಾನದ ಮೂಲಕ ಸುಮಾರು 500 ಮಂದಿಯನ್ನು ಬಾಂಗ್ಲಾದೇಶಕ್ಕೆ ಹಿಂದಕ್ಕೆ ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸುತ್ತವೆ.

ಈ ಹಿಂದಕ್ಕೆ ದಬ್ಬುವ ಪ್ರಕ್ರಿಯೆಗೆ ಬಾಂಗ್ಲಾದೇಶ ಪ್ರತಿರೋಧ ವ್ಯಕ್ತವಾಗುವ ತನಕ ಭಾರತವೂ ಹೆಚ್ಚಿನ ಗಮನ ಹರಿಸಿರಲಿಲ್ಲ. ಅಸ್ಸಾಂನ ದಕ್ಷಿಣ ಸಲ್ಮಾರ್ ಮಣಕಚಾರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) 14 ಮಂದಿಯನ್ನು ಬಾಂಗ್ಲಾದೇಶಕ್ಕೆ ದಬ್ಬಿತ್ತು. ಆದರೆ ಅವರನ್ನು ಮತ್ತೆ ಭಾರತಕ್ಕೆ ಕಳಿಸಲು ಬಾಂಗ್ಲಾದೇಶದ ಗಡಿಪಡೆ ಸ್ಥಳೀಯರನ್ನು ಎತ್ತಿಕಟ್ಟಿತ್ತು ಎಂದು ಮಣಕಚಾರ್ ನ ಶಾಸಕ ಅಮಿನುಲ್ ಇಸ್ಲಾಮ್ ದ ಫೆಡರಲ್ ಗೆ ತಿಳಿಸಿದ್ದಾರೆ.

ಗುಂಪನ್ನು ಚದುರಿಸಲು ಬಿಎಸ್ಎಫ್ ಕೆಲವು ಸುತ್ತು ಗುಂಡಿನ ದಾಳಿ ನಡೆಸಿದೆ. ಬಾಂಗ್ಲಾದೇಶದಿಂದ ಒಳನುಸುಳುವ ಪ್ರಯತ್ನ ನಡೆದಿತ್ತು. ಅದನ್ನು ತಡೆಯಲಾಗಿದೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.

ಏನಾದರು 14 ಮಂದಿ?

ಎರಡೂ ರಾಷ್ಟ್ರಗಳ ಈ ಜಿದ್ದಾಜಿದ್ದಿಯಲ್ಲಿ ಆ 14 ಮಂದಿ ವಲಸಿಗರು ಏನಾದರು? ಅವರು ಅತ್ತಲೂ ಹೋಗಲಾಗದೇ ಈ ಕಡೆಗೂ ಬರಲಾಗದೆ ಗಡಿಯ ಕಂಬದ ಸಂಖ್ಯೆ 1067 ರ ಬಳಿಯ ನಿರ್ಜನ ಪ್ರದೇಶದಲ್ಲಿ ತಾಸುಗಟ್ಟಳೆ ಸಿಕ್ಕಿಹಾಕಿಕೊಂಡಿದ್ದರು ಎಂದು ಮೂಲಗಳು ತಿಳಿಸುತ್ತವೆ. ಅವರಲ್ಲಿ ಒಂಭತ್ತು ಮಂದಿ ಪುರುಷರು ಹಾಗೂ ಐವರು ಮಹಿಳೆಯರಿದ್ದರು.

ಆ ಬಳಿಕ ಕಂಡುಬಂದ ವಿಡಿಯೊ ದೃಶ್ಯದಲ್ಲಿ ಆ ಹದಿನಾಲ್ಕು ಮಂದಿಯಲ್ಲಿ ಒಬ್ಬ ವ್ಯಕ್ತಿ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಶಾಲಾ ಶಿಕ್ಷಕ ಎಂಬುದು ಪತ್ತೆಯಾಯಿತು ಎಂದು ತಿಳಿದುಬಂದಿದೆ. ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಆ ವ್ಯಕ್ತಿಗೆ ಅಸ್ಸಾಂನಲ್ಲಿ ಭೂಮಿ ಮತ್ತು ಮನೆ ಇದೆ ಹಾಗೂ ಆತನ ತಾಯಿ ಮತ್ತು ಸಹೋದರರು ಅಲ್ಲಿನ ಸ್ಥಳೀಯ ಸರ್ಕಾರಿ ಸಂಸ್ಥೆಯ ಸದಸ್ಯರು ಕೂಡ.

ವಲಸಿಗರ ಹಿಂಡಿನೊಂದಿಗೆ ತನ್ನನ್ನೂ ಗಡಿಯಿಂದ ಆಚೆಗೆ ತಳ್ಳಲಾಯಿತು ಎಂದು ಆ ಶಿಕ್ಷಕ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ವಲಸಿಗರಲ್ಲಿ ಅಸ್ಸಾಂ ಶಿಕ್ಷಕ!

ಹಾಗೆ ಆ ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿಯ ಹೆಸರು ಖೈರುಲ್ ಇಸ್ಲಾಂ. ಆತ 1997ರಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ., ಆತನ ಪೌರತ್ವದ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವು ಸುಪ್ರೀಂ ಕೋರ್ಟಿನಲ್ಲಿ ಬಾಕಿ ಉಳಿದಿದೆ ಎಂದು ಅಖಿಲ ಭಾರತ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (AIUDF)ದ ಮಹಿಳಾ ಘಟಕದ ಅಧ್ಯಕ್ಷೆ ಹಸೀನಾ ಅಹ್ಮದ್ ದ ಫೆಡರಲ್.ಗೆ ತಿಳಿಸಿದ್ದಾರೆ.

ಆತನನ್ನು ಮೇ 23ರಂದು ಅವರ ಮನೆಯಿಂದ ಕರೆದುಕೊಂಡು ಹೋಗಿ ಗೋಲ್-ಪಾರಾದಲ್ಲಿರುವ ಮತಿಯಾ ಬಂಧನ ಶಿಬಿರಕ್ಕೆ ಬಿಡಲಾಗಿದೆ ಎಂದೂ ಹೇಳಲಾಗುತ್ತಿದೆ.

ಇನ್ನೊಬ್ಬಾಕೆ ಅಸ್ಸಾಂನ ದರಂಗ್ ಜಿಲ್ಲೆಯ ಮಾಣಿಕ್-ಜನ್ ಬೇಗಂ ಎಂದು ಗುರುತಿಸಲಾಗಿದೆ, ಆಕೆಯನ್ನು ಆಕೆಯ 9 ತಿಂಗಳ ಮಗುವಿನೊಂದಿಗೆ ಹಿಂದಕ್ಕೆ ದಬ್ಬಲಾಗಿದೆ ಎಂದು ವಕೀಲರಾದ ಅಹ್ಮದ್ ಹೇಳುತ್ತಾರೆ. ಬಾಂಗ್ಲಾಗೆ ದಬ್ಬಲಾದ ಇತರ 12 ಮಂದಿಯ ಗುರುತು ಪತ್ತೆಮಾಡುವ ಕೆಲಸದಲ್ಲಿ ತೊಡಗಿರುವುದಾಗಿ AIUDF ನಾಯಕರು ತಿಳಿಸಿದ್ದಾರೆ.

ತಾಸುಗಳ ಕಾಲ ಒಂದು ನಿರ್ಜನ ಗದ್ದೆಯ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ 14 ಮಂದಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಬೊರಾಯ್ ಬರಿ ಶಿಬಿರಕ್ಕೆ ಅಲ್ಲಿನ ಗಡಿಪಡೆ ಕರೆದೊಯ್ದಿದೆ ಎಂದು ಬಾಂಗ್ಲಾ ಮೂಲಗಳು ಹೇಳುತ್ತವೆ. ಆದರೆ ಇದನ್ನು ಮಣಕಚಾರ್ ಶಾಸಕರು ಒಪ್ಪುವುದಿಲ್ಲ. ಅವರನ್ನು ಬಾಂಗ್ಲಾ ಗಡಿಪಡೆ ನಿರ್ಜನ ಪ್ರದೇಶಕ್ಕೆ ಕಳಿಸಿದೆ ಎನ್ನುತ್ತಾರೆ.

ಈಗ ಅವರ ಆಶ್ರಯಕ್ಕೆ ಇತ್ತ ಬಿಎಸ್ಎಫ್ ಆಗಲಿ ಆ ಕಡೆಯಿಂದ ಬಾಂಗ್ಲಾ ಗಡಿಪಡೆ (ಬಿಜಿಬಿ)ಯಾಗಲಿ ಇಲ್ಲ. ಇಬ್ಬರೂ ಎರಡೂ ಕಡೆಯ ಗಡಿಗಳಿಂದ ತಳ್ಳುತ್ತಿದ್ದಾರೆ. ಹಾಗಾಗಿ ಆ ರಾತ್ರಿಯ ವೇಳೆಯಲ್ಲಿಯೂ ಆ ಹದಿನಾಲ್ಕು ಮಂದಿ ನಿರ್ಜನ ಪ್ರದೇಶದಲ್ಲಿ ತೆರೆದ ಆಕಾಶದ ಕೆಳಗೆ ತ್ರಿಶಂಕು ಸ್ಥಿತಿಯಲ್ಲಿ ಕಳೆಯುತ್ತಿದ್ದಾರೆ ಎಂದು ಇಸ್ಲಾಂ ತಿಳಿಸುತ್ತಾರೆ.

ಗಡಿಯಿಂದ ಒಳಕ್ಕೆ ತಳ್ಳುವ ಪ್ರಕ್ರಿಯೆಗೆ ಆಸ್ಪದ ನೀಡಿದರೆ ತಾನು ಸುಮ್ಮನಿರುವುದಿಲ್ಲ ಎಂದು ಬಾಂಗ್ಲಾ ಸೇನೆ ಖಡಕ್ ವಾರ್ನಿಂಗ್ ಕೊಟ್ಟಿರುವುದರಿಂದ ಬಿಜಿಬಿ ಸಾಧ್ಯವಾದಷ್ಟು ಬಂದ ಕಡೆಗೇ ವಲಸಿಗರನ್ನು ತಳ್ಳುವ ಕಾರ್ಯದಲ್ಲಿ ನಿರತವಾಗಿದೆ. ಈ ಬಗ್ಗೆ ವಾರದ ಆರಂಭದಲ್ಲಿಯೇ ಬ್ರಿಗೇಡಿಯರ್ ಜನರಲ್ ಎಂ.ನಝೀಮ್-ಉದ್-ದೌಲಾ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗುತ್ತದೆ.

ರಾಜ್ಯಪಾಲರಿಗೆ ಮನವಿ

ಈ ನಡುವೆ, ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿಮಾಡಿದ AIUDF ನಿಯೋಗವು, ಅಕ್ರಮ ವಿದೇಶಿಗರು ಎಂಬ ಹಣೆಪಟ್ಟಿ ಹಚ್ಚಿ ಭಾರತೀಯ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು.

ಆಧಾರ್ ಕಾರ್ಡ್ ಮತ್ತು ಭೂ ದಾಖಲೆಗಳಂತಹ ಅಧಿಕೃತ ದಾಖಲೆಗಳನ್ನು ಸಲ್ಲಿಸಿದಾಗ್ಯೂ ಬಹುತೇಕ ಮುಸ್ಲಿಂ ಸಮುದಾಯದವರಿಗೆ ಕಿರುಕುಳ ನೀಡಲಾಗುತ್ತಿದೆ. ಇದು ತೀವ್ರ ಆತಂಕ ಸೃಷ್ಟಿಸಿದೆ ಮತ್ತು ಜನ ಭಯದಿಂದ ಬದುಕುವಂತಾಗಿದೆ ಎಂದು ನಿಯೋಗ ತಿಳಿಸಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವುದು ಮತ್ತು ಗಡಿಪಾರು ಮಾಡುವ ವಿಚಾರದಲ್ಲಿ ಕಾನೂನು ಪ್ರಕಾರವಾಗಿ ಕ್ರಮಕೈಗೊಳ್ಳಬೇಕು ಎಂದು ಅದು ಒತ್ತಾಯಿಸಿದೆ.

ಮೇ 29 ಮತ್ತು 30ರಂದು ಪಕ್ಷವು ಅಸ್ಸಾಂನ ಎಲ್ಲ ಜಿಲ್ಲೆಗಳಲ್ಲಿ ಈ ಸಂಬಂಧ ಪ್ರತಿಭಟನೆ ನಡೆಸಿದೆ.

Tags:    

Similar News