ಇರಾನ್ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ಬೆನ್ನಲ್ಲೇ ಭಾರತೀಯರಿಗೆ ಸೂಚನೆ
ಇರಾನ್ನಲ್ಲಿರುವ ಎಲ್ಲ ಭಾರತೀಯ ನಾಗರಿಕರು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಎಚ್ಚರಿಕೆಯಿಂದಿರಬೇಕು, ಅನಗತ್ಯ ಸಂಚಾರವನ್ನು ತಪ್ಪಿಸಬೇಕು ಎಂದು ಭಾರತದ ರಾಯಭಾರ ಕಚೇರಿ ಸೂಚನೆ ನೀಡಿದೆ.;
ಇರಾನ್ನ ಪರಮಾಣು ಕೇಂದ್ರಗಳ ಮೇಲೆ ಶುಕ್ರವಾರ (ಜೂನ್ 13) ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳ ನಂತರ. ರಾಜಧಾನಿ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇರಾನ್ನಲ್ಲಿರುವ ಭಾರತೀಯ ನಾಗರಿಕರಿಗೆ ಮಹತ್ವದ ಸಲಹೆ ನೀಡಿದೆ. ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದಿರಲು, ಅನಗತ್ಯ ಸಂಚಾರವನ್ನು ತಪ್ಪಿಸಲು ಮತ್ತು ಸ್ಥಳೀಯ ಅಧಿಕಾರಿಗಳ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಯಭಾರ ಕಚೇರಿ ಸೂಚಿಸಿದೆ.
ತೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ ಸಲಹಾ ಸಂದೇಶದಲ್ಲಿ, "ಇರಾನ್ನ ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇರಾನ್ನಲ್ಲಿರುವ ಎಲ್ಲ ಭಾರತೀಯ ನಾಗರಿಕರು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಎಚ್ಚರಿಕೆಯಿಂದಿರಬೇಕು, ಅನಗತ್ಯ ಸಂಚಾರವನ್ನು ತಪ್ಪಿಸಬೇಕು, ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅನುಸರಿಸಬೇಕು ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್ಗಳನ್ನು ಪಾಲಿಸಬೇಕು" ಎಂದು ತಿಳಿಸಿದೆ.
ಇಸ್ರೇಲ್ನ "ಆಪರೇಷನ್ ರೈಸಿಂಗ್ ಲಯನ್" ಕಾರ್ಯಾಚರಣೆ
ಇಸ್ರೇಲ್ ಶುಕ್ರವಾರ ಬೆಳಗ್ಗೆ ಇರಾನ್ನ ರಾಜಧಾನಿ ತೆಹ್ರಾನ್ನಲ್ಲಿ ದಾಳಿಗಳನ್ನು ಆರಂಭಿಸಿದ್ದು, ಈ ದಾಳಿಗಳು ಇರಾನ್ನ ಪರಮಾಣು ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡಿವೆ. ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು, ಈ ಕಾರ್ಯಾಚರಣೆಗೆ 'ಆಪರೇಷನ್ ರೈಸಿಂಗ್ ಲಯನ್' ಎಂದು ಹೆಸರಿಸಿದ್ದು, ಇರಾನ್ನ ಪರಮಾಣು ಯೋಜನೆಗಳನ್ನು ವಿಫಲಗೊಳಿಸುವುದೇ ಇದರ ಮುಖ್ಯ ಉದ್ದೇಶ ಎಂದು ಘೋಷಿಸಿದ್ದಾರೆ. ತಮ್ಮ ದೇಶವು ಇರಾನ್ನ ಇಸ್ಲಾಮಿಕ್ ಆಡಳಿತದ ಪರಮಾಣು ಕಾರ್ಯಕ್ರಮದ ಕೇಂದ್ರಭಾಗವಾದ ನಟಾಂಜ್ನ ಮುಖ್ಯ ಸೌಲಭ್ಯವನ್ನು ಗುರಿಯಾಗಿಸಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಈ ಹೆಚ್ಚಿದ ಉದ್ವಿಗ್ನತೆಯು, ಇರಾನ್ನಲ್ಲಿರುವ ಭಾರತೀಯ ಸಮುದಾಯಕ್ಕೆ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದ್ದು, ರಾಯಭಾರ ಕಚೇರಿಯ ಸಲಹೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.