
Pahalgam Terror Attack | ಸರ್ವಪಕ್ಷ ಸಭೆಗೆ ಪ್ರಧಾನಿ ಗೈರು; ರಾಷ್ಟ್ರೀಯ ಭದ್ರತೆಗಿಂತ ಚುನಾವಣೆ ಹೆಚ್ಚಾಯಿತೇ ಎಂದ ವಿಪಕ್ಷಗಳು
ಸಾಮೂಹಿಕ ರಾಜಕೀಯ ನಾಯಕತ್ವದ ಮೂಲಕ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ ದುಷ್ಕರ್ಮಿಗಳ ವಿರುದ್ಧ ಬಲವಾದ ದ್ವಿಪಕ್ಷೀಯ ಸಂದೇಶ ಕಳುಹಿಸಲು ಇದು ಸುಸಂದರ್ಭವಾಗಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೋದಿ ಅವರಿಗೆ ವರ್ಷಾಂತ್ಯದಲ್ಲಿ ನಡೆಯುವ ಬಿಹಾರ ವಿಧಾನಸಭೆ ಚುನಾವಣೆಯೇ ಮುಖ್ಯವಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.
ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯ ಕುರಿತು ಕೇಂದ್ರ ಸರ್ಕಾರ ಗುರುವಾರ ಸಂಜೆ ಕರೆದಿರುವ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾಗುತ್ತಿರುವ ನಿರ್ಧಾರವನ್ನು ವಿರೋಧ ಪಕ್ಷಗಳು ಖಂಡಿಸಿವೆ.
ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಕಠಿಣ ಕ್ರಮಗಳನ್ನು ವಿರೋಧ ಪಕ್ಷಗಳು ಬೆಂಬಲಿಸಿವೆ. ಆದಾರೂ, ಸರ್ಪಕ್ಷ ಸಭೆಗೆ ಬಾರದೇ ಚುನಾವಣೆ ಪ್ರಚಾರದಲ್ಲಿ ತೊಡಗಿರುವುದು ಸರಿಯಾದ ಕ್ರಮವಲ್ಲ. ವಿರೋಧ ಪಕ್ಷಗಳ ಸಹಕಾರವನ್ನು ಕೇಂದ್ರ ಸರ್ಕಾರ ʼಮುಕ್ತ ಪಾಸ್ʼ ಎಂದು ಭಾವಿಸಬಾರದು ಎಂದು ವಾಗ್ದಾಳಿ ನಡೆಸಿವೆ.
ಸಾಮೂಹಿಕ ರಾಜಕೀಯ ನಾಯಕತ್ವದ ಮೂಲಕ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ ದುಷ್ಕರ್ಮಿಗಳ ವಿರುದ್ಧ ಬಲವಾದ ದ್ವಿಪಕ್ಷೀಯ ಸಂದೇಶ ಕಳುಹಿಸಲು ಇದು ಸುಸಂದರ್ಭವಾಗಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೋದಿ ಅವರಿಗೆ ವರ್ಷಾಂತ್ಯದಲ್ಲಿ ನಡೆಯುವ ಬಿಹಾರ ವಿಧಾನಸಭೆ ಚುನಾವಣೆಯೇ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.
ಜಮ್ಮುಕಾಶ್ಮೀರದಲ್ಲಿ ನಡೆದ ದಾಳಿಗೆ ಗುಪ್ತಚರ ಇಲಾಖೆಯ ವೈಫಲ್ಯ ಎಂಬುದು ನಮಗೆ ತಿಳಿದಿದೆ. ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಸಹಕಾರ ನೀಡುತ್ತಿದ್ದೇವೆ ಎಂದ ಮಾತ್ರಕ್ಕೆ ವೈಫಲ್ಯವನ್ನು ಒಪ್ಪಿಕೊಂಡಂತಲ್ಲ. ನಾವು ನೀಡುತ್ತಿರುವ ಸಹಕಾರವನ್ನು ತಪ್ಪಾಗಿ ಭಾವಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಸರ್ವಪಕ್ಷ ಸಭೆಗೆ ಜೆಡಿಯು ಗೈರು
ಬೈಸರನ್ ದುರಂತದ ಕುರಿತಾದ ಸರ್ವಪಕ್ಷ ಸಭೆಗಿಂತ ಬಿಹಾರದಲ್ಲಿ ಮೆಗಾ ಯೋಜನೆಗಳ ಅನಾವರಣಕ್ಕೆ ಪ್ರಧಾನಿ ಆದ್ಯತೆ ನೀಡಿದ್ದಾರೆ. ಬಿಜೆಪಿಯ ಮಿತ್ರಪಕ್ಷವಾದ ಜೆಡಿಯು ಕೂಡ ಮಧುಬನಿ ಕಾರ್ಯಕ್ರಮದ ಕಾರಣ ನೀಡಿ ಸರ್ವಪಕ್ಷ ಸಭೆಗೆ ಗೈರಾಗುತ್ತಿದೆ. ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಸಾಮಾಜಿಕ ಮಾಧ್ಯಮ ʼಎಕ್ಸ್ʼನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಪ್ರಧಾನಿಯ ಆದ್ಯತೆ ಕೇವಲ ಚುನಾವಣೆ. ಜೆಡಿಯು ಆದ್ಯತೆ ಪ್ರಧಾನಿ. ಭಯೋತ್ಪಾದಕ ದಾಳಿಯ ಕುರಿತು ಸರ್ವಪಕ್ಷ ಸಭೆ ಇವರಿಗೆ ಬೇಕಾಗಿಲ್ಲ ಎನಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಸರ್ವಪಕ್ಷ ಸಭೆಗೆ ಪ್ರಧಾನಿ ಗೈರಾಗುವುದನ್ನು ಆರ್ಜೆಡಿ ಸಂಸದ ಮನೋಜ್ ಕುಮಾರ್ ಝಾ ಅವರೂ ಖಂಡಿಸಿದ್ದಾರೆ. ಕಳೆದ 25 ವರ್ಷಗಳಲ್ಲಿ ಕಾಶ್ಮೀರ ಅತ್ಯಂತ ಭಯಾನಕ ಉಗ್ರರ ದಾಳಿಗೆ ತುತ್ತಾಗಿದೆ. ದಾಳಿಯ ರೂವಾರಿಗಳಿಗೆ ಕಠಿಣ ಸಂದೇಶ ನೀಡಲು ಇಡೀ ವಿರೋಧ ಪಕ್ಷ, ದೇಶವೇ ಕೇಂದ್ರದ ಜೊತೆ ದೃಢವಾಗಿ ನಿಂತಿದೆ. ದಾಳಿ ನಡೆದಾಗ ಮೋದಿ ಅವರು ವಿದೇಶ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿದ್ದು ಸರಿಯಾದ ಕೆಲಸವಾಗಿತ್ತು. ರಾಹುಲ್ ಗಾಂಧಿ ಕೂಡ ಅಮೆರಿಕ ಭೇಟಿ ಮೊಟಕುಗೊಳಿಸಿದರು, ಆದರೆ ಇಂದು, ಪ್ರಧಾನಿ ಮೋದಿ ಅವರು ಮುಂದೆ ಏನು ಮಾಡಬೇಕು ಎಂಬುವುದರ ಕುರಿತು ಸರ್ವಪಕ್ಷ ಸಭೆಯಲ್ಲಿ ಚರ್ಚಿಸುವುದು ಅಗತ್ಯವಾಗಿದೆ. ಆದರೆ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಚುನಾವಣೆ ಕಾರಣಕ್ಕಾಗಿ ಗೈರಾಗುತ್ತಿರುವುದು ದುರಂತದ ಮೇಲೆ ಚುನಾವಣಾ ಲಾಭ ಪಡೆಯುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.