ಎಸ್‌ಎಸ್‌ಎಲ್‌ಸಿ ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಶಿಕ್ಷಕ ಅರೆಸ್ಟ್
x

ಎಸ್‌ಎಸ್‌ಎಲ್‌ಸಿ ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಶಿಕ್ಷಕ ಅರೆಸ್ಟ್

ಪರೀಕ್ಷೆಗೆ ಓದಿಕೊಳ್ಳುತ್ತಿದ್ದ ವಿದ್ಯಾರ್ಥಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡ ಶಿಕ್ಷಕ, ಬಾಲಕನಿಗೆ ಮದ್ಯಪಾನ ಮಾಡಿಸಿ ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.


ವಸತಿಯುತ ಪ್ರೌಢಶಾಲೆಯೊಂದರಲ್ಲಿ ಬುಡಕಟ್ಟು ಸಮುದಾಯದ ಬಾಲಕನ ಮೇಲೆ ಶಿಕ್ಷಕನೇ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನಲ್ಲಿ ನಡೆದಿದೆ. ಆರೋಪಿ ಶಿಕ್ಷಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಓದುತ್ತಿದ್ದ 17 ವರ್ಷದ ಬಾಲಕನ ಮೇಲೆ ಶಿಕ್ಷಕ ದೌರ್ಜನ್ಯ ಎಸಗಿದ್ದು, ಏ.5 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏ. 6ರಂದು ಎಸ್‌ಎಸ್‌ಎಲ್‌ ಸಿ ಮಕ್ಕಳ ಇಂಗ್ಲಿಷ್‌ ಪರೀಕ್ಷೆ ನಡೆಯಲಿದ್ದು, ಅದಕ್ಕೂ ಮುನ್ನಾ ದಿನ ಶಿಕ್ಷಕ ದೌರ್ಜನ್ಯ ನಡೆಸಿದ್ದಾನೆ.

ಪರೀಕ್ಷೆಗೆ ಓದಿಕೊಳ್ಳುತ್ತಿದ್ದ ವಿದ್ಯಾರ್ಥಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡ ಶಿಕ್ಷಕ, ಬಾಲಕನಿಗೆ ಮದ್ಯಪಾನ ಮಾಡಿಸಿ ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕ ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕರಿಗೆ ದೂರು ನೀಡಿದ್ದು, ಒಡನಾಡಿ ನಿರ್ದೇಶಕ ಪರಶುರಾಮ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿ ಶಿಕ್ಷಕನನ್ನು ಬಂಧಿಸಲಾಗಿದೆ.

ಆರೋಪಿ ಶಿಕ್ಷಕನ ವಿರುದ್ಧ ಇನ್ನೂ ಹಲವು ಆರೋಪಗಳು ಕೇಳಿ ಬಂದಿದ್ದು, ಆರೋಪಿ ಹಲವು ವರ್ಷಗಳಿಂದಲೂ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾನೆ, ಆದರೆ, ಹೆದರಿಕೆಯಿಂದ ಯಾರೂ ದೂರು ನೀಡಲು ಬಂದಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಹಿಂದೆಯೂ ಇದೇ ರೀತಿಯ ಪ್ರಕರಣ ನಡೆದಿದ್ದು, ಪೊಲೀಸರಿಗೆ ದೂರು ನೀಡುವ ಭಯದಲ್ಲಿ ಶಿಕ್ಷಕ ಕೈಯನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದ. ಬಳಿಕ ಪ್ರಕರಣ ಮುಚ್ಚಿ ಹೋಗಿತ್ತು. ದೌರ್ಜನ್ಯ ನಡೆದಿದ್ದರೂ, ದೂರು ನೀಡಲು ಭಯಪಟ್ಟು ಹಲವು ಮಕ್ಕಳು ಸುಮ್ಮನಿದ್ದರು. ಹಲವರು ಶಾಲೆಯನ್ನೇ ತೊರೆದಿದ್ದರು ಎಂದು ಶಾಲಾ ಮೂಲಗಳು ತಿಳಿಸಿವೆ.

Read More
Next Story