ಜಿಎಸ್ ಟಿ ನೋಟಿಸ್ ಗೊಂದಲ; ಇಂದು ಸಿಎಂ ಮಹತ್ವದ ಸಭೆ
ವಾಣಿಜ್ಯ ತೆರಿಗೆ ಅಧಿಕಾರಿಗಳು, ಹಣಕಾಸು ಇಲಾಖೆ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭಯಲ್ಲಿ ಭಾಗವಹಿಸಲಿದ್ದಾರೆ.
ಸಣ್ಣ ಉದ್ದಿಮೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸ್ ಗೊಂದಲ ಸೃಷ್ಟಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ.
ಇಂದು ಮಧ್ಯಾಹ್ನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಸಿದ್ದರಾಮಯ್ಯ ಅವರು, ಸಣ್ಣ ವರ್ತಕರಿಗೆ ನೋಟಿಸ್ ನೀಡಿರುವ ವಿಚಾರ, ಮುಂದಿನ ಕ್ರಮಗಳ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ.
ಮತ್ತೊಂದೆಡೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಕ್ರಮ ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲಿದೆ ಎಂದು ಪ್ರತಿಪಕ್ಷಗಳ ಆರೋಪಿಸುತ್ತಿವೆ. ಹೀಗಾಗಿ ರಾಜಕೀಯ ಸ್ವರೂಪ ಪಡೆದುಕೊಂಡರಿರುವ ನೋಟಿಸ್ ವಿಚಾರ ಬಗೆಹರಿಸುವುದಲ್ಲದೇ ವರ್ತಕರ ಮನವೊಲಿಸುವ ಕುರಿತಂತೆಯೂ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ.
ವಾಣಿಜ್ಯ ತೆರಿಗೆ ಅಧಿಕಾರಿಗಳು, ಹಣಕಾಸು ಇಲಾಖೆ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭಯಲ್ಲಿ ಭಾಗವಹಿಸಲಿದ್ದಾರೆ.
ಜಿಎಸ್ಟಿ ನೋಂದಣಿ ಮಾಡಿಸದೇ ಯುಪಿಐ ಮೂಲಕ ಹೆಚ್ಚಿನ ವ್ಯಾಪಾರ ನಡೆಸಿರುವ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಕೋರಮಂಗಲ ವ್ಯಾಪ್ತಿಯಲ್ಲಿ ಯುಪಿಐ ಮೂಲಕ ಕೋಟ್ಯಂತರ ರೂ. ಸ್ವೀಕರಿಸಿದ 850 ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ನೋಟಿಸ್ ನೀಡಲಾಗಿದೆ. ಜಿಎಸ್ಟಿ ವಂಚನೆ ಮಾಡಿದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಜಂಟಿ ಆಯುಕ್ತರಾದ ಮೀರಾ ಪಂಡಿತ್ ಹೇಳಿದ್ದರು.
ಗಾಬರಿ ಬೇಡ, ದಂಡ ಕಡಿಮೆಯಾಗಬಹುದು
ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸ್ನಲ್ಲಿರುವಷ್ಟು ಸಣ್ಣ ವ್ಯಾಪಾರಿಗಳು ಜಿಎಸ್ಟಿ ಹಾಗೂ ದಂಡ ಪಾವತಿಸುವುದು ಕಡ್ಡಾಯವಲ್ಲ. ಜಿಎಸ್ಟಿ ಅನ್ವಯವಾಗದ ಹಣ್ಣು, ತರಕಾರಿ, ಹಾಲಿನ ಉತ್ಪನ್ನಗಳು ಇವೆ. ವ್ಯಾಪಾರಿಗಳು ತಮ್ಮದು ಯಾವ ವ್ಯವಹಾರ ಎಂದು ತಿಳಿಸಿದರೆ ದಂಡ ಕಡಿಮೆಯಾಗಲಿದೆ. ನೋಟಿಸ್ಗೆ ಉತ್ತರಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಆದರೆ, ವ್ಯಾಪಾರಿಗಳು ಬಯಸಿದರೆ ಕಾಲಾವಕಾಶ ವಿಸ್ತರಿಸಲಾಗುವುದು ಎಂದು ಇಲಾಖೆ ಹೇಳಿದೆ.
ಜಿಎಸ್ಟಿ ಮಿತಿ ಹೆಚ್ಚಳಕ್ಕೆ ಮನವಿ
ಸೇವೆ ಸಂಬಂಧಿಸಿದ ವ್ಯಾಪಾರಕ್ಕೆ 20 ಲಕ್ಷ ರೂ. ಹಾಗೂ ಸರಕು ವ್ಯಾಪಾರಕ್ಕೆ 40 ಲಕ್ಷ ರೂ. ಮಿತಿಗೊಳಿಸಿ ಎಂಟು ವರ್ಷಗಳು ಕಳೆದಿವೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು ಲಾಭಾಂಶದಲ್ಲಿ ಕುಸಿತವಾಗಿದೆ. ಆದ್ದರಿಂದ, ಸೇವೆ ಸಂಬಂಧಿಸಿದ ವ್ಯಾಪಾರಕ್ಕೆ 50 ಲಕ್ಷ ರೂ. ಹಾಗೂ ಸರಕು ವ್ಯಾಪಾರಕ್ಕೆ ಒಂದು ಕೋಟಿ ರೂ.ನಿಗದಿಪಡಿಸಬೇಕೆಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ.