Young man dies after falling branch: Minister Khandre orders removal of dangerous tree and branch
x

ಅಪಾಯಕಾರಿ ಕೊಂಬೆಗಳನ್ನು ಗುರುತಿಸಿ ಸಚಿವ ಈಶ್ವರ್‌ ಖಂಡ್ರೆ ತೆರವುಗೊಳಿಸಿದರು. 

ಕೊಂಬೆ ಬಿದ್ದು ಯುವಕ ಸಾವು: ಅಪಾಯಕಾರಿ ವೃಕ್ಷ, ಕೊಂಬೆ ತೆರವಿಗೆ ಸಚಿವ ಖಂಡ್ರೆ ಸೂಚನೆ

ಮಳೆ, ಗಾಳಿಗೆ ಟೊಳ್ಳು ಮರಗಳು ಮತ್ತು ಬೇರು ಕಚ್ಚದ ಮರಗಳು ಬೀಳುತ್ತಿವೆ. ಬೇರಿಗೆ ನೀರು ಇಳಿಯದಂತೆ ಹಾಕಲಾಗಿರುವ ಕಾಂಕ್ರೀಟ್, ಕಲ್ಲಿನ ಚಪ್ಪಡಿ ಮತ್ತು ಟೈಲ್ಸ್ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.


ಬೆಂಗಳೂರಿನಲ್ಲಿ ಮರದ ಒಣಗಿದ ಕೊಂಬೆ ಬಿದ್ದು ವಾಹನ ಸವಾರ ಅಕ್ಷಯ್ (29) ಗುರುವಾರ (ಜೂನ್ 19) ಮೃತಪಟ್ಟ ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂದ್ದು, ಅಪಾಯಕಾರಿ ಮರಗಳನ್ನು ಗುರುತಿಸಿ, ಅವುಗಳ ಕೊಂಬೆಗಳನ್ನು ಕತ್ತರಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಕಂಟೋನ್ಮೆಂಟ್ ಬಳಿ ರಸ್ತೆ ಬದಿಯ ಮರದ ಸುತ್ತಲೂ ಹಾಕಲಾಗಿದ್ದ ಕಾಂಕ್ರೀಟ್ ಅನ್ನು ತೆರವುಗೊಳಿಸುವ ಮೂಲಕ ವೃಕ್ಷ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಮರದ ಕೊಂಬೆ ಬಿದ್ದು ಅಕ್ಷಯ್ ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದರು. ಮಳೆ ಮತ್ತು ಗಾಳಿಗೆ ಟೊಳ್ಳು ಮರಗಳು ಹಾಗೂ ಬೇರು ಕಚ್ಚದ ಮರಗಳು ಬೀಳುತ್ತಿವೆ. ಮರಗಳ ಬೇರಿಗೆ ನೀರು ಇಳಿಯದಂತೆ ಹಾಕಲಾಗಿರುವ ಕಾಂಕ್ರೀಟ್, ಕಲ್ಲಿನ ಚಪ್ಪಡಿ ಮತ್ತು ಟೈಲ್ಸ್ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವೂ ತೀರ್ಪು ನೀಡಿದ್ದು, ಸರ್ಕಾರ ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದೆ ಎಂದು ಖಂಡ್ರೆ ವಿವರಿಸಿದರು.

ಸ್ಥಳೀಯ ಸಂಸ್ಥೆಗಳಿಗೆ ಕ್ರಮ ವಹಿಸಲು ಸೂಚನೆ

ಗುರುವಾರ (ಜೂನ್ 19) ಬಿಬಿಎಂಪಿ ವಿಶೇಷ ಆಯುಕ್ತರು ಮರದ ಸುತ್ತ ಇರುವ ಕಾಂಕ್ರೀಟ್ ತೆರವಿಗೆ ಆದೇಶ ಹೊರಡಿಸಿದ್ದು, ಇನ್ನು ಮುಂದೆ ರಸ್ತೆ ಬದಿಯಲ್ಲಿ ಸಸಿ ನೆಡುವಾಗ ಒಂದು ಮೀಟರ್ ಸುತ್ತಳತೆಯಲ್ಲಿ ಮಣ್ಣು ಇರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಬಿಬಿಎಂಪಿ, ರಾಜ್ಯದ ಎಲ್ಲ ನಗರಗಳ ಸ್ಥಳೀಯ ಸಂಸ್ಥೆಗಳು, ಹೆದ್ದಾರಿ ಪ್ರಾಧಿಕಾರ, ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗಗಳು ಈಗಾಗಲೇ ನೆಟ್ಟಿರುವ ಗಿಡಮರಗಳ ಸುತ್ತ ಇರುವ ಕಾಂಕ್ರೀಟ್ ಮತ್ತು ಡಾಂಬರು ತೆರವಿಗೆ ಕ್ರಮ ವಹಿಸಬೇಕು ಎಂದು ಈಶ್ವರ ಖಂಡ್ರೆ ಸೂಚಿಸಿದರು. ಅಲ್ಲದೆ, ವೃಕ್ಷ ಪ್ರಾಧಿಕಾರವು ನಿಯಮಿತವಾಗಿ ಸಭೆಗಳನ್ನು ನಡೆಸಿ, ಅಪಾಯಕಾರಿ ಮರಗಳನ್ನು ಗುರುತಿಸಿ ಅವುಗಳ ರೆಂಬೆ-ಕೊಂಬೆಗಳ ತೆರವಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

ವೃಕ್ಷ ಸಂರಕ್ಷಣೆಗೆ ಕರೆ

"ಒಬ್ಬ ಮನುಷ್ಯ ನೆಮ್ಮದಿಯಿಂದ ಉಸಿರಾಡಲು ಏಳು ಮರಗಳು ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಪ್ರಸ್ತುತ ಬೆಂಗಳೂರು ಕಾಂಕ್ರೀಟ್ ಕಾಡಾಗಿದ್ದು, ಇಲ್ಲಿ ಏಳು ಜನರಿಗೆ ಒಂದು ಮರವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ" ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ವೃಕ್ಷ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದ ಅವರು, "ಪ್ರತಿಯೊಬ್ಬರಿಗೂ ಆಮ್ಲಜನಕ ಬೇಕು, ಆದರೆ ತಮ್ಮ ಮನೆಯ ಮುಂದೆ ಗಿಡ ಇರಬಾರದು. ಇದರ ಎಲೆ ಉದುರಿದರೆ ಮನೆ ಮುಂದೆ ಕಸ ಆಗುತ್ತದೆ ಎನ್ನುತ್ತಾರೆ. ಇನ್ನು ಮನೆಯ ಸೌಂದರ್ಯಕ್ಕೆ ಅಥವಾ ಅಂಗಡಿಗಳ ಫಲಕ ಕಾಣುವುದಿಲ್ಲ ಎಂದು ಮರ ಕಡಿಯುವ ಪ್ರವೃತ್ತಿ ಹೆಚ್ಚುತ್ತಿದೆ" ಎಂದು ಟೀಕಿಸಿದರು.

"ಬೆಂಗಳೂರು ಬೃಹದಾಕಾರವಾಗಿ ಬೆಳೆದಿದೆ. ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ, ಉದ್ಯಾನ ನಗರ ಎಂದು ಖ್ಯಾತವಾಗಿತ್ತು. ಆದರೆ ಇಂದು ಎಲ್ಲಿ ನೋಡಿದರೂ ಮುಗಿಲೆತ್ತರ ಕಟ್ಟಡಗಳೇ ಕಾಣುತ್ತಿವೆ. ನಾವು ಹಸಿರು ಸಂರಕ್ಷಣೆಗೆ ಕ್ರಮ ವಹಿಸಲೇಬೇಕು. ಇದು ನಮ್ಮೆಲ್ಲರ ಹೊಣೆ. ನಾನು ಅರಣ್ಯ ಸಚಿವನಾಗಿ ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು ಮತ್ತು ವೃಕ್ಷ ಸಂರಕ್ಷಣೆಗೆ ಹಲವಾರು ಕ್ರಮ ಕೈಗೊಂಡಿದ್ದೇನೆ" ಎಂದು ಖಂಡ್ರೆ ಹೇಳಿದರು.

4,000 ಕೋಟಿ ರೂ. ಮೌಲ್ಯದ ಅರಣ್ಯ ಒತ್ತುವರಿ ತೆರವು

ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 2,041 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಮಾಹಿತಿ ನೀಡಿದ ಸಚಿವರು, ಈ ಪೈಕಿ ಕಳೆದ 2 ವರ್ಷಗಳಲ್ಲಿ ಸುಮಾರು ₹4,000 ಕೋಟಿ ಮೌಲ್ಯದ 128 ಎಕರೆ ಅರಣ್ಯ ಭೂಮಿಯ ಒತ್ತುವರಿಯನ್ನು ತೆರವು ಮಾಡಿಸಲಾಗಿದೆ ಎಂದು ತಿಳಿಸಿದರು.

Read More
Next Story