
ಶಾಸಕ ಪ್ರದೀಪ್ ಈಶ್ವರ್
ಯೋಜನೆಗಳಿಗೆ ಹಣಕಾಸು ಇಲಾಖೆ ಒಪ್ಪಿಗೆ ಸಿಗದೇ ವಿಶೇಷ ಸಂಪುಟ ಸಭೆ ಮುಂದೂಡಿಕೆ; ಪ್ರದೀಪ್ ಈಶ್ವರ್
ಕೋಲಾರದಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಬೇಡಿಕೆಗಳಿದ್ದವು. ಕೆಲವು ಯೋಜನೆಗಳಿಗೆ ಅನುಮತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಸಚಿವ ಸಂಪುಟ ಸಭೆ ಮಾಡುತ್ತೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಬಯಲು ಸೀಮೆ ಜಿಲ್ಲೆಗಳ ಅಭಿವೃದ್ಧಿಗೆ ಈ ಭಾಗದ ಶಾಸಕರು 3-4 ಸಾವಿರ ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದೆವು. ಆದರೆ, ಹಣಕಾಸು ಇಲಾಖೆ ಹಲವು ಯೋಜನೆಗಳಿಗೆ ಒಪ್ಪಿಗೆ ನೀಡದ ಕಾರಣ ನಂದಿಬೆಟ್ಟದಲ್ಲಿ ನಡೆಸಲು ಉದ್ದೇಶಿಸಿದ್ದ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಮಜಾಯಿಷಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ವಾಸ್ತು ಸರಿಯಿಲ್ಲದ ಕಾರಣ ಸಚಿವ ಸಂಪುಟ ರದ್ದಾಗಿದೆ ಎಂಬ ಸಂಸದ ಡಾ.ಕೆ. ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸುಧಾಕರ್ ನನ್ನ ಸ್ನೇಹಿತರಲ್ಲ. ಅವರು ನನ್ನ ಹಳೆಯ ಶತ್ರು. ವಾಸ್ತು ಸರಿಯಿಲ್ಲ ಎಂದು ಸಚಿವ ಸಂಪುಟ ರದ್ದಾಗಿಲ್ಲ. ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟಿದ್ದೆವು. ಆದರೆ, ಕೆಲವು ಯೋಜನೆಗಳಿಗೆ ಹಣಕಾಸು ಇಲಾಖೆ ಒಪ್ಪಿಗೆ ದೊರೆತಿರಲಿಲ್ಲ. ಆದ್ದರಿಂದ ಸಚಿವ ಸಂಪುಟ ಮುಂದೂಡಿಕೆಯಾಗಿದೆ ಎಂದು ಹೇಳಿದ್ದಾರೆ.
ನಂದಿ ಬೆಟ್ಟದಲ್ಲಿ ನಡೆಸಿದ್ದ ಸಿದ್ದತೆ ವ್ಯರ್ಥವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಅಲ್ಲಿಯೇ ಸಚಿವ ಸಂಪುಟ ಸಭೆ ಮಾಡುತ್ತೇವೆ ಎಂದು ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಬಹಿರಂಗ ಚರ್ಚೆಗೆ ಆಹ್ವಾನ
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹಾಗೂ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯದ ಮೇಲೆ ಪ್ರೀತಿ ಜಾಸ್ತಿ. ಎನ್ಡಿಎ ಎಂದರೆ "ನೇಷನ್ ಡೆಸ್ಟ್ರಾಯ್ ಅಲೆಯನ್ಸ್". ಕಳೆದ ಒಂದು ವರ್ಷದಿಂದ ಇಬ್ಬರು ಸಚಿವರು ಕೇಂದ್ರ ಸರ್ಕಾರದ ಮೂಲಕ ಯಾವ ಯೋಜನೆಗಳನ್ನು ತಂದಿದ್ದಾರೆ ಎಂಬುದನ್ನು ಮೊದಲು ತೋರಿಸಲಿ. ಅವರಿಗೆ ಆತ್ಮಸಾಕ್ಷಿ ಇದ್ದರೆ ಬಹಿರಂಗ ಚರ್ಚೆಗೆ ಬರಲಿ. ಕೇಂದ್ರ ಸರ್ಕಾರ ಏನೆಲ್ಲಾ ಸಾಧನೆ ಮಾಡಿದೆ ಎಂದು ತಿಳಿಯುವ ಕುತೂಹಲ ನಮಗೂ ಇದೆ. ಬಹಿರಂಹ ಚರ್ಚೆಗೆ ಆಹ್ವಾನ ನೀಡಿದ್ದಾರೆ.