
ಕರ್ನಾಟಕ ಹೈಕೋರ್ಟ್
Bangalore Stampede |ಎರಡು ವಿಚಾರಣಾ ಆಯೋಗದ ತನಿಖೆಯಲ್ಲಿ ಭಿನ್ನತೆ ಕಂಡರೆ ಸುಮ್ಮನೆ ಬಿಡಲ್ಲ; ಹೈಕೋರ್ಟ್ ಎಚ್ಚರಿಕೆ
ಮ್ಯಾಜಿಸ್ಟೀರಿಯಲ್ ಮತ್ತು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗಕ್ಕೆ ವಿಚಾರಣಾ ವ್ಯಾಪ್ತಿ ನಿಗದಿಪಡಿಸಲಾಗಿದೆಯೇ? ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಎರಡು ಪ್ರತ್ಯೇಕ ತನಿಖೆಗಳನ್ನು ಏಕೆ ನಡೆಸಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಎರಡೂ ತನಿಖೆಗಳಲ್ಲಿ ಭಿನ್ನತೆ ಕಂಡು ಬಂದರೆ ರಾಜ್ಯ ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಜೂನ್ 4 ರಂದು ಆರ್ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ ಸಂಬಂಧ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪಿಐಎಲ್ ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ನೇತೃತ್ವದ ವಿಭಾಗೀಯ ಪೀಠ ಗುರುವಾರ ಸರ್ಕಾರಕ್ಕೆ ಈ ಎಚ್ಚರಿಕೆ ಕೊಟ್ಟಿದೆ.
ಘಟನೆಗೆ ಸಂಬಂಧಿಸಿದ ನಡೆಸಿರುವ ಎಲ್ಲಾ ಪತ್ರ ವ್ಯವಹಾರ ಹಾಗೂ ಸಂವಹನದ ಮಾದರಿಗಳನ್ನು (ಆಫ್ಲೈನ್, ಆನ್ಲೈನ್, ವಾಟ್ಸಾಪ್ ಸಂದೇಶವೂ ಸೇರಿ) ಮುಖ್ಯ ಕಾರ್ಯದರ್ಶಿಯ ವಶಕ್ಕೆ ನೀಡಬೇಕು. ಮ್ಯಾಜಿಸ್ಟ್ರೀರಿಯಲ್ ವಿಚಾರಣೆ ಮತ್ತು ನ್ಯಾಯಾಂಗ ವಿಚಾರಣಾ ಆಯೋಗಕ್ಕೆ ವಿಚಾರಣಾ ವ್ಯಾಪ್ತಿ ನಿಗದಿಪಡಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿದೆ.
ವಿಚಾರಣೆ ಆರಂಭಕ್ಕೂ ಮುನ್ನ ಸರ್ಕಾರದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಹೈಕೋರ್ಟ್ ಕೇಳಿದ್ದ 9 ಪ್ರಶ್ನೆಗಳಿಗೆ ಉತ್ತರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ಈ ಎಲ್ಲಾ ದಾಖಲೆಗಳು ಕನ್ನಡದಲ್ಲಿದ್ದು, ಎರಡು ದಿನಗಳಲ್ಲಿ ಇಂಗ್ಲಿಷ್ಗೆ ಅನುವಾದಿಸಿ ಕೋರ್ಟ್ಗೆ ಸಲ್ಲಿಸಲಾಗುವುದು ಎಂದು ಹೇಳಿದರು.
ವಿಚಾರಣಾ ವ್ಯಾಪ್ತಿ ನಿಗದಿಪಡಿಸಿ; ಹೈಕೋರ್ಟ್
“ಮ್ಯಾಜಿಸ್ಟೀರಿಯಲ್ ಮತ್ತು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗಕ್ಕೆ ವಿಚಾರಣಾ ವ್ಯಾಪ್ತಿ ನಿಗದಿಪಡಿಸಲಾಗಿದೆಯೇ? ಎಂದು ಹೈಕೋರ್ಟ್ ಸರ್ಕಾರದ ಅಡ್ವೊಕೇಟ್ ಜನರಲ್ ಅವರನ್ನು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಎಜಿ (ಅಡ್ವೊಕೇಟ್ ಜನರಲ್) ಕೆ. ಶಶಿಕಿರಣ್ ಶೆಟ್ಟಿ ಅವರು, ಎರಡು ಆಯೋಗಗಳಿಗೆ ವಿಚಾರಣಾ ವ್ಯಾಪ್ತಿ ಕುರಿತು ಸ್ಪಷ್ಟಪಡಿಸಲಾಗಿದೆ. ದುರಂತದ ಕುರಿತ ಎಲ್ಲಾ ಹೇಳಿಕೆಗಳಿಗೂ ಪೂರಕ ದಾಖಲೆಗಳನ್ನು ಒದಗಿಸಲಾಗಿದೆ” ಎಂದರು.
ಮುಖ್ಯಕಾರ್ಯದರ್ಶಿಗೆ ಎಲ್ಲಾ ದಾಖಲೆ ನೀಡಿ
“ದುರಂತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂರಕ್ಷಿಸಿಡಲು ಸರ್ಕಾರವು ಯಾರಿಗಾದರೂ ಉಸ್ತುವಾರಿ ನೀಡಿದೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿತು. ಸರ್ಕಾರದ ವಿವಿಧ ಇಲಾಖೆಗಳು ಈಗಾಗಲೇ ಹೊರಡಿಸಿರುವ ಆದೇಶದಲ್ಲಿ ತಿದ್ದುಪಡಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈವರೆಗಿನ ಎಲ್ಲಾ ದಾಖಲೆಗಳನ್ನು ನೀಡಬೇಕು. ತನಿಖೆ ಏನೇ ಆದರೂ, ಅದು ನಮಗೆ ಅನ್ವಯವಾಗುವುದಿಲ್ಲ (ಬೈಂಡಿಂಗ್).” ಎಂದಿತು.
"ನ್ಯಾಯಾಂಗ ವಿಚಾರಣಾ ಆಯೋಗದ ವರದಿ ಬಳಿಕ ಮಧ್ಯಪ್ರವೇಶಕ್ಕೆ ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಾರ್ಗಸೂಚಿ ಪಾಲಿಸಲಾಗಿದೆಯೇ ಎಂಬುದೇ ಪ್ರಶ್ನೆಯಾಗಿದೆ. ಅದನ್ನು ಸರ್ಕಾರ ಸಾಬೀತುಪಡಿಸಬೇಕಿದೆ. ಈ ಎಲ್ಲವನ್ನೂ ನ್ಯಾಯಾಲಯ ಪರಿಶೀಲಿಸಲಿದ್ದು, ಏನನ್ನೂ ಬಚ್ಚಿಡುವುದಿಲ್ಲ. ಭವಿಷ್ಯದಲ್ಲಿ ಇಂತಹ ದುರ್ಘಟನೆ ಆಗದಂತೆ ತಡೆಯುವ ವಿಚಾರದಲ್ಲಿ ನಾವು ಪಾರದರ್ಶಕವಾಗಿದ್ದೇವೆ” ಎಂದು ಹೇಳಿತು.
ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್ ಸೇರಿ ಐವರು ಅಧಿಕಾರಿಗಳ ವಾದ ಆಲಿಸದೇ ಅವರನ್ನು ಅಮಾನತು ಮಾಡಲಾಗಿದೆ ಎಂದು ವಕೀಲರೊಬ್ಬರು ವಾದಿಸಲು ಮುಂದಾದರು. ಇದಕ್ಕೆ ನ್ಯಾಯಾಲಯ ಅವಕಾಶ ನೀಡಲಿಲ್ಲ.
ಎನ್ಡಿಆರ್ಎಫ್ ಮಾರ್ಗಸೂಚಿ ಪಾಲಿಸಿಲ್ಲ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಾರ್ಗಸೂಚಿಗಳನ್ನು 2014ರಿಂದಲೂ ರಾಜ್ಯದಲ್ಲಿ ಪಾಲಿಸಲಾಗುತ್ತಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಪ್ರತಿನಿಧಿಸಿದ್ದ ವಕೀಲ ಕೆ. ದಿವಾಕರ್ ಪೀಠದ ಗಮನ ಸೆಳೆದರು.
ಹಿರಿಯ ವಕೀಲ ಎಂ.ಬಿ. ನರಗುಂದ್ ಅವರು “ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಸಾಕಷ್ಟು ಮಂದಿ ಮೃತಪಟ್ಟಿದ್ದರು. ಈ ಘಟನೆಯ ಮೇಲೆ ಹೈಕೋರ್ಟ್ ನಿಗಾ ಇಟ್ಟಿತ್ತು. ಈ ಪ್ರಕರಣದಲ್ಲೂ ಹಾಗೇ ಮಾಡಬೇಕು." ಎಂದು ಮನವಿ ಮಾಡಿದರು.