ಕಮಲ್ ಹಾಸನ್ ಭಾಷಾ ವಿವಾದ: ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಕೆಎಫ್‌ಸಿಸಿಗೆ ಪತ್ರ ಬರೆದ ನಟ
x

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಕಮಲ್‌ ಹಾಸನ್‌ ಪತ್ರ ಬರೆದಿದ್ದಾರೆ.

ಕಮಲ್ ಹಾಸನ್ ಭಾಷಾ ವಿವಾದ: "ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ," ಕೆಎಫ್‌ಸಿಸಿಗೆ ಪತ್ರ ಬರೆದ ನಟ

ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್‌ ಕುಟುಂಬ ಹಾಗೂ ಶಿವರಾಜ್‌ಕುಮಾರ್‌ ಬಗ್ಗೆ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕನ್ನಡಕ್ಕೆ ಧಕ್ಕೆಯಾಗಲು ನಾನು ಹೇಳಿಕೆ ನೀಡಿಲ್ಲ ಎಂದು ನಟ ಕಮಲ್‌ ಹಾಸನ್‌ ತಿಳಿಸಿದ್ದಾರೆ.


ಕನ್ನಡ ಭಾಷೆಯ ಬಗ್ಗೆ ತಾವು ನೀಡಿದ್ದ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ, ನಟ ಕಮಲ್ ಹಾಸನ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್‌ಸಿಸಿ) ಪತ್ರ ಬರೆದಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿರುವ ಅವರು, ಕನ್ನಡ ಭಾಷೆಯ ಮೇಲೆ ತನಗೆ ಅಪಾರ ಗೌರವವಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ (ಜೂನ್ 3) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರಿಗೆ ಪತ್ರ ಬರೆದಿರುವ ಕಮಲ್ ಹಾಸನ್, "ಥಗ್‌ ಲೈಫ್" ಸಿನಿಮಾದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಕುಟುಂಬ ಹಾಗೂ ಶಿವರಾಜ್‌ಕುಮಾರ್ ಬಗ್ಗೆ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕನ್ನಡಕ್ಕೆ ಧಕ್ಕೆಯಾಗಲು ನಾನು ಹೇಳಿಕೆ ನೀಡಿಲ್ಲ," ಎಂದಿದ್ದಾರೆ.

ಕಮಲ್ ಹಾಸನ್ ತಮ್ಮ ಪತ್ರದಲ್ಲಿ, ಕನ್ನಡ ಮತ್ತು ತಮಿಳು ಎರಡೂ ಕೂಡ ತನ್ನದೇ ಆದ ಶ್ರೀಮಂತ ಪರಂಪರೆ ಹಾಗೂ ಇತಿಹಾಸ ಹೊಂದಿವೆ. ತಮಿಳಿನಂತೆ ಕನ್ನಡವೂ ಕೂಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ತಮ್ಮ ಸಿನಿ ಪಯಣದುದ್ದಕ್ಕೂ ಕನ್ನಡಿಗರು ತಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. "ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದುದು ಹಾಗೂ ಕನ್ನಡಿಗರು ತಮ್ಮ ಮಾತೃಭಾಷೆ ಮೇಲೆ ಹೊಂದಿರುವ ಪ್ರೀತಿಯ ಬಗ್ಗೆ ನನಗೆ ಗೌರವವಿದೆ," ಎಂದು ಅವರು ಹೇಳಿದ್ದಾರೆ.

ಭಾಷಾ ಪ್ರಾಬಲ್ಯವನ್ನು ವಿರೋಧಿಸುವೆ

ಮಲಯಾಳಂ, ತೆಲುಗು, ಕನ್ನಡ ಹಾಗೂ ತಮಿಳು ಸೇರಿದಂತೆ ಈ ನೆಲದ ಎಲ್ಲಾ ಭಾಷೆಗಳೊಂದಿಗೆ ತಮ್ಮ ಬಾಂಧವ್ಯ ಕೊನೆಯವರೆಗೂ ಇರಲಿದೆ ಎಂದು ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ. "ಪ್ರತಿ ಬಾರಿಯೂ ನಾನು ದೇಶದ ಎಲ್ಲಾ ಭಾಷೆಗಳ ಜತೆ ನಿಲ್ಲುತ್ತೇನೆ ಹಾಗೂ ಯಾವುದೇ ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ. ಏಕೆಂದರೆ, ಭಾಷೆಯ ಅಸಮತೋಲನವು ದೇಶದ ಒಕ್ಕೂಟ ರಚನೆಯನ್ನು ಹಾಳು ಮಾಡುತ್ತದೆ," ಎಂದು ಅವರು ತಿಳಿಸಿದ್ದಾರೆ.

ಕನ್ನಡಿಗರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆಂಬ ನಂಬಿಕೆ"

ಸಿನಿಮಾ ಎನ್ನುವುದು ಜನರನ್ನು ಬೆಸೆಯುವ ಸೇತುವೆಯಾಗಬೇಕು, ತಪ್ಪು ತಿಳಿವಳಿಕೆ ತಾತ್ಕಾಲಿಕ ಮತ್ತು ಪ್ರೀತಿ ಶಾಶ್ವತ ಎಂದು ಕಮಲ್ ಹಾಸನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. "ಕನ್ನಡಿಗರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ," ಎಂದಿರುವ ಅವರು, "ನನ್ನ ಹೇಳಿಕೆಯಿಂದ ಶಿವರಾಜ್‌ಕುಮಾರ್ ಇಷ್ಟೊಂದು ಮುಜುಗರ ಅನುಭವಿಸುವಂತಾಗಿದ್ದಕ್ಕೆ ವಿಷಾದವಿದೆ. ಆದರೆ, ನಮ್ಮ ನಿಜವಾದ ಪ್ರೀತಿ ಹಾಗೂ ಪರಸ್ಪರ ಗೌರವ ಯಾವಾಗಲೂ ಉಳಿಯುತ್ತದೆ ಹಾಗೂ ಇನ್ನಷ್ಟು ಬಲಗೊಳ್ಳುತ್ತದೆ," ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Read More
Next Story