
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
ಜೋಯಿಡಾ ಶೀಘ್ರವೇ ದೇಶದ ಮೊದಲ ಸಾವಯವ ತಾಲೂಕು
ಭೂಮಿಯಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರ ಬಳಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಂಪೂರ್ಣ ಸಾವಯವ ಕೃಷಿ ತಾಲೂಕಾಗಿ ಪರಿವರ್ತಿಸಲು ರೈತರ ಸಹಕಾರವು ಅಗತ್ಯವಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕೃಷಿ ಭೂಮಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ದೇಶದ ಮೊದಲ ಸಾವಯವ ಕೃಷಿ ತಾಲೂಕನ್ನಾಗಿ ಶೀಘ್ರವೇ ಪರಿವರ್ತಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಐಸಿಎಆರ್ - ಕೃಷಿ ವಿಜ್ಞಾನ ಕೇಂದ್ರ ಶಿರಸಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜೋಯಿಡಾ ತಾಲೂಕನ್ನು ಸಾವಯವ ತಾಲೂಕನ್ನಾಗಿ ಪರಿವರ್ತಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜೋಯಿಡಾ ತಾಲೂಕು ಶೇ. 70ರಷ್ಟು ಅರಣ್ಯದಿಂದ ಕೂಡಿದ್ದು ಇಲ್ಲಿನ ವಾತಾವರಣ ಬೇರೆ ಕಡೆ ಎಲ್ಲೂ ನೋಡಲು ಸಾಧ್ಯವಿಲ್ಲ ಎಂದರು.
ರೈತರ ಸಹಕಾರ ಅಗತ್ಯ
ಇಲ್ಲಿನ ಪರಿಸರ ನೈಸರ್ಗಿಕ ಸಂಪತ್ತಿನಿಂದ ಕೂಡಿದ್ದು, ಭೂಮಿಯಲ್ಲಿ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರ ಬಳಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಂಪೂರ್ಣ ಸಾವಯವ ಕೃಷಿ ತಾಲೂಕಾಗಿ ಪರಿವರ್ತಿಸಲು ರೈತರ ಸಹಕಾರವು ಅಗತ್ಯವಾಗಿದೆ. ಹಿಂದೆ ಸಾವಯವ ಗೊಬ್ಬರಗಳನ್ನು ಬಳಸಿಕೊಂಡು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳಿಗೆ ಮಾರು ಹೋಗಿದ್ದು ಇದರ ದುಷ್ಪರಿಣಾಮಗಳ ಬಗ್ಗೆ ಕೃಷಿ ತಜ್ಞರು ಆಗ್ಗಾಗ್ಗೆ ಎಚ್ಚರಿಸುತ್ತಲೇ ಇದ್ದಾರೆ ಎಂದು ತಿಳಿಸಿದರು.
3 ವರ್ಷಗಳಲ್ಲಿ ಯೋಜನೆ ಪೂರ್ಣ
ಮುಂದಿನ 3 ವರ್ಷಗಳಲ್ಲಿ ಜೋಯಿಡಾವನ್ನು ಸಾವಯವ ತಾಲೂಕಾಗಿ ಪರಿವರ್ತಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ತಾಲೂಕಿನ ಶೇ.70ರಷ್ಟು ಅರಣ್ಯ ಭೂಮಿಯ ನಡುವೆ ಕೃಷಿ ಭೂಮಿ ಇದೆ. ಒಟ್ಟು 4,059 ಎಕರೆ ಭತ್ತ, 121 ಎಕರೆ ಅಡಕೆ, 286 ಎಕರೆ ಬಾಳೆ ಹಾಗೂ 81 ಎಕರೆ ಕಬ್ಬು ಬೆಳೆಯಲಾಗುತ್ತಿದೆ. ಉಪ ಬೆಳೆಯಾಗಿ ಕಾಳು ಮೆಣಸು, ಗೋಡಂಬಿ ಮತ್ತಿತರ ಬೆಳೆಗಳಿದ್ದು ತಾಲೂಕಿನ ರೈತರು ಶೇ.80ರಷ್ಟು ರಾಸಾಯನಿಕ ಗೊಬ್ಬರ ಬದಲು ಹಸುವಿನ ಸಗಣಿ ಗೊಬ್ಬರವನ್ನೇ ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಶೇ.50 ಟನ್ಗೂ ಹೆಚ್ಚು ಶುದ್ಧ ಜೇನುತುಪ್ಪ ಉತ್ಪಾದನೆ
ತಾಲೂಕಿನಲ್ಲಿ ಕುಣಬಿ ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾವಯವ ಕೃಷಿಯ ಮೂಲಕ 43 ವಿವಿಧ ಪ್ರಭೇದದ ಗಡ್ಡೆ ಗೆಣಸುಗಳನ್ನು ಬೆಳೆಯುತ್ತಾರೆ. ಅದಕ್ಕೆ ಕೇಂದ್ರ ಸರ್ಕಾರದ ಪ್ರಮಾಣೀಕರಣ ಕೂಡ ಸಿಕ್ಕಿದೆ. ಜತೆಗೆ ಪ್ರತಿ ವರ್ಷ ಶೇ.50 ಟನ್ಗೂ ಹೆಚ್ಚು ಶುದ್ಧ ಜೇನುತುಪ್ಪ ಉತ್ಪಾದನೆ ಆಗುತ್ತದೆ ಎಂದರು.
24,000 ಕೃಷಿ ಹೊಂಡ ನಿರ್ಮಾಣ
ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರದಲ್ಲೂ ಕೃಷಿ ಹೊಂಡ ನಿರ್ಮಿಸಲು ತೀರ್ಮಾನಿಸಲಾಗಿದೆ. ಈಗಾಗಲೇ 24,000 ಕೃಷಿ ಹೊಂಡ ನಿರ್ಮಾಣ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಕೃಷಿ ಹೊಂಡ ನಿರ್ಮಿಸಲಾಗುವುದು. ಕಬ್ಬು ಬೆಳೆಗಾರರಿಗೆ ಕಬ್ಬು ಕಟಾವು ಮಾಡಲು, ಯಂತ್ರೋಪಕರಣ ಖರೀದಿಸಲು 50 ಲಕ್ಷ ರೂ. ವರೆಗೂ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.