ಪರಿಶಿಷ್ಟ ಜಾತಿ ಒಳ ಮೀಸಲು ಸಮೀಕ್ಷೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಗತಿ ಕುಂಠಿತ; ಅವಧಿ ವಿಸ್ತರಣೆ
x

ಸಾಂದರ್ಭಿಕ ಚಿತ್ರ

ಪರಿಶಿಷ್ಟ ಜಾತಿ ಒಳ ಮೀಸಲು ಸಮೀಕ್ಷೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಗತಿ ಕುಂಠಿತ; ಅವಧಿ ವಿಸ್ತರಣೆ

ಈವರೆಗೆ ರಾಜ್ಯಾದ್ಯಂತ ಶೇ.91 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.50ರಷ್ಟು ಸಮೀಕ್ಷೆ ಮುಗಿದಿದೆ. ಸಮೀಕ್ಷೆಯಲ್ಲಿ ಭಾಗವಹಿಸದ ನಾಗರಿಕರಿಗೆ ಕರ್ನಾಟಕ ಒನ್. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಮೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.


ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ (SC) ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಡೆಸುತ್ತಿರುವ ಸಮೀಕ್ಷೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಇಲ್ಲಿಯವರೆಗೆ ಕೇವಲ ಶೇ. 50ರಷ್ಟು ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ. ಸಮೀಕ್ಷೆಯಲ್ಲಿ ಭಾಗವಹಿಸದೆ ಇರುವ ಕುಟುಂಬಗಳಿಗೆ ಅಂತಿಮ ಅವಕಾಶ ನೀಡುವ ಸಲುವಾಗಿ, ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ಆಯೋಗವು ಸಮೀಕ್ಷೆಯ ಅವಧಿಯನ್ನು ಜೂನ್ 23 ರಿಂದ ಜೂನ್ 30ರವರೆಗೆ ವಿಸ್ತರಿಸಿದೆ.

ಮೇ 5 ರಂದು ಮನೆ ಮನೆ ಸಮೀಕ್ಷೆ ಆರಂಭಗೊಂಡಿತ್ತು. ಈವರೆಗೆ ರಾಜ್ಯಾದ್ಯಂತ ಸಮೀಕ್ಷೆಯಲ್ಲಿ ಶೇ. 91ರಷ್ಟು ಪ್ರಗತಿ ಸಾಧಿಸಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಶೇ. 50ರಷ್ಟು ಮಾತ್ರ ಸಮೀಕ್ಷೆ ಮುಗಿದಿದೆ. ಸಮೀಕ್ಷೆಯಲ್ಲಿ ಭಾಗವಹಿಸದ ನಾಗರಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಮೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್‌ಗಳಲ್ಲೂ ಪ್ರತ್ಯೇಕ ಶಿಬಿರಗಳನ್ನು ತೆರೆಯಲಾಗಿದೆ. ಆನ್‌ಲೈನ್ ಮೂಲಕವೂ ([https://schedulecastesurvey.karnataka.gov.in/selfdeclaration](https://schedulecastesurvey.karnataka.gov.in/selfdeclaration)) ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಮೀಕ್ಷೆ ಪೂರ್ಣಗೊಳಿಸಲು ಆಯೋಗದ ಸೂಚನೆ ಮತ್ತು ಸವಾಲುಗಳು

ಸಮೀಕ್ಷೆಗೆ ಮತ್ತಷ್ಟು ವೇಗ ನೀಡುವಂತೆ ಆಯೋಗವು ಎಲ್ಲಾ ಜಿಲ್ಲಾಧಿಕಾರಿಗಳು, ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ವಲಯ ಆಯುಕ್ತರಿಗೆ ಪತ್ರ ಬರೆದಿದೆ. ವಿಸ್ತೃತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹಣೆಗಾಗಿ ಸರ್ಕಾರ ಇಲ್ಲಿಯವರೆಗೆ ಒಟ್ಟು ಆರು ಬಾರಿ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಿದೆ. ಕಳೆದ ಬಾರಿ ಮತಗಟ್ಟೆವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಹಾಗೂ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವ ಅವಧಿಯನ್ನು ಮೇ 19 ರಿಂದ ಮೇ 28 ರವರೆಗೆ ನಿಗದಿಪಡಿಸಿತ್ತು. ಮೇ 16ರವರೆಗೆ ಪರಿಶಿಷ್ಟ ಜಾತಿಯ ಸುಮಾರು 20 ಲಕ್ಷ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿತ್ತು. ಅಂದು ರಾಜ್ಯವ್ಯಾಪಿ ಶೇ. 73.22 ರಷ್ಟು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 36 ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದರಿಂದ ಆಯೋಗ ಈ ನಿರ್ಧಾರ ಕೈಗೊಂಡಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 50 ಸಮೀಕ್ಷೆ ಮುಗಿದಿದ್ದು, ಇನ್ನೂ ಶೇ. 50 ರಷ್ಟು ಸಮೀಕ್ಷೆ ಬಾಕಿ ಉಳಿದಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು, ಜೂನ್ 23 ರಿಂದ ನಡೆಯುವ ಸಮೀಕ್ಷೆಯ ವೇಳೆ ಗಣತಿದಾರರು ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಬೇಕು ಹಾಗೂ ಸ್ಟಿಕ್ಕರ್‌ ತೆರವುಗೊಳಿಸದಂತೆ ಮನೆಯ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ದಿನಾಂಕ ವಿಸ್ತರಣೆ ವಿರೋಧ ಮತ್ತು ಪರಿಣಾಮಗಳು

ಒಳಮೀಸಲಾತಿ ನೀಡಲು ಸರ್ಕಾರ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ಆಯೋಗವನ್ನು ರಚಿಸಿ ಸಮೀಕ್ಷೆ ನಡೆಸುತ್ತಿದೆ. ಆದರೆ, ಸಮೀಕ್ಷೆಯ ವಿಳಂಬದಿಂದಾಗಿ ಒಳಮೀಸಲಾತಿ ಜಾರಿಯೂ ವಿಳಂಬವಾಗುತ್ತಿದೆ. ಇದರಿಂದ ಸರ್ಕಾರದಿಂದ ಯಾವುದೇ ನೇಮಕಾತಿಗಳು ನಡೆಯುತ್ತಿಲ್ಲ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಇತ್ತೀಚೆಗೆ ಆಯೋಗಕ್ಕೆ ಮನವಿ ಸಲ್ಲಿಸಿ, ಮತ್ತೊಮ್ಮೆ ದಿನಾಂಕ ಮುಂದೂಡದಂತೆ ಒತ್ತಾಯಿಸಿದ್ದರು. ಸಮೀಕ್ಷೆಯು ತ್ವರಿತವಾಗಿ ಪೂರ್ಣಗೊಂಡರೆ ಮಾತ್ರ ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರಕ್ಕೆ ದತ್ತಾಂಶ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ವಿಳಂಬವು ಅರ್ಹ ಸಮುದಾಯಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ತಡೆಹಿಡಿಯುವ ಆತಂಕವನ್ನು ಸೃಷ್ಟಿಸಿದೆ.

Read More
Next Story