
ವಿಧಾನಸೌಧ
State Security Commission | ರಾಜ್ಯ ಭದ್ರತಾ ಆಯೋಗ ರಚಿಸಿ ಸರ್ಕಾರ ಅಧಿಸೂಚನೆ
ವಕೀಲ ಎಸ್. ಉಮಾಪತಿ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (PIL) ಆದೇಶದ ಮೇರೆಗೆ ಸರ್ಕಾರವು ರಾಜ್ಯ ಭದ್ರತಾ ಆಯೋಗವನ್ನು ರಚಿಸಲು ಸೂಚನೆ ನೀಡಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ಭದ್ರತಾ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಹಿರಿಯ ವಕೀಲ ಉಮಾಪತಿ ಎಸ್. ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಹೈಕೋರ್ಟ್ ನೀಡಿದ್ದ ಆದೇಶದ ಮೇರೆಗೆ ರಾಜ್ಯ ಸರ್ಕಾರವು ರಾಜ್ಯ ಭದ್ರತಾ ಆಯೋಗವನ್ನು ರಚಿಸಿ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ, 2012 ರ ಸೆಕ್ಷನ್ 20(A) ರ ಅಡಿ ಕಡ್ಡಾಯಗೊಳಿಸಿ ರಾಜ್ಯ ಭದ್ರತಾ ಆಯೋಗ ಸ್ಥಾಪನೆ ಮಾಡಲಾಗಿದೆ. 1996 ರಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗೆ ಸಂಬಂಧಿಸಿ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಸುಪ್ರೀಂಕೋರ್ಟ್ 2006 ರಲ್ಲಿ ಹೊರಡಿಸಿದ ನಿರ್ದೇಶನಗಳ ಅನುಸಾರವಾಗಿ ಆಯೋಗವನ್ನು ರಚಿಸಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರನ್ನು ರಾಜ್ಯ ಭದ್ರತಾ ಆಯೋಗದ ಸದಸ್ಯರನ್ನಾಗಿ ಅಧಿಕೃತವಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆಯೋಗದಲ್ಲಿ ಯಾರೆಲ್ಲಾ ಇರಲಿದ್ದಾರೆ?
ರಾಜ್ಯ ಭದ್ರತಾ ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿ ಇರಲಿದ್ದಾರೆ. ಆಯೋಗದ ಉಪಾಧ್ಯಕ್ಷರಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸದಸ್ಯರಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ, ಹೈಕೋರ್ಟ್ನಿಂದ ನಾಮ ನಿರ್ದೇಶನಗೊಂಡ ನಿವೃತ್ತ ನ್ಯಾಯಮೂರ್ತಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಇರಲಿದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಡಿಜಿ ಹಾಗೂ ಐಜಿಪಿ ಅವರು ಕಾರ್ಯ ನಿರ್ವಹಿಸಲಿದ್ದಾರೆ.