10 ಮಹಿಳಾ ಕಾರ್ಮಿಕರನ್ನು ವಿಮಾನದಲ್ಲಿ ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋದ ಮಾಲೀಕ!
x
ಕೂಲಿ ಕಾರ್ಮಿಕರನ್ನು ವಿಮಾನದಲ್ಲಿ ಗೋವಾಕ್ಕೆ ಕರೆದುಕೊಂಡು ಹೋದ ಮಾಲೀಕ

10 ಮಹಿಳಾ ಕಾರ್ಮಿಕರನ್ನು ವಿಮಾನದಲ್ಲಿ ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋದ ಮಾಲೀಕ!

ಕಾರ್ಮಿಕರ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಮಾಲೀಕ ವಿಶ್ವನಾಥ ಅವರು ಮೂರು ದಿನಗಳ ಪ್ರವಾಸಕ್ಕೆಂದು ಗೋವಾಗೆ ಕರೆದುಕೊಂಡು ಹೋಗಿದ್ದಾರೆ.


ತಮ್ಮ ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಬಡ ಕೂಲಿ ಕಾರ್ಮಿಕರ ಆಸೆಯನ್ನು ತೋಟದ ಮಾಲೀಕರೊಬ್ಬರು ಈಡೇರಿಸಿದ್ದಾರೆ. ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರನ್ನು ಅವರು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಗೋವಾಗೆ ಕರೆದುಕೊಂಡು ಹೋಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ಗ್ರಾಮದ ರೈತ ವಿಶ್ವನಾಥ್ ಅವರು ತಮ್ಮ ಕೆಲಸ ನಿಮಿತ್ತ ಆಗಾಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅದನ್ನು ಕೇಳಿಸಿಕೊಂಡಿದ್ದ ಜಮೀನಿನಲ್ಲಿ ಕೆಲಸ ಮಾಡುವ ಮಹಿಳೆಯರು ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಬಯಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವರೆಲ್ಲರನ್ನೂ 'ಸ್ಟಾರ್ ಏರ್​' ವಿಮಾನದ ಮೂಲಕ ಮೂರು ದಿನಗಳ ಕಾಲ ಗೋವಾ ಪ್ರವಾಸ ಕರೆದುಕೊಂಡು ಹೋಗಿದ್ದಾರೆ . ಪ್ರವಾಸದ ಸಮಯದಲ್ಲಿ ಉಡಲು ಅವರೆಲ್ಲರಿಗೂ ಒಂದೇ ರೀತಿಯ ಹೊಸ ಸೀರೆಗಳನ್ನು ಕೂಡ ವಿಶ್ವನಾಥ್ ಖರೀದಿಸಿ ನೀಡಿದ್ದರು.

ಆರಂಭದಲ್ಲಿ ವಿಶ್ವನಾಥ್‌ ಅವರು ಮಹಿಳೆಯರನ್ನು ತಿರುಪತಿಗೆ ಕರೆದೊಯ್ಯಲು ಯೋಜಿಸಿದ್ದರು. ಆದರೆ, ವಿಮಾನ ಟಿಕೆಟ್‌ಗಳು ಲಭ್ಯವಿಲ್ಲದ ಕಾರಣ ಗೋವಾಕ್ಕೆ ಕರೆದುಕೊಂಡು ಹೋಗಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಗೋವಾಗೆ ಕೂಲಿ ಕಾರ್ಮಿಕ ಮಹಿಳೆಯರನ್ನು ವಿಮಾನ ಪ್ರಯಾಣ ಮಾಡಿಸಿದ ರೈತ ವಿಶ್ವನಾಥ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ವಿಮಾನದಲ್ಲಿ ಪ್ರಯಾಣ ಮಾಡಿದ ಕೂಲಿ ಕಾರ್ಮಿಕ ಮಹಿಳೆಯರು ಕೂಡಾ ಸಂತೋಷಪಟ್ಟಿದ್ದಾರೆ.

Read More
Next Story