No Rejection of Compassionate Job Citing Lack of Vacancy: High Court Order
x

ಕರ್ನಾಟಕ ಹೈಕೋರ್ಟ್‌ 

ಅರಣ್ಯ ಒತ್ತುವರಿ ಪ್ರಕರಣ | ರಮೇಶ್‌ ಕುಮಾರ್‌ ವಿರುದ್ಧ ಆತುರದ ಕ್ರಮಬೇಡ: ಹೈಕೋರ್ಟ್‌

ಮುಂದಿನ ವಿಚಾರಣೆವರೆಗೆ ಪ್ರತಿವಾದಿಗಳು ಯಾವುದೇ ಆತುರದ ಕ್ರಮಕೈಗೊಳ್ಳಬಾರದು ಮತ್ತು ಆರೋಪಿತರು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ


ಅರಣ್ಯ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆಗೆ ಹಾಜರಾಗುವಂತೆ ವಿಧಾನಸಭಾ ಮಾಜಿ ಸಭಾಧ್ಯಕ್ಷ ಕೆ ಆರ್‌ ರಮೇಶ್‌ ಕುಮಾರ್‌ಗೆ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರ ನೀಡಿರುವ ನೋಟಿಸ್‌ ಸಂಬಂಧ ಯಾವುದೇ ಆತುರ ಕ್ರಮಕೈಗೊಳ್ಳಬಾರದು ಮತ್ತು ಆರೋಪಿತರು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರ ಜಾರಿ ಮಾಡಿರುವ ನೋಟಿಸ್‌ ವಜಾ ಮಾಡಬೇಕು ಹಾಗೂ ಆಕ್ಷೇಪಾರ್ಹವಾದ ಭೂಮಿಗೆ ಸಂಬಂಧಿಸಿದಂತೆ ನಡೆಸಲಾಗಿರುವ ಮೂರು ಸರ್ವೇ ವರದಿಯ ಕುರಿತು ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಮೇಶ್‌ ಕುಮಾರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು “ಮುಂದಿನ ವಿಚಾರಣೆವರೆಗೆ ಪ್ರತಿವಾದಿಗಳು ಯಾವುದೇ ಆತುರದ ಕ್ರಮಕೈಗೊಳ್ಳಬಾರದು ಮತ್ತು ಆರೋಪಿತರು ಯಥಾಸ್ಥಿತಿ ಕಾಯ್ದುಕೊಳ್ಳಬೇಕು” ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್‌ 10ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಆರ್‌ ಶ್ರೀನಿವಾಸ್‌ ಗೌಡ ಅವರು “ಕಂದಾಯ ಭೂಮಿಯಿಂದ ರಮೇಶ್‌ ಕುಮಾರ್‌ ಅವರನ್ನು ತೆರವು ಮಾಡಲು ಅರಣ್ಯ ಇಲಾಖೆಯವರು ಪ್ರಯತ್ನಿಸಿದ್ದರು. ಇದನ್ನು ಪ್ರಶ್ನಿಸಿ ಅರಣ್ಯ ಸಂರಕ್ಷಣಾಧಿಕಾರಿಯ ಮುಂದೆ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕಾರವಾಗಿತ್ತು. ಆದರೆ, 2014ರಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಹೈಕೋರ್ಟ್‌ ಬದಿಗೆ ಸರಿಸಿ, ಸರ್ವೇ ನಡೆಸುವಂತೆ ಸೂಚಿಸಿತ್ತು. ಆನಂತರ ಎರಡು ಸರ್ವೇ ನಡೆಸಿ, ಅದರ ವರದಿಯನ್ನು ಸರ್ಕಾರದ ಮುಂದೆ ಇಡಲಾಗಿದೆ” ಎಂದರು.

ರಾಜ್ಯ ಸರ್ಕಾರದ ಪರ ವಕೀಲರು “ರಮೇಶ್‌ ಕುಮಾರ್‌ ಅವರು ಷೋಕಾಸ್‌ ನೋಟಿಸ್‌ ಪ್ರಶ್ನಿಸಿದ್ದಾರೆ. ಸುಮಾರು 60 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು ಲಘುದಾಟಿಯಲ್ಲಿ “ಅರಣ್ಯ ಇಲಾಖೆಯ ಕಣ್ಣು ಎಲ್ಲಿ ಬೀಳುತ್ತದೋ ಅದು ಅರಣ್ಯ ಭೂಮಿಯಾಗುತ್ತದೆ” ಎಂದಿತು.

ಪ್ರಕರಣದ ಹಿನ್ನೆಲೆ

2013ರ ಜುಲೈ 11ರಂದು ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ ಅವರ ಏಕಸದಸ್ಯ ಪೀಠವು “ಕೋಲಾರ ಜಿಲ್ಲಾಧಿಕಾರಿ, ಭೂ ದಾಖಲೆ ಇಲಾಖೆಯ ಉಪನಿರ್ದೇಶಕರು, ರಮೇಶ್‌ ಕುಮಾರ್‌ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ಗುರುತಿಸಬೇಕು. ರಮೇಶ್‌ ಕುಮಾರ್‌ ಅವರು ಖರೀದಿಸಿರುವ ಭೂಮಿಯನ್ನು ಅಳತೆ ಮಾಡಬೇಕು. ಆನಂತರ ರಮೇಶ್‌ ಕುಮಾರ್‌ ಅವರು ಖರೀದಿಸಿರುವ ಭೂಮಿಯು ಅರಣ್ಯ ಭೂಮಿಯ ವ್ಯಾಪ್ತಿಗೆ ಬರುತ್ತದೋ ಅಥವಾ ಕಂದಾಯ ಭೂಮಿ ವ್ಯಾಪ್ತಿಗೆ ಬರುತ್ತದೋ ಎಂಬುದನ್ನು ನಿರ್ಧರಿಸಬೇಕು ಎಂದು ಆದೇಶಿಸಿ, ಅರಣ್ಯ ಸಂರಕ್ಷಣಾಧಿಕಾರಿಯ ನೋಟಿಸ್‌ ಅನ್ನು ವಜಾಗೊಳಿಸಿತ್ತು.

Read More
Next Story