Cabinet meeting: Entry restriction to Nandi hill station, district administration orders
x

ಚಿಕ್ಕಬಳ್ಳಾಪುರದ ನಂದಿ ಗಿರಿಧಾಮ

Nandi Hills| ನಂದಿ ಬೆಟ್ಟದ ಮೇಲೆ ಸಂಪುಟ ಸಭೆ; ಬಯಲು ಸೀಮೆ ಜಿಲ್ಲೆಗಳ ಅಭಿವೃದ್ಧಿ ಸಾಧ್ಯವೇ ?

ನಂದಿಬೆಟ್ಟದ ಮೇಲೆ ಜೂ.19 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುವುದರಿಂದ ಬಯಲು ಸೀಮೆ ಜಿಲ್ಲೆಗಳಲ್ಲಿ ಅಭಿವೃದ್ಧಿಯ ಕನಸು ಚಿಗುರೊಡೆದಿದೆ. ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆಗೆ ಮೀಸಲಿರಿಸಿ ನಡೆಸಲಿರುವ ಸಂಪುಟ ಸಭೆ ಕುತೂಹಲ ಮೂಡಿಸಿದೆ.


ಬಯಲು ಸೀಮೆ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಈ ಸಂಪುಟ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಆದರೆ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದಶಕಗಳಿಂದ ಅನೇಕ ಜ್ವಲಂತ ಸಮಸ್ಯೆಗಳು ನೆಲೆಯೂರಿದ್ದು, ನೀರಾವರಿ, ಕೈಗಾರಿಕೆಗಳ ಅಭಿವೃದ್ಧಿ ಅಷ್ಟೇನೂ ಆಶಾದಾಯಕವಾಗಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 18 ವರ್ಷಗಳು ಉರುಳಿದರೂ ಯಾವುದೇ ಬದಲಾವಣೆ ಕಂಡಿಲ್ಲ. ಅವಳಿ ಜಿಲ್ಲೆಗಳಲ್ಲಿ ಘಟಾನುಘಟಿ ರಾಜಕಾರಣಿಗಳಿದ್ದರೂ ಅಭಿವೃದ್ಧಿ ಮಾತ್ರ ಕಣ್ಣಿಗೆ ಗೋಚರಿಸುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳನ್ನೇ ಹೊದ್ದು ಮಲಗಿರುವ ಬಯಲು ಸೀಮೆ ಜಿಲ್ಲೆಯ ಜನರಲ್ಲಿ ವಿಶೇಷ ಸಂಪುಟ ಸಭೆ ಬೆಟ್ಟದಷ್ಟು ನಿರೀಕ್ಷೆಗಳನ್ನು ತುಂಬಿದೆ. ಸಂಪುಟ ಸಭೆಯಲ್ಲಿ ಈ ಜಿಲ್ಲೆಗಳಿಗೆ ಏನೆಲ್ಲಾ ಕಾರ್ಯಕ್ರಮ, ಯೋಜನೆ ಘೋಷಣೆಯಾಗಲಿವೆ ಎಂಬ ಕುತೂಹಲ ಜನರಲ್ಲಿದೆ.

ಬಯಲು ಸೀಮೆ ಜಿಲ್ಲೆಗಳ ಸಮಸ್ಯೆಗಳೇನು?

ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿದ್ದು, ನೀರಾವರಿ ಕನಸು ಅನಿಶ್ಚಿತವಾಗಿದೆ. ಕೆ.ಸಿ.ವ್ಯಾಲಿ ಯೋಜನೆ ಮೂಲಕ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ಪೂರೈಸುತ್ತಿದ್ದರೂ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.

ಎರಡು ಹಂತದ ಶುದ್ದೀಕರಣವಾದರೂ ಕಲುಷಿತ ನೀರು ಕೆರೆಗಳಿಗೆ ಸೇರುತ್ತಿದ್ದು, ಅಂತರ್ಜಲವನ್ನು ಕಲುಷಿತಗೊಳಿಸುತ್ತಿದೆ. ಮೂರನೇ ಹಂತದ ಶುದ್ದೀಕರಣ ನಡೆಸುವಂತೆ ರೈತರು ಒತ್ತಾಯಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಈ ವಿಷಯ ಕುರಿತಂತೆಯೂ ಸಂಪುಟದಲ್ಲಿ ಚರ್ಚಿಸಬೇಕು ಎಂಬ ಆಗ್ರಹ ರೈತ ಸಮುದಾಯದಿಂದ ಕೇಳಿ ಬರುತ್ತಿದೆ.

2007ರಲ್ಲಿ ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆಯಾದಾಗಿನಿಂದಲೂ ಈ ಹಿಂದಿನ ಸ್ಥಿತಿಯಲ್ಲಿಯೇ ಇದೆ. ಯಾವುದೇ ರೀತಿಯ ಚಹರೆ ಬದಲಾಗಿಲ್ಲ. ಹೆದ್ದಾರಿ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಬೆಂಗಳೂರಿನಿಂದ ಹೈದರಾಬಾದ್‌ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಎರಡು ಮೂರು ವರ್ಷಗಳಿಂದ ಪೂರ್ಣಗೊಂಡಿಲ್ಲ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಿ, ತ್ವರಿತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಬಯಲುಸೀಮೆ ಜಿಲ್ಲೆಗಳ ಅಭಿವೃದ್ಧಿ ಕುರಿತು ಚರ್ಚೆ

ರಾಜ್ಯ ಸರ್ಕಾರ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಉದ್ದೇಶಿಸಿರುವುದರಿಂದ ಬಯಲುಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆದು, ಹಲವು ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕಾವೇರಿ ನೀರು ಪೂರೈಕೆ, ಮೆಟ್ರೋ ವಿಸ್ತರಣೆ, ಎಸ್‌ಟಿಪಿ ಮತ್ತು ಯುಜಿಡಿ ಕಾಮಗಾರಿಗೆ ಅನುದಾನ, ಜಿಲ್ಲಾಸ್ಪತ್ರೆಗೆ ಅನುದಾನ, ರಸ್ತೆಗಳ ಅಭಿವೃದ್ಧಿ, ಕೆರೆಗಳ ಪುನಶ್ಚೇತನ, ಜಿಲ್ಲಾ ಕೌಶಲ ತರಬೇತಿ ಕೇಂದ್ರ ಸ್ಥಾಪನೆ, ರಕ್ತನಿಧಿ ಕೇಂದ್ರ, ರೇಷ್ಮೆ ಸೀರೆ ಮಾರ್ಕೆಟಿಂಗ್ ಕಾಂಪ್ಲೆಕ್ಸ್ ಸ್ಥಾಪನೆ ಕುರಿತ ಚರ್ಚೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ, ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಕೆ, ಸರ್ಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಎತ್ತಿನಹೊಳೆ ಯೋಜನೆ ಸೇರಿದಂತೆ ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ಇನ್ನೂ ನನಸಾಗದ ದಶಕಗಳ ಕನಸು

ನಂದಿಬೆಟ್ಟಕ್ಕೆ ರೋಪ್‌ ವೇ ನಿರ್ಮಿಸುವ ದಶಕಗಳ ಕನಸು ಈವರೆಗೂ ಈಡೇರಿಲ್ಲ. ದಿವಂಗತ ನಟ ಶಂಕರ್‌ನಾಗ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಯೋಜನೆಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು. ಆ ಬಳಿಕ 30 ವರ್ಷಗಳಿಂದ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕುರಿತಂತೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

2.93 ಕಿ.ಮೀ ಉದ್ದದ ರೋಪ್‌ ವೇ ನಿರ್ಮಾಣಕ್ಕೆ ಬೆಟ್ಟದ ಕೆಳಭಾಗದಲ್ಲಿ ಟರ್ಮಿನಲ್‌ ನಿರ್ಮಿಸಲು ಸುಮಾರು ಏಳು ಎಕರೆ ಭೂಮಿ ಅಗತ್ಯವಿದೆ. ಅದರಲ್ಲಿ 86 ಗುಂಟೆ ಹಾಗೂ ನಂದಿ ಬೆಟ್ಟದ ಮೇಲಿನ ಎರಡು ಎಕರೆ ಭೂಮಿ ಅರಣ್ಯ ಇಲಾಖೆಗೆ ಸೇರಿದೆ. ಸದ್ಯ ಇಲಾಖೆಯಿಂದ ಕ್ಲಿಯರೆನ್ಸ್‌ ದೊರೆತಿದ್ದು, 93.40 ಕೋಟಿ ರೂ. ವೆಚ್ಚದಲ್ಲಿ ರೋಪ್‌ ವೇ ನಿರ್ಮಿಸಲು ಸರ್ಕಾರ ಮುಂದಾಗಿದೆ.

ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ

ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ಜೂ.16 ರಿಂದ 20 ರವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜೂ.16 ಸಂಜೆ 6ರಿಂದ 20ರ ಬೆಳಿಗ್ಗೆ 5ಗಂಟೆಯವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಗಿರಿಧಾಮದ ವಸತಿ ನಿಲಯದ ಕೊಠಡಿಗಳನ್ನು ಬುಕ್ಕಿಂಗ್‌ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್.‌ ರವೀಂದ್ರ ತಿಳಿಸಿದ್ದಾರೆ.

ನಂದಿ ಗಿರಿಧಾಮದ ಪ್ರವೇಶ ಹಾಗೂ ನಿರ್ಗಮನಕ್ಕೆ ಒಂದೇ ದಾರಿ ಇರುವುದರಿಂದ ವಾಹನ ದಟ್ಟಣೆ ಅಧಿಕವಾಗುವ ಸಾಧ್ಯತೆ ಇದೆ. ಅಲ್ಲದೇ ಕಡಿದಾದ ತಿರುವುಗಳಿರುವ ಕಾರಣ ವಾಹನಗಳು ಹಾಗೂ ಪ್ರವಾಸಿಗರ ನಿಯಂತ್ರಣ ಕಷ್ಟವಾಗಲಿದೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಭಾಗಗಳಲ್ಲೂ ಸಚಿವ ಸಂಪುಟ ಸಭೆ

ಸಚಿವ ಸಂಪುಟ ಸಭೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸದೇ ರಾಜ್ಯದ ಎಲ್ಲಾ ಹಿಂದುಳಿದ ಜಿಲ್ಲೆಗಳಲ್ಲೂ ನಡೆಸಲು ಸರ್ಕಾರ ತೀರ್ಮಾನಿಸಿದೆ.

ರಾಜ್ಯ ಸರ್ಕಾರ 2024 ಸೆ. 17ರಂದು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಈ ಭಾಗದ 46 ಯೋಜನೆಗಳಿಗೆ ಒಟ್ಟು 11,770 ಕೋಟಿ ರೂ. ಅನುಮೋದನೆ ನೀಡಿತ್ತು. 2025 ಏ. 24ರಂದು ಮೈಸೂರು ವಿಭಾಗದ ಚಾಮರಾನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮೇಲೆ ಸಚಿವ ಸಂಪುಟ ಸಭೆ ನಡೆಸಿ ಒಟ್ಟು 3,647 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಇದೀಗ ಬಯಲು ಸೀಮೆಯ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಆ ಭಾಗದ ಜಿಲ್ಲೆಗಳ ಅಭಿವೃದ್ಧಿ ಶ್ರಮಿಸಲು ಸರ್ಕಾರ ನಿರ್ಧರಿಸಿದೆ.

ನಂದಿಬೆಟ್ಟಕ್ಕೆ ಐತಿಹಾಸಿಕ ಹಿನ್ನೆಲೆ

ನಂದಿ ಗಿರಿಧಾಮಕ್ಕೆ ಮಹಾತ್ಮ ಗಾಂಧೀಜಿ ಅವರು 1927 ರಲ್ಲಿ ಭೇಟಿ ನೀಡಿದ್ದರು. ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋದ ಗಾಂಧೀಜಿ ಅವರು 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಆ ದಿನಗಳಲ್ಲಿ ನಂದಿಬೆಟ್ಟಕ್ಕೆ ರಸ್ತೆ ಸಂಪರ್ಕ ಇರಲಿಲ್ಲ. 1,775 ಮೆಟ್ಟಿಲುಗಳನ್ನು ಹತ್ತಿಯೇ ಹೋಗಬೇಕಿತ್ತು. 1936 ಮೇ 10 ರಂದು ಮದ್ರಾಸಿಗೆ ಬಂದಿದ್ದ ಗಾಂಧೀಜಿಗೆ ರಕ್ತದೊತ್ತಡ ಹೆಚ್ಚಿದಾಗ ವೈದ್ಯರು ವಿಶ್ರಾಂತಿಗೆ ಸೂಚನೆ ನೀಡಿದ್ದರು. ಆಗ ಗಾಂಧೀಜಿ ಅವರು ನಂದಿ ಗಿರಿಧಾಮದಲ್ಲಿ ಉಳಿದುಕೊಂಡಿದ್ದರು.

ಐತಿಹಾಸಿಕ ಸಾರ್ಕ್‌ ಶೃಂಗಸಭೆ ಆಯೋಜನೆ

1986 ನವೆಂಬರ್‌ 15 ಹಾಗೂ16ರಂದು ನಂದಿ ಬೆಟ್ಟದ ಶ್ವೇತ ವರ್ಣದ ಕಟ್ಟಡದಲ್ಲಿ ಐತಿಹಾಸಿಕ 2ನೇ ಸಾರ್ಕ್‌ ಶೃಂಗಸಭೆ ನಡೆಸುವ ಮೂಲಕ ದಕ್ಷಿಣ ಏಷ್ಯಾದ ಏಳು ರಾಷ್ಟ್ರಗಳ ಮುಖ್ಯಸ್ಥರ ಸಮಾಗಮಕ್ಕೆ ನಂದಿ ಗಿರಿಧಾಮ ಸಾಕ್ಷಿಯಾಗಿತ್ತು. ಅಲ್ಲದೇ ವಿಶ್ವ ಸಮುದಾಯದ ಗಮನ ಸೆಳೆದಿತ್ತು.

ಭಾರತದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಸೇರಿ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಆಫ್ಘಾನಿಸ್ತಾನ, ಭೂತಾನ್‌ ದೇಶದ ಪ್ರಧಾನಿಗಳು ಹಾಗೂ ಅಧ್ಯಕ್ಷರು ನಂದಿ ಗಿರಿಧಾಮಕ್ಕೆ ಭೇಟಿ ಕೊಟ್ಟು ನೆಹರು ನಿಲಯದಲ್ಲಿ ಸಾರ್ಕ್‌ ರಾಷ್ಟ್ರಗಳ ನಡುವೆ ಪ್ರಾದೇಶಿಕ ಸಹಕಾರದ ಕುರಿತು ಹಲವು ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿದ್ದರು.

ನಂದಿ ಬೆಟ್ಟದ ತಪ್ಪಲಲ್ಲಿ ಜಿ-20 ಶೃಂಗಸಭೆ

2023 ರಲ್ಲಿ ಅಧ್ಯಕ್ಷತೆ ವಹಿಸಿದ್ದ ಭಾರತ ಜಿ-20 ಶೃಂಗಸಭೆಯ ಕೆಲ ಸಭೆಗಳನ್ನು ನಂದಿ ಗಿರಿಧಾಮದ ತಪ್ಪಲಿನಲ್ಲಿ ನಡೆಸಿತ್ತು. ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆಯೋಜಿಸಿದ್ದ ಮೊದಲ ಜಿ -20 ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಡೆಪ್ಯೂಟೀಸ್ (ಎಫ್‌ಸಿಬಿಡಿ) ಸಭೆಯು ಡಿ.13 ರಿಂದ ಮೂರು ದಿನಗಳ ಕಾಲ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿತ್ತು.

Read More
Next Story