ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ
x
ನಟ ಸಲ್ಮಾನ್‌ ಖಾನ್‌ ನಿವಾಸದ ಮುಂದೆ ಗುಂಡಿನ ದಾಳಿ ನಡೆದಿದೆ.

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ

ಮುಂಜಾನೆ 5ಗಂಟೆಗೆ ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಲಾಗಿದೆ.


Click the Play button to hear this message in audio format

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ ನಡೆದಿದೆ. ಭಾನುವಾರ ( ಏಪ್ರಿಲ್‌ 13) ಮುಂಜಾನೆ 5ಗಂಟೆಗೆ ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಲಾಗಿದೆ.

ಇಬ್ಬರು ಶೂಟರ್‌ಗಳು ಬೈಕ್‌ನಲ್ಲಿ ಬಂದು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸದ್ಯಕ್ಕೆ ದಾಳಿಯಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಲ್ಮಾನ್ ಖಾನ್ ನಿವಾಸಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಈ ಗುಂಡಿನ ದಾಳಿಯ ನಂತರ ಮುಂಬೈ ಕ್ರೈಂ ಬ್ರಾಂಚ್ ಜೊತೆಗೆ ಬಾಂದ್ರಾ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದೆ. ಅಲ್ಲದೆ ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಅನೇಕ ಬಾರಿ ಬೆದರಿಕೆ ಹಾಕಿದ್ದರು. ಇತ್ತೀಚೆಗೆ, ಲಾರೆನ್ಸ್ ಬಿಷ್ಣೋಯ್ ಕೆನಡಾದಲ್ಲಿರುವ ನಟ-ಗಾಯಕ ಗಿಪ್ಪಿ ಗ್ರೆವಾಲ್ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದ.

2023 ರಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಕಚೇರಿಗೆ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಬೆದರಿಕೆಯ ನಂತರ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಿದ್ದರು. ಸದ್ಯ ಸಲ್ಮಾನ್ ಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ.

ಈಗ ನಾನು ಗೂಂಡಾ ಅಲ್ಲ, ಆದರೆ ಸಲ್ಮಾನ್ ಖಾನ್ ಅವರನ್ನು ಕೊಂದು ಗೂಂಡಾ ಆಗುತ್ತೇನೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಭದ್ರತೆ ತೆಗೆದರೆ ಸಲ್ಮಾನ್ ಖಾನ್ ಅವರನ್ನು ಕೊಲ್ಲುತ್ತೇನೆ ಎಂದು ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್​ ಹೇಳಿದ್ದರು.

ಲಾರೆನ್ಸ್​ ಬಿಷ್ಣೋಯಿ​​ದು ಅತ್ಯಂತ ದೊಡ್ಡ ಗ್ಯಾಂಗ್. ಇವನ ಶೂಟರ್​​ಗಳು ದೇಶಾದ್ಯಂತ 700ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಸಲ್ಮಾನ್ ಖಾನ್​ ಹತ್ಯೆಗೆ ಹಪಹಪಿಸುತ್ತಿದ್ದಾನೆ. ಸಲ್ಮಾನ್‌ ಖಾನ್‌ ಅವರು 1998ರಲ್ಲಿ ಹಮ್‌ ಸಾಥ್‌ ಸಾಥ್‌ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದ ಜೋಧ್‌ಪುರಕ್ಕೆ ಹೋಗಿದ್ದರು. ಇದೇ ವೇಳೆ ಸಫಾರಿಗೆ ಹೋದ ಅವರು ಒಂದು ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಈ ಕೃಷ್ಣಮೃಗವನ್ನು ಬಿಷ್ಣೋಯಿ ಸಮುದಾಯದವರು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಭಾವಿಸುತ್ತಾರೆ. ಅಂಥ ಕೃಷ್ಣಮೃಗವನ್ನು ಕೊಂದ ಸಲ್ಮಾನ್​ ಖಾನ್​ರನ್ನು ಹತ್ಯೆ ಮಾಡಿಯೇ ತೀರುತ್ತೇನೆ ಎಂಬುದು ಲಾರೆನ್ಸ್​ ಬಿಷ್ಣೋಯಿ ಶಪಥ. ಈಗಾಗಲೇ ಆತ ಹಲವು ಸಲ ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ಜೈಲಲ್ಲೇ ಕುಳಿತು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲೂ ಸಲ್ಮಾನ್ ಖಾನ್ ಹತ್ಯೆಯೇ ತನ್ನ ಗುರಿ ಎಂದು ಹೇಳಿದ್ದ.

Read More
Next Story