ಮಹಾಲಕ್ಷ್ಮಿ ಕೊಲೆ ಪ್ರಕರಣ | ಒಡಿಶಾದಲ್ಲಿ ಹಂತಕನ ಆತ್ಮಹತ್ಯೆ: ರಹಸ್ಯ ಬಿಚ್ಚಿಟ್ಟ ಡೆತ್‌ನೋಟ್‌
x
ಮಹಾಲಕ್ಷ್ಮೀಯನ್ನು ಕೊಲರ ಮಾಡಿರುವ ಆರೋಪಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ

ಮಹಾಲಕ್ಷ್ಮಿ ಕೊಲೆ ಪ್ರಕರಣ | ಒಡಿಶಾದಲ್ಲಿ ಹಂತಕನ ಆತ್ಮಹತ್ಯೆ: ರಹಸ್ಯ ಬಿಚ್ಚಿಟ್ಟ ಡೆತ್‌ನೋಟ್‌

ರಾಜ್ಯವನ್ನೇ ಬಿಚ್ಚಿಬೀಳಿಸಿದ್ದ ಮಹಾಲಕ್ಮೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಒಡಿಶಾದ ಮುಕ್ತಿ ರಂಜನ್ ಎಂಬಾತನೇ ಕೊಲೆ ಮಾಡಿದ್ದಾನೆಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದ್ದು, ಆತ ಒಡಿಶಾದಲ್ಲಿ ನೇಣಿಗೆ ಶರಣಾಗಿದ್ದಾನೆ.


Click the Play button to hear this message in audio format

ರಾಜ್ಯವನ್ನೇ ಬಿಚ್ಚಿಬೀಳಿಸಿದ್ದ ಮಹಾಲಕ್ಮೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಒಡಿಶಾದ ಮುಕ್ತಿ ರಂಜನ್ ಎಂಬಾತನೇ ಕೊಲೆಗಾರ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದ್ದು, ಆತ ಒಡಿಶಾದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾಲಕ್ಷ್ಮಿ ಜೊತೆ ಗಲಾಟೆ ವೇಳೆ ಆಕೆ ಹೊಡೆದ ಕಾರಣಕ್ಕೆ ಸಿಟ್ಟಿನಿಂದ ಕೊಲೆ ಮಾಡಿದ್ದಾಗಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾನೆ ಎನ್ನಲಾಗಿದೆ.

ಬೆಂಗಳೂರಿನ ಮಲ್ಲೇಶ್ವರದ ಬಟ್ಟೆ ಅಂಗಡಿಯೊಂದರಲ್ಲಿ ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದರು. ಅಲ್ಲೇ ಕೆಲಸ ಮಾಡುತ್ತಿದ್ದ ಮುಕ್ತಿ ರಂಜನ್ ರಾಯ್ ಪರಿಚಯವಾಗಿತ್ತು. ಇಬ್ಬರೂ ಸಲುಗೆಯಿಂದ ವರ್ತಿಸುತ್ತಿದ್ದರು. ಈ ಮಧ್ಯೆ ಮಹಾಲಕ್ಷ್ಮಿ ಬೇರೊಬ್ಬ ಯುವಕನ ಜತೆಯೂ ಆತ್ಮೀಯವಾಗಿದ್ದರು. ಆ ಯುವಕ ಮಹಾಲಕ್ಷ್ಮಿ ಅವರನ್ನು ಕೆಲಸದ ಸ್ಥಳಕ್ಕೆ ಕರೆದೊಯ್ಯುವುದು, ಮನೆಗೆ ವಾಪಸ್ ತಂದು ಬಿಡುವುದು ಮಾಡುತ್ತಿದ್ದ. ಇದರಿಂದ ಸಿಟ್ಟಿಗೆದಿದ್ದ ಮುಕ್ತಿ ರಂಜನ್ ಕೊಲೆಗೆ ಸಂಚು ರೂಪಿಸಿ ಮನೆಗೆ ನುಗ್ಗಿ ಮಹಾಲಕ್ಷ್ಮಿ ಅವರನ್ನು ಬರ್ಬರವಾಗಿ ಕೊಲೆ ಮಾಡಿ ದೇಹವನ್ನು 40 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಿದ್ದ. ಅಮೇಲೆ ರೈಲಿನ ಮೂಲಕ ಒಡಿಶಾದ ಭದ್ರಕ್ ಜಿಲ್ಲೆಯ ಭುನಿಪುರಕ್ಕೆ ತೆರಳಿದ್ದ' ಎಂದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ.

ಒಡಿಶಾದ ಪಂಡಿ ಗ್ರಾಮದ ಬೂತಕಪುರದ ನಿವಾಸಿಯಾಗಿರುವ ಮುಕ್ತಿ ರಂಜನ್ ಮನೆಗೆ ಮರಳಿದ್ದರೂ ಮೌನಿಯಾಗಿದ್ದ. ಕರ್ನಾಟಕದ ಪೊಲೀಸರು ಹುಡುಕಾಟ ನಡೆಸುತ್ತಿರುವ ಮಾಹಿತಿ ತಿಳಿದು, ಬುಧವಾರ ರಾತ್ರಿ ಭದ್ರಕ್‌ಗೆ ತೆರಳುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದ. ಮೊಬೈಲ್ ಇಲ್ಲದ ಕಾರಣ ಆತ ತನ್ನ ಲ್ಯಾಪ್‌ಟಾಪ್ ಒಯ್ದಿದ್ದ. ಸ್ಕೂಟಿಯಲ್ಲಿ ಲ್ಯಾಪ್‌ಟಾಪ್ ಇಟ್ಟು ಕುಳೆಪಾ ಸ್ಮಶಾನದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಧುಸುರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿಯನ್ನು ಧುಸುರಿ ಪೊಲೀಸರು, ಬೆಂಗಳೂರು ಪೊಲೀಸರಿಗೆ ನೀಡಿದ್ದರು. ಮುಕ್ತಿ ರಂಜನ್ ಬಳಸುತ್ತಿದ್ದ ಲ್ಯಾಪ್‌ಟಾಪ್ ಜಪ್ತಿ ಮಾಡಿಕೊಳ್ಳಲಾಗಿದೆ. ಅದರಲ್ಲಿ ಕೆಲವು ಫೋಟೊ ಹಾಗೂ ವಿಡಿಯೊಗಳಿವೆ ಎಂದು ಮೂಲಗಳು ತಿಳಿಸಿವೆ.

ಹೆಬ್ಬಗೋಡಿಯಲ್ಲಿ ಸಹೋದರನ ಜತೆ ವಾಸವಾಗಿದ್ದ ಮುಕ್ತಿ ರಂಜನ್ ನಿತ್ಯ ಅಲ್ಲಿಂದಲೇ ಮಲ್ಲೇಶ್ವರದ ಬಟ್ಟೆ ಷೋರೂಂಗೆ ಕೆಲಸಕ್ಕೆ ಬರುತ್ತಿದ್ದ. ಕೊಲೆ ಮಾಡಿದ ಬಳಿಕ ಸಹೋದರನಿಗೆ ಕರೆ ಮಾಡಿ, ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದ. ಬಳಿಕ ಮನೆಗೂ ತೆರಳಿ, ಸಹೋದರನ ಜತೆ ಮಾತನಾಡಿ, ಒಡಿಶಾಗೆ ಪರಾರಿಯಾಗಿದ್ದ. ನಂತರ, ಮೊಬೈಲ್ ಫೋನ್ ಅನ್ನು ಸ್ವಿಚ್ ಮಾಡಿಕೊಂಡಿದ್ದ. ಫೋನ್ ಬಳಸದೆ ಒಡಿಶಾದಲ್ಲಿ ಓಡಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಮಹಾಲಕ್ಷ್ಮಿ ಕೊಲೆಗೆ ಭೀಕರ ಟ್ವಿಸ್ಟ್ ಬಿಚ್ಚಿಟ್ಟ ಡೆತ್ ನೋಟ್

ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಮುಕ್ತಿ ರಂಜನ್ ರಾಯ್‌ ಆತ್ಮಹತ್ಯೆಗೆ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿದ್ದ ಸಂಗತಿಗಳನ್ನು ಬೆಂಗಳೂರು ಪೊಲೀಸರು ಬಹಿರಂಗಪಡಿಸಿದ್ದಾರೆ.

ಸೆಪ್ಟಂಬರ್ 3ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಮಹಾಲಕ್ಷ್ಮೀ ಹತ್ಯೆ ಕುರಿತು ರಂಜನ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ. ಸೆಪ್ಟಂಬರ್‌ 3 ರಂದು ಆಕೆಯ ಮನೆಗೆ ಹೋದಾಗ ಕೃತ್ಯ ಎಸಗಿದ್ದಾಗಿ ಬರೆದಿದ್ದಾನೆ. ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು, ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಡೆತ್ ನೋಟ್​ನಲ್ಲಿ ಕೊಲೆ ಮಾಡಲು ಕಾರಣವೇನೆಂಬುದನ್ನು ರಂಜನ್ ಬಹಿರಂಗಪಡಿಸಿದ್ದಾನೆ.

ಮಹಾಲಕ್ಷ್ಮಿ ಜೊತೆಗಿನ ತನ್ನ ಆತ್ಮೀಯ ಸಂಬಂಧದ ಬಗ್ಗೆ ವಿವರಿಸಿ, ಅಪರಾಧಕ್ಕೆ ವಿಷಾದ ವ್ಯಕ್ತಪಡಿಸಿದ್ದಾನೆ. ಕೊಲೆಗೆ ಬಳಸಿದ ಆಯುಧ, ಹರಿತವಾದ ಆಕ್ಸೆಲ್‌ ಬ್ಲೇಡ್ ಬಳಸಿದ್ದಾಗಿ ಡೆತ್ ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾನೆ. ರಂಜನ್ ಮೊದಲು ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಆಕೆಯನ್ನ ಆಕ್ಸಲ್ ಬ್ಲೇಡ್ ನಿಂದ ಕತ್ತರಿಸಿದ್ದ. ಬಾತ್ ರೂಂನಲ್ಲಿ ಆಕೆ ದೇಹವನ್ನ ಪೀಸ್ ಪೀಸ್ ಮಾಡಿದ್ದ. ನಂತರ ಫ್ರಿಡ್ಜ್ ಗೆ ಮೃತದೇಹ ತುಂಬಿದ್ದ. ಸಾಕ್ಷಿ ನಾಶಪಡಿಸಲು ಬಾತ್ ರೂಂನಲ್ಲಿ ಆ್ಯಸಿಡ್ ಹಾಕಿ ಕ್ಲೀನ್ ಮಾಡಿದ್ದ ಎಂದು ತಿಳಿದುಬಂದಿದೆ.

ಮುಕ್ತಿ ರಂಜನ್ ಕೆಲಸ ಮಾಡುತ್ತಿದ್ದ ಬಟ್ಟೆ ಅಂಗಡಿಯಲ್ಲಿ ಸ್ಟೋರ್ ಮ್ಯಾನೇಜರ್ ಆಗಿದ್ದ ಮಹಾಲಕ್ಷ್ಮಿ, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆದಿದೆ. ಇನ್ನು ಕೆಲಸದ ಸ್ಥಳದಲ್ಲಿ ಯಾವುದೇ ಮಹಿಳೆಯರೊಂದಿಗೆ ಮಾತನಾಡಬೇಡ ಎಂದು ಮುಕ್ತಿ ರಂಜನ್‌ಗೆ ಮಹಾಲಕ್ಷ್ಮಿ ಎಚ್ಚರಿಕೆ ನೀಡುತ್ತಿದ್ದಳು. ಅವಳ ಕೆಲಸದ ಸ್ಥಳದಲ್ಲಿ ಯಾರಾದರೂ ಅವನ ಬಗ್ಗೆ ಮಾತನಾಡಿದರೆ ಕೋಪಗೊಳ್ಳುತ್ತಿದ್ದಳು. ಅವಳ ನಡವಳಿಕೆ ಮತ್ತು ಬಯಕೆಗಳಿಂದ ಮುಕ್ತಿ ರಂಜನ್ ಬೇಸತ್ತಿದ್ದ ಎಂದು ತಿಳಿದುಬಂದಿದೆ.

2ನೇ ತಾರೀಖು ರಜೆ ಪಡೆದಿದ್ದ ಮಹಾಲಕ್ಷ್ಮಿ

ಸೆಪ್ಟಂಬರ್‌ 1ರಂದು ಮಹಾಲಕ್ಷ್ಮಿ ಹಾಗೂ ಮುಕ್ತಿ ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದರು. ಸೆಪ್ಟೆಂಬರ್ 2 ನೇ ತಾರೀಖು ವಾರದ ರಜೆ ಪಡೆದಿದ್ದ ಮಹಾಲಕ್ಷ್ಮೀ, ನೆಲಮಂಗಲದ ತಾಯಿ ಮನೆಗೆ ಬರುವುದಾಗಿ ಹೇಳಿದ್ದಳು. ಕುಟುಂಬಸ್ಥರಿಗೆ ಕರೆ ಮಾಡಿ ನೋಡಲು ಬರೋದಾಗಿ ಹೇಳಿದ್ದಳು. ಆದ್ರೆ 2ನೇ ತಾರೀಖು ಮತ್ತೆ ಮಹಾಲಕ್ಷ್ಮಿ ಕುಟುಂಬಸ್ಥರ ಸಂಪರ್ಕಕ್ಕೆ ಬಂದಿರಲಿಲ್ಲ. ಅದಾದ ಬಳಿಕ ಕುಟುಂಬಸ್ಥರಿಗೆ ತುಂಡು ತುಂಡಾದ ಶವವಾಗಿ ಕಂಡಿದ್ದಳು.

ಪ್ರಸ್ತುತ ಒಡಿಶಾದಲ್ಲಿರುವ ಬೆಂಗಳೂರು ಪೊಲೀಸ್ ತಂಡವು ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಕ್ತಿ ರಂಜನ್‌ ವಸ್ತುಗಳು, ಅವರ ಬ್ಯಾಗ್, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಸೇರಿ ಇನ್ನಿತರೆ ವಸ್ತುಗಳು ಆತ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪತ್ತೆಯಾಗಿವೆ.

Read More
Next Story