ಸುಳ್ಳು ಹೇಳುವ ಮೋದಿಯಿಂದ ಪ್ರಧಾನಿ ಹುದ್ದೆಗೆ ಮರ್ಯಾದೆ ಬರಲ್ಲ: ಸಿಎಂ ಸಿದ್ದರಾಮಯ್ಯ
x

ಸುಳ್ಳು ಹೇಳುವ ಮೋದಿಯಿಂದ ಪ್ರಧಾನಿ ಹುದ್ದೆಗೆ ಮರ್ಯಾದೆ ಬರಲ್ಲ: ಸಿಎಂ ಸಿದ್ದರಾಮಯ್ಯ

ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ಕೊಡ್ತಾರೆ ಎನ್ನುವ ಭಯಾನಕ ಸುಳ್ಳು ಹೇಳಿದ ಮೋದಿಯವರಿಗೆ ನಾಚಿಕೆ ಅನ್ನೋದೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.


ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೆಲ್ಲಾ ಮೋದಿ ಭಯಾನಕ ಸುಳ್ಳು ಹೇಳಿ ಹೋಗುತ್ತಾರೆ. ಹೆಣ್ಣುಮಕ್ಕಳ ತಾಳಿ, ಕೈ ಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗುವ ಮೋದಿಯಿಂದ ಪ್ರಧಾನಿ ಹುದ್ದೆಗೆ ಮರ್ಯಾದೆ ಬರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕ ಜಾರಕಿಹೊಳಿ ಅವರ ಪ್ರಚಾರದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಇಷ್ಟೊಂದು ಸುಳ್ಳು ಹೇಳೋ ಮೋದಿಗೆ ನಾಚಿಕೆನೂ ಆಗಲ್ಲ. ಇವರಿಗೆ ಮಾನ ಮರ್ಯಾದೆನೂ ಇಲ್ಲ” ಎಂದು ಮೋದಿ ಅವರ ಸುಳ್ಳುಗಳನ್ನು ಪಟ್ಟಿ ಮಾಡಿದ್ದಾರೆ.

ಈಗ ಮೋದಿ ಹಿಂದುಳಿದ ಜಾತಿ ಸಮುದಾಯಗಳನ್ನು ಮುಸ್ಲೀಮರ ವಿರುದ್ಧ ಎತ್ತಿಕಟ್ಟಲು ಭಯಾನಕ ಸುಳ್ಳು ಸೃಷ್ಟಿಸಿದ್ದಾರೆ. ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ಕೊಡ್ತಾರೆ ಎನ್ನುವ ಭಯಾನಕ ಸುಳ್ಳು ಹೇಳಿದ ಮೋದಿಯವರಿಗೆ ನಾಚಿಕೆ ಅನ್ನೋದೇ ಇಲ್ಲ. ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ಹಾಕ್ತೀವಿ ಎಂದು ನಂಬಿಸಿ ಪ್ರತಿ ಭಾರತೀಯರ ಹಣೆಗೆ ಮೂರು ನಾಮ ತಿಕ್ಕಿದ್ರು. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದು ನಂಬಿಸಿ ಕೆಲಸ ಕೇಳಿದ್ರೆ ಪಕೋಡ ಮಾರಿ ಅಂತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಸ್ತೀವಿ ಅಂದ್ರಿ, ಇಳಿಸಿದ್ರಾ? ಬೆಲೆ ಏರಿಕೆ ತಡಿತೀವಿ ಅಂದ್ರಿ. ತಡೆದ್ರಾ ? ಪ್ರತೀ ಬಾರಿ ರಾಜ್ಯಕ್ಕೆ ಬರೋದು ಹೊಸ ಹೊಸ ಸುಳ್ಳು ಹೇಳಿ ಹೋಗೋದು. ಇನ್ನೂ ಎಷ್ಟು ವರ್ಷ ಹಿಂದುಳಿದ ಜಾತಿ-ಸಮುದಾಯಗಳನ್ನು ನಂಬಿಸಿ ವಂಚಿಸುತ್ತೀರಿ? ಸುಳ್ಳು ಹೇಳಿಕೊಂಡು ತಿರುಗುತ್ತೀರಿ ಎಂದು ಕೇಳಿದರು.

ಬಿಜೆಪಿ ಭಾರತೀಯರ ಭಾವನೆಗಳ ಜೊತೆ ಚೆಲ್ಲಾಟ ಆಡಿ ಲಾಭ ಮಾಡಿಕೊಳ್ತಾರೆ. ಆದರೆ ನಾವು ಕಾಂಗ್ರೆಸ್ಸಿವರು ಜನರ ಬದುಕಿನ‌ ಸಂಕಷ್ಟಗಳನ್ನು ಕಡಿಮೆ ಮಾಡಲು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಈಡೇರಿಸಿದ ನೈತಿಕತೆಯಿಂದ ನಾವು ನಿಮ್ಮ ಮುಂದೆ ಬಂದು ಮತ ಕೇಳುತ್ತಿದ್ದೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಪ್ರತೀ ವರ್ಷ ಮಹಿಳಾ ಯಜಮಾನಿಯ ಖಾತೆಗೆ ಒಂದು ಲಕ್ಷ ರೂಪಾಯಿ ಜಮೆ ಆಗುತ್ತದೆ. ಇಡೀ ದೇಶದ ರೈತರ ಸಾಲ ಮನ್ನಾ ಆಗುತ್ತದೆ. ನಿರುದ್ಯೋಗಿ ಯುವಕ ಯುವತಿಯರಿಗೆ ಲಕ್ಷ ರೂಪಾಯಿ ಸಿಗುತ್ತದೆ. ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿ ಆಗುತ್ತದೆ. ಇದಕ್ಕಾಗಿ ಕಾಯ್ದೆ ಮಾಡುತ್ತೇವೆ. ಇಂತಹ 25 ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸಹಿ ಹಾಕಿದ್ದಾರೆ. ಹೀಗಾಗಿ ಸುಳ್ಳುಗಳ ಮೂಲಕ ನಿಮಗೆ ಬಕ್ರಾ ಮಾಡುವ ಮೋದಿಗೆ ಮತ ಹಾಕ್ತೀರೋ, ನುಡಿದಂತೆ ನಡೆದ ನಮಗೆ ಮತ ಹಾಕ್ತೀರೋ ತೀರ್ಮಾನಿಸಿ ಎಂದು ಅವರು ಮತದಾರರಿಗೆ ಕರೆ ನೀಡಿದರು.

Read More
Next Story