ಪರಿಷೆ ತುಂಬಾ ಫಾಸ್ಟ್ ಫುಡ್, ಕಡಲೆಕಾಯಿ ಕೇಳೋರೇ ಇಲ್ಲ! 500 ವರ್ಷದ ಪರಂಪರೆಗೆ ಕುತ್ತು?
ಕಾರ್ತಿಕ ಮಾಸದ ಕೊನೆಯ ಸೋಮವಾರ, ಬಸವನಗುಡಿಯ ದೊಡ್ಡ ಬಸವಣ್ಣನ ಸನ್ನಿಧಿಯಲ್ಲಿ 500 ವರ್ಷಗಳ ಇತಿಹಾಸವಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಅದ್ದೂರಿ ಚಾಲನೆ ದೊರೆತಿದೆ. ಮೈಸೂರು ದಸರಾವನ್ನು ನೆನಪಿಸುವ ದೀಪಾಲಂಕಾರ, ಹೂವಿನ ಅಲಂಕಾರಗಳ ನಡುವೆ, ಸಚಿವ ರಾಮಲಿಂಗಾ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಬಸವನಿಗೆ ಕಡಲೆಕಾಯಿ ತುಲಾಭಾರ ನೆರವೇರಿಸಿ, ಐದು ಎತ್ತುಗಳಿಗೆ ಮೊದಲ ಫಸಲು ತಿನ್ನಿಸುವ ಮೂಲಕ ಪರಂಪರೆಗೆ ಚಾಲನೆ ನೀಡಿದರು. ಕರ್ನಾಟಕ ಮಾತ್ರವಲ್ಲದೆ, ಆಂಧ್ರ, ತಮಿಳುನಾಡಿನಿಂದಲೂ ಲಕ್ಷಾಂತರ ಮಂದಿ ಈ ಮಣ್ಣಿನ ಸೊಗಡನ್ನು ಸವಿಯಲು ಹರಿದು ಬಂದಿದ್ದಾರೆ. ಆದರೆ, ಈ ಸಂಭ್ರಮದ ನಡುವೆಯೂ, ಆಧುನಿಕ ಸ್ನ್ಯಾಕ್ಸ್ ಹಾವಳಿಯಿಂದಾಗಿ ಕಡಲೆಕಾಯಿ ವ್ಯಾಪಾರ ಕುಸಿಯುತ್ತಿರುವುದು ರೈತರಲ್ಲಿ ಮತ್ತು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ.


