ತಿರುಚ್ಚಿಯಲ್ಲಿ ʼಟಿವಿಕೆʼ ಚುನಾವಣಾ ಪ್ರಚಾರಕ್ಕೆ ಪೊಲೀಸರ ಅನುಮತಿ
x

ಮುಂದಿನ ವರ್ಷದ ವಿಧಾನಸಭೆಗೆ ಮುಂಚಿತವಾಗಿ ವಿಜಯ್ ಅವರ ಮೊದಲ ಪ್ರಮುಖ ರಾಜಕೀಯ ಮುನ್ನಡೆಯನ್ನು ಗುರುತಿಸುವ ತಿರುಚ್ಚಿ ಪ್ರಚಾರ

ತಿರುಚ್ಚಿಯಲ್ಲಿ ʼಟಿವಿಕೆʼ ಚುನಾವಣಾ ಪ್ರಚಾರಕ್ಕೆ ಪೊಲೀಸರ ಅನುಮತಿ

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ನಟ ವಿಜಯ್ ಚುನಾವಣಾ ಪ್ರಚಾರ ಆರಂಭಿಸಲಿರುವ ಈ ಕಾರ್ಯಕ್ರಮವನ್ನು ಕೇವಲ 25 ನಿಮಿಷಗಳಿಗಷ್ಟೇ ಸೀಮಿತಗೊಳಿಸಲಾಗಿದೆ.


Click the Play button to hear this message in audio format

ತಿರುಚಿರಾಪಳ್ಳಿಯ ಮರಕ್ಕಡೈನಲ್ಲಿ ಸೆ.13ರಂದು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಚುನಾವಣಾ ಪ್ರಚಾರಕ್ಕೆ ಪೊಲೀಸರು ಅನುಮತಿ ನೀಡಿದ್ದು, 23 ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ನಟ ವಿಜಯ್ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದು, ಕೇವಲ 25 ನಿಮಿಷಗಳ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ. ಸ್ಥಳಕ್ಕೆ ಹೋಗುವ ದಾರಿಯಲ್ಲಿ ಯಾವುದೇ ರೋಡ್ ಶೋ ಅಥವಾ ಸ್ವಾಗತ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ತಿರುಚಿರಾಪಳ್ಳಿಗೆ ಮಾತ್ರ ಪ್ರಚಾರ ಸೀಮಿತವಾಗಿರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ಬೆಳಿಗ್ಗೆ 10.35 ರಿಂದ 11 ಗಂಟೆಯವರೆಗೆ ಪ್ರಚಾರ ನಿಗದಿಪಡಿಸಲಾಗಿದ್ದು, ಈ ಪ್ರದೇಶದಲ್ಲಿ ಭಾರೀ ಪಾದಚಾರಿ ಮತ್ತು ವಾಣಿಜ್ಯ ಚಟುವಟಿಕೆ ಇರುವುದರಿಂದ ಭಾಗವಹಿಸುವವರು ಬೆಳಿಗ್ಗೆ 9.35 ರೊಳಗೆ ಸ್ಥಳಕ್ಕೆ ತಲುಪಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

23 ಷರತ್ತು ವಿಧಿಸಿದ ಪೊಲೀಸರು

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪ್ರಚಾರ ಕಾರ್ಯಕ್ರಮಕ್ಕೆ ಪೊಲೀಸರು 23 ಷರತ್ತುಗಳನ್ನು ವಿಧಿಸಿದ್ದು, ಟಿವಿಕೆ ನಾಯಕನ ವಾಹನ ಸೇರಿದಂತೆ ಪ್ರಚಾರ ವಾಹನಗಳ ಸಂಖ್ಯೆಯನ್ನು ಆರಕ್ಕೆ ಸೀಮಿತಗೊಳಿಸಲಾಗಿದೆ. ಯಾವುದೇ ವಾಹನ ಮೆರವಣಿಗೆಗೆ ಅನುಮತಿ ಇಲ್ಲ.

ಸಾರ್ವಜನಿಕ ಸಾರಿಗೆಗೆ ಅಡ್ಡಿಯಾಗದಂತೆ ವಾಹನಗಳ ನಿಲುಗಡೆಗೆ ಸಂಘಟಕರು ವ್ಯವಸ್ಥೆ ಮಾಡಬೇಕು. ಸ್ಥಳದಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆ, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಉಪಕರಣಗಳನ್ನು ಒದಗಿಸಲು ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

ನಿರ್ಬಂಧ ಸಮರ್ಥಿಸಿಕೊಂಡ ಸಚಿವ

ಆಡಳಿತ ಪಕ್ಷ ಡಿಎಂಕೆ ತಮ್ಮ ಪ್ರಚಾರಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ ಎಂಬ ವಿಜಯ್ ಅವರ ಆರೋಪವನ್ನು ರಾಜ್ಯ ಪೌರಾಡಳಿತ ಸಚಿವ ಕೆ.ಎನ್.ನೆಹರು ತಳ್ಳಿಹಾಕಿದ್ದಾರೆ. ಪ್ರಚಾರ ಸ್ಥಳವು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಕಾರಣ ಪೊಲೀಸರು ನಿರ್ಬಂಧಗಳೊಂದಿಗೆ ಅನುಮತಿ ನೀಡಬೇಕಾಯಿತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Read More
Next Story