
ಕಾಶಿ ವಿಶ್ವನಾಥ ದೇವಾಲಯದಲ್ಲಿ ನಕಲಿ ಅರ್ಚಕರ ಹಾವಳಿ: 21 ಮಂದಿ ಬಂಧನ
ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಅನಧಿಕೃತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸಲಾಗುವುದು ಎಂದು ಎಸಿಪಿ ಭರವಸೆ ನೀಡಿದ್ದಾರೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಅರ್ಚಕರ ಸೋಗಿನಲ್ಲಿ ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದ 21 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಶಾಶ್ವಮೇಧದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅತುಲ್ ಅಂಜನ್ ತ್ರಿಪಾಠಿ ಅವರು ಮಂಗಳವಾರ ಈ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ದೇವಾಲಯದಲ್ಲಿ ದರ್ಶನ ಮತ್ತು ಪೂಜಾ ಕಾರ್ಯಗಳನ್ನು ಆಯೋಜಿಸುವ ನೆಪದಲ್ಲಿ ಅನಧಿಕೃತ ವ್ಯಕ್ತಿಗಳು ಭಕ್ತರಿಂದ ಹಣ ಪಡೆದು ದುರ್ವರ್ತನೆ ತೋರುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದವು ಎಂದು ಎಸಿಪಿ ತ್ರಿಪಾಠಿ ತಿಳಿಸಿದ್ದಾರೆ. ಈ ದೂರುಗಳ ಆಧಾರದ ಮೇಲೆ, ದಶಾಶ್ವಮೇಧ ಮತ್ತು ಚೌಕ್ ಪೊಲೀಸ್ ಠಾಣೆಗಳ ಜಂಟಿ ತಂಡವನ್ನು ರಚಿಸಲಾಗಿತ್ತು.
ಪೊಲೀಸ್ ತಂಡ ನಡೆಸಿದ ತನಿಖೆಯ ನಂತರ, ದಶಾಶ್ವಮೇಧ ಪ್ರದೇಶದಿಂದ 15 ಮತ್ತು ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ 6 ನಕಲಿ ಅರ್ಚಕರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಕಾನೂನು ಕ್ರಮಗಳು ಪ್ರಗತಿಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಅನಧಿಕೃತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸಲಾಗುವುದು ಎಂದು ಎಸಿಪಿ ಭರವಸೆ ನೀಡಿದ್ದಾರೆ.