
ಉತ್ತರ ಪ್ರದೇಶದ ಎಲ್ಲಾ ಶಾಲೆಗಳಲ್ಲಿ 'ವಂದೇ ಮಾತರಂ' ಕಡ್ಡಾಯ: ಸಿಎಂ ಯೋಗಿ
ಗೋರಖ್ಪುರದಲ್ಲಿ ನಡೆದ 'ಏಕತಾ ಯಾತ್ರೆ' ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, " ವಂದೇ ಮಾತರಂಗೆ ಗೌರವ ಇರಬೇಕು. ಉತ್ತರ ಪ್ರದೇಶದ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ಇದರ ಗಾಯನವನ್ನು ನಾವು ಕಡ್ಡಾಯಗೊಳಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಗೀತೆಯಾದ 'ವಂದೇ ಮಾತರಂ' ಕುರಿತಾದ ರಾಜಕೀಯ ವಿವಾದದ ನಡುವೆಯೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ 'ವಂದೇ ಮಾತರಂ' ಗಾಯನವನ್ನು ಕಡ್ಡಾಯಗೊಳಿಸುವುದಾಗಿ ಸೋಮವಾರ (ನವೆಂಬರ್ 10) ಘೋಷಿಸಿದ್ದಾರೆ.
ತಮ್ಮ ನಿರ್ಧಾರವು ವಿದ್ಯಾರ್ಥಿಗಳಲ್ಲಿ ಭಾರತ ಮಾತೆಯ ಬಗ್ಗೆ ಗೌರವ ಮತ್ತು ಹೆಮ್ಮೆಯ ಭಾವನೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಗೋರಖ್ಪುರದಲ್ಲಿ ನಡೆದ 'ಏಕತಾ ಯಾತ್ರೆ' ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, "ರಾಷ್ಟ್ರೀಯ ಗೀತೆಯಾದ ವಂದೇ ಮಾತರಂಗೆ ಗೌರವ ಇರಬೇಕು. ಉತ್ತರ ಪ್ರದೇಶದ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ಇದರ ಗಾಯನವನ್ನು ನಾವು ಕಡ್ಡಾಯಗೊಳಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ವಿಭಜಕ ಶಕ್ತಿಗಳ ವಿರುದ್ಧ ಎಚ್ಚರಿಕೆ ನೀಡಿದ ಅವರು, "ಜಾತಿ, ಪ್ರದೇಶ ಅಥವಾ ಭಾಷೆಯ ಹೆಸರಿನಲ್ಲಿ ನಮ್ಮನ್ನು ವಿಭಜಿಸಲು ಯತ್ನಿಸುವ ಶಕ್ತಿಗಳನ್ನು ಗುರುತಿಸುವುದು ನಮ್ಮ ಕರ್ತವ್ಯ. ಹೊಸ 'ಜಿನ್ನಾ'ಗಳನ್ನು ಸೃಷ್ಟಿಸುವ ಪಿತೂರಿಯನ್ನು ನಡೆಸುವವರ ಬಗ್ಗೆ ನಾವು ಜಾಗರೂಕರಾಗಿರಬೇಕು. ಭಾರತದಲ್ಲಿ ಯಾವುದೇ ಹೊಸ ಜಿನ್ನಾ ಹುಟ್ಟಿಕೊಳ್ಳದಂತೆ ನಾವು ನೋಡಿಕೊಳ್ಳಬೇಕು. ವಿಭಜಕ ಉದ್ದೇಶಗಳನ್ನು ಅವು ಬೇರೂರುವ ಮೊದಲೇ ಹೂತುಹಾಕಬೇಕು" ಎಂದು ಅವರು ಕರೆ ನೀಡಿದರು.
ವಿವಾದದ ಹಿನ್ನೆಲೆ
'ವಂದೇ ಮಾತರಂ' ಗೀತೆಯ 150ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಯು ಈ ವಿವಾದಕ್ಕೆ ನಾಂದಿ ಹಾಡಿತ್ತು. "1937ರಲ್ಲಿ 'ವಂದೇ ಮಾತರಂ'ನ ಪ್ರಮುಖ ಭಾಗಗಳನ್ನು ಕೈಬಿಡಲಾಯಿತು ಮತ್ತು ಇದೇ ಕ್ರಮವು ದೇಶ ವಿಭಜನೆಯ ಬೀಜಗಳನ್ನು ಬಿತ್ತಲು ಕಾರಣವಾಯಿತು" ಎಂದು ಮೋದಿ ಆರೋಪಿಸಿದ್ದರು. ಈ ರೀತಿಯ "ವಿಭಜಕ ಮನಸ್ಥಿತಿ" ಇಂದಿಗೂ ದೇಶಕ್ಕೆ ಸವಾಲಾಗಿದೆ ಎಂದು ಅವರು ಹೇಳಿದ್ದರು.
ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ಖಂಡನೆ
ಪ್ರಧಾನಿ ಮೋದಿಯವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಅವರು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ. ಪ್ರಧಾನಿ ಮೋದಿಯವರು 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರಿಬ್ಬರಿಗೂ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್, "ಅಕ್ಟೋಬರ್ 26 ರಿಂದ ನವೆಂಬರ್ 1, 1937ರವರೆಗೆ ಕೋಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಆಜಾದ್, ಸರೋಜಿನಿ ನಾಯ್ಡು ಅವರಂತಹ ಮಹಾನ್ ನಾಯಕರು ಭಾಗವಹಿಸಿದ್ದರು" ಎಂದು ಉಲ್ಲೇಖಿಸಿದ್ದಾರೆ.
ರವೀಂದ್ರನಾಥ ಟ್ಯಾಗೋರ್ ಅವರ ಮಾರ್ಗದರ್ಶನದಲ್ಲಿಯೇ ಸಿಡಬ್ಲ್ಯೂಸಿ 'ವಂದೇ ಮಾತರಂ' ಕುರಿತು ಹೇಳಿಕೆ ನೀಡಿತ್ತು ಎಂದು ಹೇಳಿದ ಅವರು, "ಪ್ರಧಾನಿ ಮೋದಿಯವರು ಆ ಸಿಡಬ್ಲ್ಯೂಸಿ ಮತ್ತು ಗುರುದೇವ ರವೀಂದ್ರನಾಥ ಟ್ಯಾಗೋರ್ ಇಬ್ಬರಿಗೂ ಅಗೌರವ ತೋರಿದ್ದಾರೆ. ಮಹಾತ್ಮ ಗಾಂಧಿಯವರ ನೇತೃತ್ವದ ಸ್ವಾತಂತ್ರ್ಯ ಚಳವಳಿಯಲ್ಲಿ ಆರ್ಎಸ್ಎಸ್ಗೆ ಯಾವುದೇ ಪಾತ್ರವಿಲ್ಲದ ಕಾರಣ, ಅವರಿಂದ ಇಂತಹ ಹೇಳಿಕೆ ನಿರೀಕ್ಷಿತವೇ ಆಗಿತ್ತು," ಎಂದು ಟೀಕಿಸಿದ್ದಾರೆ.

