
'ಹಾರಲು ಅನುಮತಿ ಕೇಳಬೇಡಿ, ರೆಕ್ಕೆಗಳು ನಿಮಗೆ ಸೇರಿದ್ದು': ಖರ್ಗೆ ಟೀಕೆಗೆ ಶಶಿ ತರೂರ್ ಪ್ರತ್ಯುತ್ತರ
ಶಶಿ ತರೂರ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, "ನಮಗೆ ದೇಶವೇ ಮೊದಲು, ಆದರೆ ಕೆಲವರಿಗೆ 'ಮೋದಿ ಮೊದಲು ಮತ್ತು ದೇಶ ಎರಡನೆಯದು' ಎಂಬ ಧೋರಣೆ ಇದೆ. ಇಂತಹ ಸಮಸ್ಯೆಗಳ ಬಗ್ಗೆ ನಾವು ಏನು ಮಾಡಲು ಸಾಧ್ಯ?" ಎಂದು ಹೇಳಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮನ್ನು ಪರೋಕ್ಷವಾಗಿ ಟೀಕಿಸಿದ ಕೆಲವೇ ಗಂಟೆಗಳಲ್ಲಿ ತಿರುವನಂತಪುರಂ ಸಂಸದ ಶಶಿ ತರೂರ್ ತಮ್ಮ X (ಹಿಂದೆ ಟ್ವಿಟರ್) ಹ್ಯಾಂಡಲ್ನಲ್ಲಿ ಒಂದು ಅರ್ಥಗರ್ಭಿತ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇದು ತಮ್ಮ ಪಕ್ಷದ ಸಹೋದ್ಯೋಗಿಗಳು ಮತ್ತು ಖರ್ಗೆಯವರ ಹೇಳಿಕೆಗೆ ನೀಡಿದ ಉತ್ತರ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಬುಧವಾರ (ಜೂನ್ 25) ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, "ನಮಗೆ ದೇಶವೇ ಮೊದಲು, ಆದರೆ ಕೆಲವರಿಗೆ 'ಮೋದಿ ಮೊದಲು ಮತ್ತು ದೇಶ ಎರಡನೆಯದು' ಎಂಬ ಧೋರಣೆ ಇದೆ. ಇಂತಹ ಸಮಸ್ಯೆಗಳ ಬಗ್ಗೆ ನಾವು ಏನು ಮಾಡಲು ಸಾಧ್ಯ?" ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸಿದ್ದಕ್ಕಾಗಿ ತರೂರ್ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಖರ್ಗೆಯವರ ಈ ಹೇಳಿಕೆ ಮಹತ್ವ ಪಡೆದಿತ್ತು.
ತರೂರ್ ಪೋಸ್ಟ್ನಲ್ಲಿ ಅಡಗಿದ ಸಂದೇಶವೇನು?
ಖರ್ಗೆಯವರ ಹೇಳಿಕೆಯ ನಂತರ, ಬುಧವಾರ ಸಂಜೆ 5:12ಕ್ಕೆ (ಜೂನ್ 25) ತಮ್ಮ ಎಕ್ಸ್ ಖಾತೆಯಲ್ಲಿ ತರೂರ್ ಒಂದು ಪಕ್ಷಿಯ ಚಿತ್ರದೊಂದಿಗೆ ಹೀಗೆ ಬರೆದಿದ್ದಾರೆ: "ಹಾರಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮಗೆ ಸೇರಿದವು. ಮತ್ತು ಆಕಾಶ ಯಾರದೂ ಅಲ್ಲ ." ಈ ಸಂದೇಶವು ಪಕ್ಷದೊಳಗೆ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವೆಂದು ವ್ಯಾಪಕವಾಗಿ ವಿಶ್ಲೇಷಿಸಲಾಗುತ್ತಿದೆ. ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಅವರು ಪರೋಕ್ಷವಾಗಿ ಪ್ರತಿಪಾದಿಸಿದ್ದಾರೆ ಎಂದು ಕಾಣುತ್ತಿದೆ.
ತರೂರ್ ಮತ್ತು ಕಾಂಗ್ರೆಸ್ನ ಮುಸುಕಿನ ಗುದ್ದಾಟ
ಕಳೆದ ಕೆಲವು ಸಮಯದಿಂದ ಶಶಿ ತರೂರ್ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಸಂಬಂಧ ಹಳಸಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ 'ಆಪರೇಷನ್ ಸಿಂದೂರ್' ಗೆ ಸಂಬಂಧಿಸಿದ ವಿದೇಶ ಪ್ರವಾಸಕ್ಕೆ ಹೋಗುವ ಸಂಸದರ ನಿಯೋಗಕ್ಕೆ ಕೇಂದ್ರ ಸರ್ಕಾರವು ತರೂರ್ ಅವರನ್ನು ಆಯ್ಕೆ ಮಾಡಿದಾಗ ಅಸಮಾಧಾನ ಆರಂಭವಾಗಿತ್ತು. ಅಲ್ಲದೆ, ಒಂದು ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಧಾನಿ ಮೋದಿ ಅವರನ್ನು ಪ್ರಶಂಸಿಸಿ ತರೂರ್ ಬರೆದ ಲೇಖನವು ಕಾಂಗ್ರೆಸ್ ನಾಯಕತ್ವಕ್ಕೆ ಮತ್ತಷ್ಟು ಮುಜುಗರ ತಂದಿತ್ತು,