Telangana Becomes First State to Implement SC Categorisation
x

ಎಐ ರಚಿತ ಚಿತ್ರ.

ಐತಿಹಾಸಿಕ ಕಾನೂನು ಜಾರಿಗೊಳಿಸಿದ ತೆಲಂಗಾಣ; ಪರಿಶಿಷ್ಟ ಜಾತಿಯ ವರ್ಗೀಕರಣ, ಮೀಸಲಾತಿ ನಿಗದಿ

ತೆಲಂಗಾಣದಲ್ಲಿ ಒಟ್ಟು 56 ಪರಿಶಿಷ್ಟ ಜಾತಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಆಧಾರದ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ.


ರೇವಂತ್​ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರ ಏಪ್ರಿಲ್​ 14ರಂದು ಐತಿಹಾಸಿಕ ಆದೇಶವೊಂದನ್ನು ಜಾರಿಗೊಳಿಸಿದೆ. ಅಂಬೇಡ್ಕರ್ ಜಯಂತಿ ದಿನದಂದು ರಾಜ್ಯವು ಪರಿಶಿಷ್ಟ ಜಾತಿಗಳ (SC) ವರ್ಗೀಕರಣವನ್ನು ಅಧಿಕೃತವಾಗಿ ಜಾರಿಗೊಳಿಸಿದ ದೇಶದ ಮೊದಲ ರಾಜ್ಯವಾಗಿ ಇತಿಹಾಸ ನಿರ್ಮಿಸಿದೆ. ಸರ್ಕಾರವು ಈ ಸಂಬಂಧ ಒಂದು ಸರ್ಕಾರಿ ಆದೇಶ ಹೊರಡಿಸಿದ್ದು ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ತೆಲಂಗಾಣದಲ್ಲಿ ಒಟ್ಟು 56 ಪರಿಶಿಷ್ಟ ಜಾತಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಆಧಾರದ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಟ್ಟು ಶೇಕಡಾ 15 ಮೀಸಲಾತಿಯನ್ನು ಈ ಗುಂಪುಗಳ ನಡುವೆ ಈ ಕೆಳಗಿನಂತೆ ಹಂಚಲಾಗಿದೆ:

ಗುಂಪು A: ಶೇ.1 ಮೀಸಲಾತಿ

ಜನಸಂಖ್ಯೆ: 1,71,625

ಒಟ್ಟು 15 ಜಾತಿಗಳನ್ನು ಒಳಗೊಂಡಿದ್ದು, ಇವು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿವೆ.

ಗುಂಪು B: ಶೇ.9 ಮೀಸಲಾತಿ

ಜನಸಂಖ್ಯೆ: 32,74,377

ಮಾದಿಗ ಮತ್ತು ಇದರ 18 ಉಪ-ಜಾತಿಗಳನ್ನು ಒಳಗೊಂಡಿದ್ದು, ಮಧ್ಯಮವಾಗಿ ಪ್ರಯೋಜನ ಪಡೆದಿರುವ ಎಸ್‌ಸಿ ಸಮುದಾಯಗಳಿವೆ.

ಗುಂಪು C: ಶೇ.5 ಮೀಸಲಾತಿ

ಜನಸಂಖ್ಯೆ: 17,71,682

ಮಾಲ ಮತ್ತು ಇದರ 26 ಉಪ-ಜಾತಿಗಳನ್ನು ಒಳಗೊಂಡಿದ್ದು, ಗಣನೀಯವಾಗಿ ಪ್ರಯೋಜನ ಪಡೆದಿರುವ ಎಸ್‌ಸಿ ಸಮುದಾಯಗಳು.

ಸಮಿತಿಯ ಶಿಫಾರಸು

ತೆಲಂಗಾಣ ಸರ್ಕಾರವು ಈ ವರ್ಗೀಕರಣಕ್ಕಾಗಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಶಮೀಮ್ ಅಖ್ತರ್ ನೇತೃತ್ವದ ಒಂದು ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು 59 ಎಸ್‌ಸಿ ಸಮುದಾಯಗಳನ್ನು ಮೂರು ಗುಂಪುಗಳಾಗಿ (I, II, III) ವಿಂಗಡಿಸಿ, ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಟ್ಟು ಶೇ.15 ಮೀಸಲಾತಿಯನ್ನು ಹಂಚಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಆಧರಿಸಿ, ತೆಲಂಗಾಣ ವಿಧಾನಸಭೆಯು ಫೆಬ್ರವರಿ 2025ರಲ್ಲಿ ಕಾನೂನನ್ನು ಅಂಗೀಕರಿಸಿತು.

2024ರ ಆಗಸ್ಟ್ 1 ರಂದು, ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಂವಿಧಾನ ಪೀಠವು ಎಸ್‌ಸಿ ಮತ್ತು ಎಸ್‌ಟಿ ವರ್ಗೀಕರಣವು ಕಾನೂನುಬದ್ಧವಾಗಿದೆ ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಆಧಾರದ ಮೇಲೆ, ತೆಲಂಗಾಣ ಸರ್ಕಾರವು 2024ರ ಅಕ್ಟೋಬರ್‌ನಲ್ಲಿ ಶಮೀಮ್ ಅಖ್ತರ್ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯನ್ನು ಫೆಬ್ರವರಿ 3, 2025 ರಂದು ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ನೇತೃತ್ವದ ಕ್ಯಾಬಿನೆಟ್ ಉಪ-ಸಮಿತಿಗೆ ಸಲ್ಲಿಸಿತ್ತು.

ಕಾನೂನಿನ ಜಾರಿ

ಎಸ್‌ಸಿ ವರ್ಗೀಕರಣ ಕಾಯಿದೆಯು ಏಪ್ರಿಲ್ 8, 2025ರಂದು ತೆಲಂಗಾಣ ರಾಜ್ಯಪಾಲರಿಂದ ಅಂಗೀಕಾರ ಪಡೆದುಕೊಂಡಿತು. ಈ ಕಾಯಿದೆಯನ್ನು ಏಪ್ರಿಲ್ 14, 2025 ರಂದು ತೆಲಂಗಾಣ ಗೆಜೆಟ್‌ನಲ್ಲಿ ತೆಲುಗು, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಪ್ರಕಟಿಸಲಾಗಿದೆ. ಐತಿಹಾಸಿಕ ಕ್ರಮವನ್ನು ಅಂಬೇಡ್ಕರ್ ಜಯಂತಿಯಂದು ಜಾರಿಗೊಳಿಸಲಾಯಿತು, ಇದು ಸಾಮಾಜಿಕ ನ್ಯಾಯದ ಕಡೆಗಿನ ತೆಲಂಗಾಣದ ಬದ್ಧತೆ ಎಂದು ಸರ್ಕಾರ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಉತ್ತಮ್ ಕುಮಾರ್ ರೆಡ್ಡಿ, "ಇಂದಿನಿಂದ ತೆಲಂಗಾಣದಲ್ಲಿ ಎಸ್‌ಸಿ ವರ್ಗೀಕರಣವನ್ನು ಉದ್ಯೋಗ ಮತ್ತು ಶಿಕ್ಷಣದಲ್ಲಿ ಜಾರಿಗೊಳಿಸಲಾಗುವುದು. ಈ ಗೆಜೆಟ್‌ನ ಮೊದಲ ಪ್ರತಿಯನ್ನು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಇಂದು ಬೆಳಿಗ್ಗೆ ಸಚಿವಾಲಯದಲ್ಲಿ ಹಸ್ತಾಂತರಿಸಲಾಗಿದೆ," ಎಂದು ತಿಳಿಸಿದರು.

ಐತಿಹಾಸಿಕ ಕ್ರಮ

ಈ ಕ್ರಮವನ್ನು "ಐತಿಹಾಸಿಕ" ಎಂದು ಬಣ್ಣಿಸಿದ ಸಿಎಂ ರೆಡ್ಡಿ, "ಹಲವು ರಾಜಕೀಯ ಪಕ್ಷಗಳು ಎಸ್‌ಸಿ ವರ್ಗೀಕರಣದ ಬಗ್ಗೆ ಮಾತನಾಡಿದವು, ಆದರೆ ಯಾರೂ ಗಂಭೀರವಾಗಿ ಕಾರ್ಯನಿರ್ವಹಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ, ಈ ಕೆಲಸಕ್ಕೆ ಆದ್ಯತೆ ನೀಡಲಾಯಿತು. ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದಲ್ಲಿ ಕಾಯಿದೆಯನ್ನು ರೂಪಿಸಿ, ರಾಜ್ಯಪಾಲರಿಂದ ಅಂಗೀಕಾರ ಪಡೆಯಲಾಯಿತು. ಇಂದು, ಅಂಬೇಡ್ಕರ್ ಜಯಂತಿಯಂದು, ಸಾಮಾಜಿಕ ನ್ಯಾಯದ ಸಂಕೇತವಾಗಿ ಈ ಕಾಯಿದೆಯನ್ನು ಜಾರಿಗೊಳಿಸಿದ್ದೇವೆ," ಎಂದು ಹೇಳಿದ್ದಾರೆ.

ಭವಿಷ್ಯದ ಹೊಂದಾಣಿಕೆ

2026 ರ ಜನಗಣತಿಯ ಆಧಾರದ ಮೇಲೆ ಎಸ್‌ಸಿ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಮೀಸಲಾತಿಯನ್ನು ಪರಿಷ್ಕರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. "ಒಂದು ವೇಳೆ ಎಸ್‌ಸಿ ಜನಸಂಖ್ಯೆ 2026 ರಲ್ಲಿ ಹೆಚ್ಚಾದರೆ, ಮೀಸಲಾತಿಯ ಪ್ರಮಾಣವೂ ತಕ್ಕಂತೆ ಹೆಚ್ಚಾಗುತ್ತದೆ," ಎಂದು ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಕಾನೂನು ಜಾರಿಯ ಟೈಮ್‌ಲೈನ್

  • ಮಾರ್ಚ್ 17, 2025: ಸಚಿವ ದಾಮೋದರ ರಾಜನರಸಿಂಹ ಅವರು ಎಸ್‌ಸಿ ವರ್ಗೀಕರಣ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು.
  • ಮಾರ್ಚ್ 18, 2025: ವಿಧಾನಸಭೆಯು ವಿಧೇಯಕವನ್ನು ಅಂಗೀಕರಿಸಿತ್ತು.
  • ಮಾರ್ಚ್ 19, 2025: ವಿಧಾನ ಪರಿಷತ್‌ನಲ್ಲಿ ವಿಧೇಯಕವನ್ನು ಅಂಗೀಕರಿಸಲಾಯಿತು.
  • ಏಪ್ರಿಲ್ 8, 2025: ರಾಜ್ಯಪಾಲರಿಂದ ಕಾಯಿದೆಗೆ ಅಂಗೀಕಾರ.
  • ಏಪ್ರಿಲ್ 14, 2025: ಕಾಯಿದೆಯ ಗೆಜೆಟ್ ಪ್ರಕಟಣೆ ಮತ್ತು ಜಾರಿ.
Read More
Next Story